ಕನ್ನಡಪ್ರಭ ವಾರ್ತೆ ಹುಕ್ಕೇರಿ

ಈ ಭಾಗದ ರೈತರು, ಕೃಷಿ ಕಾರ್ಮಿಕರು, ಕೆಳ ಮತ್ತು ಮಧ್ಯಮ ವರ್ಗದವರ ಹಿತಾಸಕ್ತಿ ಮತ್ತು ಅವರ ಆರ್ಥಿಕ ಸದೃಢತೆಯನ್ನು ಗುರಿಯಾಗಿಟ್ಟುಕೊಂಡು ಸ್ಥಾಪಿಸಿದ ಸಾರಾಪೂರ ಶಾಂತಿನಾಥ ಕ್ರೆಡಿಟ್ ಸೌಹಾರ್ದ ಸಹಕಾರಿಯು ದಶಮಾನೋತ್ಸವ ಸಂಭ್ರಮ ಪೂರೈಸಿ ಪ್ರಗತಿಪಥದತ್ತ ಸಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ವೃಷಭ ಮುನ್ನೋಳಿ ಹೇಳಿದರು.

ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ದಶಕದ ಹಿಂದೆ ಸಾಮಾನ್ಯ ಮತ್ತು ಮಧ್ಯಮ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ ಸ್ಥಾಪಿಸಿದ ಬ್ಯಾಂಕ್ ಇದೀಗ ಹೆಮ್ಮರವಾಗಿ ಬೆಳೆದು ಅನೇಕ ಕುಟುಂಬಗಳಿಗೆ ನೆರವಾಗಿದೆ. ಇದರೊಂದಿಗೆ ಸಮಾಜದ ಎಲ್ಲ ಸಮುದಾಯಗಳ ನೋವು-ನಲಿವುಗಳಿಗೆ ಆಸರೆಯಾಗಿರುವ ಸಂಸ್ಥೆ ಗ್ರಾಹಕ-ಸದಸ್ಯರ, ಠೇವಣಿದಾರರ ಭರವಸೆಗೆ ಹೆಸರುವಾಸಿಯಾಗಿದೆ ಎಂದರು.ಈ ಸಂಸ್ಥೆಯು ತ್ವರಿತಗತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಗ್ರಾಹಕ ಸ್ನೇಹಿಯಾಗಿ ಹೊರಹೊಮ್ಮಿದೆ. ವಾಣಿಜ್ಯ ಚಟುವಟಿಕೆಯೊಂದಿಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಸೇವಾನಿರತ ಈ ಬ್ಯಾಂಕ್ ಗ್ರಾಹಕ-ಸದಸ್ಯರ ವಿಶ್ವಾಸ ಗಳಿಸಿದೆ. ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ, ಸಿಬ್ಬಂದಿಯರ ದಕ್ಷ ಪ್ರಾಮಾಣಿಕ ಸೇವೆಯಿಂದ ಬ್ಯಾಂಕ್ ಪ್ರಗತಿಯತ್ತ ಸಾಗಿದೆ ಎಂದರು.ಬ್ಯಾಂಕಿನ ಸಂಸ್ಥಾಪಕರು, ಪ್ರಧಾನ ವ್ಯವಸ್ಥಾಪಕ ಸುರೇಶ ಹೆಬ್ಬಾಳ ಮಾತನಾಡಿ, ಸಂಸ್ಥೆಯು 1394 ಸದಸ್ಯರನ್ನು ಹೊಂದಿದ್ದು ಒಟ್ಟು 94 ಕೋಟಿ 53 ಲಕ್ಷ ರೂ ಒಟ್ಟು ವಹಿವಾಟು ನಡೆಸಿದೆ. 