ಸಾರಾಂಶ
ಹವ್ಯಕಸಭಾ ಉಡುಪಿ ವತಿಯಿಂದ ಇಲ್ಲಿನ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಸವಿತಾ ಕೆ. ಭಟ್ಟ ಅವರ ಪ್ರವಾಸ ಕಥನ ‘ಜರ್ಮನಿಯ ನೆಲದಲ್ಲಿ’ ಕೃತಿಯ ಲೋಕಾರ್ಪಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಭಾರತೀಯ ಸಂಸ್ಕೃತಿ ವಿಶ್ವದ ಸಂಸ್ಕೃತಿ, ವಿಶ್ವ ಮೈತ್ರಿಯ ಸಂಸ್ಕೃತಿ. ವಿಶ್ವದ ಎಲ್ಲ ಜೀವಿಗಳನ್ನು ಉಳಿಸಿ, ಬಳಸಿ, ಬಾಳಿಸಿ, ಬೆಳಗಿಸುವ ಸಂಸ್ಕೃತಿ. ಪುಸ್ತಕ ಮತ್ತು ಮಸ್ತಕದ ಯಾತ್ರೆ ಮತ್ತೆ ಪ್ರಾರಂಭವಾಗಬೇಕು ಎಂದು ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ಹೇಳಿದ್ದಾರೆ.ಹವ್ಯಕಸಭಾ ಉಡುಪಿ ವತಿಯಿಂದ ಇಲ್ಲಿನ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಸವಿತಾ ಕೆ. ಭಟ್ಟ ಅವರ ಪ್ರವಾಸ ಕಥನ ‘ಜರ್ಮನಿಯ ನೆಲದಲ್ಲಿ’ ಕೃತಿಯ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್, ಇಂತಹ ಪ್ರವಾಸ ಕಥನಗಳು ನಮ್ಮ ಅನುಭವದ ಪರಿಧಿ ವಿಸ್ತರಿಸುತ್ತವೆ ಎಂದರು.ಹಿರಿಯ ಸಾಹಿತಿ ಗಣಪತಿ ಭಟ್ಟ ವರ್ಗಾಸರ ಶಿರಸಿ ಕೃತಿ ಪರಿಚಯಿಸಿದರು. ಮುಖ್ಯ ಅತಿಥಿ ಮಹೇಂದ್ರ ಎನ್ ಶರ್ಮಾ ಸವಿತಾ ಭಟ್ಟರಿಂದ ಇನ್ನಷ್ಟು ಕೃತಿಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು.
ಲೇಖಕಿ ಸವಿತಾ ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಕೆ. ಸದಾಶಿವ ರಾವ್ ಕಾರ್ಯಕ್ರಮ ನಿರೂಪಿಸಿದರು. ಎಸ್. ಜಿ. ಭಾಗವತ್ ವಂದಿಸಿದರು.