ಸಾರಾಂಶ
ಸವಿತ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದ ಸಮಾಜವಾಗಿದ್ದು ಈ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಇಂದಿನ ಯಾವ ರಾಜಕೀಯ ಪಕ್ಷಗಳು ಮಾಡದೆ ಇರುವುದು ಈ ಸಮಾಜದ ದುರಂತವಾಗಿದೆ ಎಂದು ತಾಲೂಕು ಸವಿತ ಸಮಾಜದ ಅಧ್ಯಕ್ಷ ಟಿ.ರಂಗನಾಥ್ ಹೇಳಿದರು.
ಸವಿತಾ ಮಹರ್ಷಿ ಜಯಂತಿ । ತಾಲೂಕು ಆಡಳಿತ ಆಯೋಜನೆ
ಚನ್ನಗಿರಿ: ಸವಿತ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದ ಸಮಾಜವಾಗಿದ್ದು ಈ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಇಂದಿನ ಯಾವ ರಾಜಕೀಯ ಪಕ್ಷಗಳು ಮಾಡದೆ ಇರುವುದು ಈ ಸಮಾಜದ ದುರಂತವಾಗಿದೆ ಎಂದು ತಾಲೂಕು ಸವಿತ ಸಮಾಜದ ಅಧ್ಯಕ್ಷ ಟಿ.ರಂಗನಾಥ್ ಹೇಳಿದರು.ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಸವಿತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಸವಿತ ಮಹರ್ಷಿಗಳ ಜಯಂತ್ಯೋತ್ಸವ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಸವಿತ ಸಮಾಜದವರು ಕುಲ ಕಸುಬನ್ನೆ ನಂಬಿಕೊಂಡು ಇಂದಿಗೂ ಜೀವನ ಸಾಗಿಸುತ್ತಿದ್ದು ನಮ್ಮನ್ನಾಳುವ ಸರ್ಕಾರಗಳು ನಮ್ಮ ಸಣ್ಣ ಸಮಾಜವನ್ನು ಗುರುತಿಸದೆ ಇರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
ಇಂತಹ ಜಯಂತಿಗಳ ಆಚರಣೆಯಿಂದ ಸಮುದಾಯದ ಜನರನ್ನು ಸಂಘಟಿಸಲು ಸಹಕಾರವಾಗಿದ್ದು ಕಡಿಮೆ ಜನಸಂಖ್ಯೆ ಹೊಂದಿರುವ ಸವಿತ ಸಮಾಜದವರು ಸಂಘಟಿತರಾದಾಗ ಮಾತ್ರ ನಮ್ಮ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.ತಾಲೂಕು ಸವಿತ ಸಮಾಜದ ಮುಖಂಡ ಸುಬ್ರಮಣ್ಯ ಮಾತನಾಡಿ, ಸವಿತ ಸಮಾಜ ತನ್ನದೆ ಆದ ಪರಂಪರೆ ಹೊಂದಿದ್ದು ಸವಿತ ಮಹರ್ಷಿಗಳು ನಮ್ಮ ಸಮಾಜದ ಮೂಲ ಪುರುಷರಾಗಿದ್ದು ಸವಿತ ಮಹರ್ಷಿಗಳು ದೇವಾನು ದೇವತೆಗಳಿಗೆ ಕ್ಷೌರ ಮಾಡುತ್ತಿದ್ದರು ಎಂಬ ನಂಬಿಕೆ ಇದೆ, ಅಲ್ಲದೆ ದೇವತೆಗಳ ಜೊತೆಯಲ್ಲಿ ತಪಸ್ಸು ಮಾಡುತ್ತಿದ್ದ ಮಹಾನ್ ಪುರುಷ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರೇಡ್ 2 ತಹಸೀಲ್ದಾರ್ ರುಕ್ಮಿಣಿಬಾಯಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸವಿತ ಸಮಾಜದ ಮುಖಂಡರಾದ ವೆಂಕಟೇಶ್, ರಮೇಶ್, ಮಂಜುನಾಥ್, ಮಾರೇಶ್, ಶಿರಸ್ತೇದಾರ್ ಮೋಹನ್, ರುದ್ರಸ್ವಾಮಿ, ಸುವರ್ಣ ಪ್ರಕಾಶ್, ಸಿಬ್ಬಂದಿ ಹಾಜರಿದ್ದರು.