13 ಲಕ್ಷ 41 ಸಾವಿರ ರೂ ಶೇರು ಬಂಡವಾಳ ಹೊಂದಿದ್ದು 1 ಕೋಟಿ 66 ಲಕ್ಷ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳಿವೆ. 17 ಕೋಟಿ 30 ಲಕ್ಷ ಠೇವು ಸಂಗ್ರಹಿಸಿದ್ದು 15 ಕೋಟಿ 60 ಲಕ್ಷ ರೂ ಸಾಲ ವಿತರಿಸಲಾಗಿದೆ. 2 ಕೋಟಿ 43 ಲಕ್ಷ ರೂ ಗುಂತಾವಣೆಯಿದ್ದು 21 ಕೋಟಿ 51 ಲಕ್ಷ ದುಡಿಯುವ ಬಂಡವಾಳವಿದೆ. ಕಳೆದ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟು 44 ಲಕ್ಷ 84 ಸಾವಿರ ರೂ ನಿವ್ಹಳ ಲಾಭ ಗಳಿಸಿದೆ. ಈಗಾಗಲೇ ಮುಖ್ಯ ಕಚೇರಿ ಸೇರಿ 3 ಶಾಖೆಗಳಿವೆ ಎಂದರು.ಮಾರ್ಗದರ್ಶಕ ಸಿದ್ದಪ್ಪ ಉಪಾಧ್ಯೆ, ಉಪಾಧ್ಯಕ್ಷ ಪುಟ್ಟು ಚೌಗಲಾ, ನಿರ್ದೇಶಕರಾದ ತವನಪ್ಪ ಹೆಬ್ಬಾಳ, ಅಣ್ಣಪ್ಪ ತಂಗಡಿ, ಪಾರೇಶ ಹೆಬ್ಬಾಳ, ರಾಮಗೌಡ ಪಾಟೀಲ, ಅಜೀತ ಕಲ್ಮಣಿ, ನಿಂಗಪ್ಪ ಮುನ್ನೋಳಿ, ಹಣಮಂತ ಮಗದುಮ್ಮ, ಸಿದ್ದಪ್ಪ ಸನದಿ, ಸಂತೋಷ ಚೌಗಲಾ, ನಮೃತಾ ದೇವನ್ನವರ, ಸವಿತಾ ಹೆಬ್ಬಾಳ, ರವೀಂದ್ರ ಬಾಗೇವಾಡಿ, ಶಾಖಾ ಕಾರ್ಯದರ್ಶಿಗಳಾದ ಸಂತೋಷಕುಮಾರ ಚೌಗಲಾ, ಬಾಹುಬಲಿ ಬೆಳವಿ, ಸಿದ್ದಪ್ಪ ಹಟ್ಟಿ, ಸಿಬ್ಬಂದಿಯರಾದ ಬುಜಬಲಿ ಮಗದುಮ್ಮ, ಅನಿಲ ಬುದ್ದಪ್ಪಗೋಳ, ರಾಹುಲ ಮಗದುಮ್ಮ, ಶೀತಲ ಮುನ್ನೋಳಿ, ಶಿವರಾಯಿ ಮಗದುಮ್ಮ, ಸಿದ್ಧಾರ್ಥ ಅಲಗರಾವುತ ಮತ್ತಿತರರು ಉಪಸ್ಥಿತರಿದ್ದರು.26 ರಂದು ವಾರ್ಷಿಕ ಸಭೆ

ಹುಕ್ಕೇರಿ ತಾಲೂಕು ಸಾರಾಪೂರ ಗ್ರಾಮದ ಶಾಂತಿನಾಥ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್‌ನ 2025-26ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಸಹಕಾರಿಯ ಮುಖ್ಯ ಕಚೇರಿಯಲ್ಲಿ ಇದೇ ತಿಂಗಳು ಅ.26 ರಂದು ಬೆಳಗ್ಗೆ 11ಕ್ಕೆ ಆಯೋಜಿಸಲಾಗಿದೆ.

- ಸುರೇಶ ಹೆಬ್ಬಾಳ, ಪ್ರಧಾನ ವ್ಯವಸ್ಥಾಪಕರು.