ಸಾರಾಂಶ
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಅಳವಡಿಸಿರುವ ಹೋಲ್ಡಿಂಗ್ನಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಭವಿಷ್ಯದ ಮುಖ್ಯಮಂತ್ರಿ ಎಂದು ನಮೂದಿಸುವ ಮೂಲಕ ಮತ್ತೆ ಅಭಿಯಾನ ಮುಂದುವರೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮುಖ್ಯಮಂತ್ರಿ ಬದಲಾವಣೆ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ನಡುವೆಯೇ ಸಚಿವ ಸತೀಶ ಜಾರಕಿಹೊಳಿ ಅವರ ಹೆಸರು ಮುನ್ನೆಲೆಗೆ ಬಂದಿದೆ. ಈಗಾಗಲೇ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸತೀಶ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂಬ ಅಭಿಯಾನವ ಶುರು ಮಾಡಿದ್ದರು. ಇದರ ಬೆನ್ನಲ್ಲೇ ಈಗ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಅಳವಡಿಸಿರುವ ಹೋಲ್ಡಿಂಗ್ನಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಭವಿಷ್ಯದ ಮುಖ್ಯಮಂತ್ರಿ ಎಂದು ನಮೂದಿಸುವ ಮೂಲಕ ಮತ್ತೆ ಅಭಿಯಾನ ಮುಂದುವರೆಸಿದ್ದಾರೆ.ನಗರದ ಕಿತ್ತೂರು ಚನ್ನಮ್ಮ ವೃತ್ತದ ಬಳಿ ಕರವೇ ಕಾರ್ಯಕರ್ತರು ಕರ್ನಾಟಕ ರಾಜ್ಯೋತ್ಸವ, ದೀಪಾವಳಿ ಹಾಗೂ ವಾಲ್ಮೀಕಿ ಜಯಂತಿಗೆ ಶುಭ ಕೋರುವ ಬೃಹತ್ ಗಾತ್ರದ ಹೋಲ್ಡಿಂಗ್ ಅಳವಡಿಸಿದ್ದಾರೆ. ಈ ಹೋಲ್ಡಿಂಗ್ನಲ್ಲಿ ಜಾರಕಿಹೊಳಿ ಸಹೋದರರಾದ ರಮೇಶ ಜಾರಕಿಹೊಳಿ, ಭೀಮಶಿ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸತೀಶ ಜಾರಕಿಹೊಳಿ, ಲಖನ್ ಚಾರಕಿಹೊಳಿ ಭಾವಚಿತ್ರ ಮುದ್ರಿಸಲಾಗಿದೆ. ಜೊತೆಗೆ ಸಚಿವ ಸತೀಶ ಜಾರಕಿಹೊಳಿ ಪುತ್ರಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಪುತ್ರ ರಾಹುಲ್ ಜಾರಕಿಹೊಳಿ ಅವರ ಭಾವಚಿತ್ರವನ್ನೂ ಮುದ್ರಿಸಲಾಗಿದೆ. ಇದರ ನಡುವೆ ಭವಿಷ್ಯದ ಮುಖ್ಯಮಂತ್ರಿ ಸತೀಶ ಜಾರಕಿಹೊಳಿ ಎಂದು ಬರೆಯಲಾಗಿದೆ. ಇದು ಈಗ ತೀವ್ರ ಕೇಂದ್ರಿತ ವಿಷಯವಾಗಿದೆ.