ಸಾರಾಂಶ
- ಬೈಕ್ನಲ್ಲಿ ವೃದ್ಧೆ ಚಿನ್ನದ ಸರ ಸುಲಿಗೆ ಮಾಡಿದ್ದ ತೋಳಹುಣಸೆ ಆರೋಪಿಗಳು - - - ದಾವಣಗೆರೆ: ಒಬ್ಬಂಟಿ ವೃದ್ಧೆ ನಡೆದು ಹೋಗುತ್ತಿದ್ದಾಗ 35 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಸರಗಳ್ಳರನ್ನು ಬಂಧಿಸಿ, ಚಿನ್ನದ ಸರ ಹಾಗೂ ಬೈಕ್ ಸೇರಿದಂತೆ ₹3.50 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಕೆಟಿಜೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ತೋಳಹುಣಸೆ ಗ್ರಾಮದ ಪೇಂಟಿಂಗ್ ಕೆಲಸಗಾರ ಕೆ.ಗಜೇಂದ್ರ (25), ವಿಜಯ ನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ನಿವಾಸಿ, ಮೂಲತಃ ತೋಳಹುಣಸೆ ಗ್ರಾಮದ ಕೂಲಿ ಕೆಲಸಗಾರ ಹನುಮಂತ ನಾಯ್ಕ (35) ಬಂಧಿತ ಆರೋಪಿಗಳು.
ಇಲ್ಲಿನ ಜೀವನ ಭೀಮಾ ನಗರದ 2ನೇ ಮುಖ್ಯ ರಸ್ತೆಯಲ್ಲಿ 67 ವರ್ಷದ ವೃದ್ಧೆ ಜಿ.ಎಸ್.ನಾಗರತ್ನ ಸತ್ಯನಾರಾಯಣ ರಾವ್ ಅವರು ನಡೆದುಹೋಗುತ್ತಿದ್ದರು. ಈ ವೇಳೆ ಗಜೇಂದರ ಹಾಗು ಹನುಮಂತ ನಾಯ್ಕ ಬೈಕ್ನಲ್ಲಿ ಬಂದು, ನಾಗರತ್ನ ಅವರ ಕೊರಳಲಿದ್ದ 35 ಗ್ರಾಂ ತೂಕದ ಚಿನ್ನದ ಸರ ಅಪಹರಿಸಿದ್ದರು. ಈ ಬಗ್ಗೆ ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.ಜಿಲ್ಲಾ ಎಸ್ಪಿ ಉಮಾ ಪ್ರಶಾಂತ, ಎಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ಡಿವೈಎಸ್ಪಿ ಬಿ.ಶರಣ ಬಸವೇಶ್ವರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆ ನಿರೀಕ್ಷಕ ಎಚ್.ಎಸ್. ಸುನೀಲಕುಮಾರ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿ ಒಳಗೊಂಡ ತಂಡವು ಆರೋಪಿಗಳಾದ ಕೆ.ಗಜೇಂದ್ರ, ಹನುಮಂತ ನಾಯ್ಕನನ್ನು ಬಂಧಿಸಿದ್ದಾರೆ.
ದಾವಣಗೆರೆ ಭೂಮಿಕಾ ನಗರ ಚೆಕ್ ಪೋಸ್ಟ್ನಲ್ಲಿ ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದರು. ಆಗ ಕೆಟಿಜೆ ನಗರ ಠಾಣೆ ವ್ಯಾಪ್ತಿಯಲ್ಲಿ ವೃದ್ಧ ಮಹಿಳೆಯಿಂದ ಸುಲಿಗೆ ಮಾಡಿದ್ದ ₹2.50 ಲಕ್ಷ ಮೌಲ್ಯದ ₹34,730 ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಕಳವು ಮಾಡಿಕೊಂಡು ಬಂದಿದ್ದ ₹1 ಲಕ್ಷ ಮೌಲ್ಯದ ಪಲ್ಸರ್ ಬೈಕ್ ಸೇರಿದಂತೆ ₹3.50 ಲಕ್ಷ ಮೌಲ್ಯದ ಸ್ವತ್ತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕೆಟಿಜೆ ನಗರ ಠಾಣೆ ಇನ್ಸ್ಪೆಕ್ಟರ್ ಎಚ್.ಎಸ್.ಸುನೀಲಕುಮಾರ, ಪಿಎಸ್ಐ ಆರ್.ಲತಾ, ಸಿಬ್ಬಂದಿ ಸುರೇಶ ಬಾಬು, ಮಹಮ್ಮದ್ ರಫಿ, ಗಿರೀಶ ಗೌಡ, ಸಿದ್ದಪ್ಪ, ಮಂಜಪ್ಪ, ಡಿ.ಬಿ.ನಾಗರಾಜ, ಗೀತಾ, ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್ನ ಸಿಬ್ಬಂದಿ ಮಾರುತಿ, ಸೋಮು ಅವರ ಕರ್ತವ್ಯಪ್ರಜ್ಞೆಯ್ನನು ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.
- - - -22ಕೆಡಿವಿಜಿ2.ಜೆಪಿಜಿ:ದಾವಣಗೆರೆಯಲ್ಲಿ ಕೆಟಿಜೆ ನಗರ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಂಡ ಇಬ್ಬರು ಸರಗಳ್ಳರನ್ನು ಬಂಧಿಸಿ, ₹3.5 ಲಕ್ಷ ಮೌಲ್ಯದ ಚಿನ್ನದ ಸರ, ಬೈಕ್ ಜಪ್ತಿ ಮಾಡಿದರು.