ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಛತ್ರಪತಿ ಶಿವಾಜಿ, ಶ್ರೀ ಸವಿತಾ ಮಹರ್ಷಿ ಹಾಗೂ ಸಂತ ಕವಿ ಸರ್ವಜ್ಞ ಜಯಂತಿಯನ್ನು ತಾಪಂ ಸಭಾಂಗಣದಲ್ಲಿ ಆಚರಿಸಲಾಯಿತು. ತಾಪಂ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಮಂಜುಳಾ ಚಾಲನೆ ನೀಡಿದರು.ಈ ವೇಳೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ ನಿವೃತ್ತ ಬಿಇಒ ರಾಮಶೆಟ್ಟಿ ಮಾತನಾಡಿ, ಇಂದು ಮೂವರು ಮಹನೀಯರ ಜಯಂತಿಯನ್ನು ಒಂದೇ ವೇದಿಕೆಯಲ್ಲಿ ಆಚರಿಸುತ್ತಿರುವುದು ಸ್ವಾಗತಾರ್ಹವಾದುದು, ಮಹಾತ್ಮ ಸಂತಕವಿ ಸರ್ವಜ್ಞ ಸಮಾಜದ ಅಂಕು, ಡೊಂಕು ತಿದ್ದುವಲ್ಲಿ ಪ್ರಮುಖರ ಸಾಲಿನಲ್ಲಿ ನಿಲ್ಲುತ್ತಾರೆ, ಇವರ ವಚನಗಳಲ್ಲಿ ಬದುಕಿನ ಸಾರ, ಮೌಡ್ಯದ ಬಗ್ಗೆ ಅರಿವು ಸೇರಿದಂತೆ ಅನೇಕ ವಿಚಾರಗಳನ್ನು ಕಟ್ಟಿಕೊಟ್ಟಿದ್ದಾರೆ. ಜ್ಞಾನ ಮತ್ತು ಅರಿವಿನ ಕೊರತೆ ಇದ್ದವ ಸಂಪೂರ್ಣ ಕವಿಯಾಗಲಾರ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಂತ ಕವಿ ಸರ್ವಜ್ಞರು ಹೇಳದ ವಿಚಾರಧಾರೆಗಳೆ ಇಲ್ಲ, ಅವರ ಜಯಂತಿ ಆಚರಿಸುವ ಜೊತೆಗೆ ಸರ್ವಜ್ಞರ ವಚನಗಳಲ್ಲಿನ ಸಾರವನ್ನು ಯುವ ಪೀಳಿಗೆ ಅರ್ಥೈಸಿಕೊಳ್ಳಬೇಕಿದೆ ಎಂದರು. ಸರ್ವಜ್ಞ ಕವಿ ಸಮಾಜಕ್ಕೆ 7070 (ಏಳುಸಾವಿರದ ಎಪ್ಪತ್ತಕ್ಕೂ) ಅಧಿಕ ವಚನಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಜಾತಿ, ಜಾತಿಗಳ ನಡುವೆ ಒಡೆದು ಆಳುವ ನೀತಿ ಸರಿಯಲ್ಲ: ತಹಸೀಲ್ದಾರ್ಸಮಾರಂಭ ಉದ್ಘಾಟಿಸಿದ ತಹಸಿಲ್ದಾರ್ ಮಂಜುಳಾ ಮಾತನಾಡಿ, ಜಾತಿ, ಜಾತಿಗಳ ನಡುವೆ ಹೊಡೆದು ಆಳುವ ನೀತಿ ಸರಿಯಲ್ಲ, ಸಂವಿಧಾನದ ಆಶಯದಡಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಹಬಾಳ್ವೆ ನಡೆಸಬೇಕು, ನಿಜಕ್ಕೂ ಭಾಷಣದಲ್ಲಿ , ಸರ್ವಜನಾಂಗದ ಶಾಂತಿಯ ತೋಟ ಎಂದು ವಿಶ್ಲೇಷಿಸುತ್ತಿದ್ದೇವೆ ಇದು ಸಾಕಾರಗೊಳ್ಳುತ್ತಿಲ್ಲ, ನಿಜಕ್ಕೂ ನಾವು ಶಾಂತಿ ತೋಟದಲ್ಲಿ ಇದ್ದೇವಾ ಎಂಬುದನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸಂವಿಧಾನವನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವೆಲ್ಲರೂ ಸುಭದ್ರ ದೇಶ ನಿರ್ಮಾಣಕ್ಕೆ ಮುಂದಾಗೋಣ ಎಂದರು.
ಮಾನವ ಕುಲದಲ್ಲಿ ನಾವೆಲ್ಲ ಒಂದೇ ಎಂಬ ಭಾವನೆ ಮೂಡಿದಾಗ ಮಾತ್ರ ಗಣ್ಯರ ಜಯಂತಿ ಆಚರಣೆ ಸಾರ್ಥಕ ಕಾಣಲಿದೆ, ಛತ್ರಿಪತಿ ಶಿವಾಜಿಯವರ ಸುಭದ್ರ ಆಡಳಿತ ನಡೆಸುವ ಮೂಲಕ ಹೆಸರಾಗಿದ್ದಾರೆ, ಅಂತೆಯೆ ಸವಿತಾ ಮಹರ್ಷಿಗಳು ಸಹಾ ಕಾಯಕದ ತತ್ವ ಸಾರಿದವರು, ಇಂದು ಸವಿತಾ ಸಮಾಜದ ಕಾಯಕಕ್ಕೆ ಆಧುನಿಕ ಸ್ಪರ್ಷ ದೊರೆತಿದೆ ಎಂದರು. ಗಣ್ಯರ ಜಯಂತಿಯನ್ನು ಆಚರಿಸುವ ಮೂಲಕ ಅವರ ಚಿಂತನೆಗಳನ್ನು ಕಿಂಚಿತ್ತಾದರೂ ಅಳವಡಿಸಿಕೊಳ್ಳೋಣ ಎಂದು ಹೇಳಿದರು. ಬಿಆರ್ಸಿ ಮಹದೇವಕುಮಾರ್ ಮಾತನಾಡಿ, ಸವಿತಾ ಮಹರ್ಷಿ ಚಿಂತನೆಗಳನ್ನು, ಅವರು ಸಾಗಿಬಂದ ಹಾದಿಯನ್ನು ನಾವು ಅರ್ಥೈಸಿಕೊಳ್ಳುವ ಮೂಲಕ ನವ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅವರ ಚಿಂತನೆಗಳು ಸಹಕಾರಿಯಾಗಲಿವೆ ಎಂದರು.ಈ ವೇಳೆ ನಗರಸಭೆ ಪೌರಯುಕ್ತ ರಮೇಶ್, ಸಿಪಿಐ ಶಿವಮಾದಯ್ಯ, ಗಿರಿಜನ ಕಲ್ಯಾಣಾಧಿಕಾರಿ ನವೀನ್ ಸಿ.ಮಠದ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಂದ್ರಮ್ಮ, ತೋಟಗಾರಿಕೆ ಇಲಾಖೆಯ ವಿನುತಾ , ಸಿಡಿಪಿಒ ನಂಜಮಣ್ಣಿ, ಇನ್ನಿತರರಿದ್ದರು.