ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮಕ್ಕಳಿಗೆ ಪೌಷ್ಟಿಕ ಆಹಾರವಾಗಿ ವಿತರಿಸಲು ಮೊಟ್ಟೆ ಬೇಯಿಸಲು ಆಗುತ್ತಿದ್ದ ಪರದಾಟ ತಪ್ಪಿಸಲು ಗ್ಯಾಸ್‌ ಸಿಲಿಂಡರ್‌, ಸ್ಟವ್‌, ಪಾತ್ರೆ ಖರೀದಿಗೆ ಸರ್ಕಾರ ಅಸ್ತು ಎಂದಿದ್ದು, ಇನ್ನುಮುಂದೆ ಆಯಾ ಶಾಲೆಗಳಲ್ಲಿಯೇ ಶಿಕ್ಷಕರ ಮುಂದಾಳತ್ವದಲ್ಲಿ ಮೊಟ್ಟೆ ಬೇಯಿಸಬೇಕಿದೆ.

ಸದ್ಯ ರಾಜ್ಯ ಸರ್ಕಾರ ಧಾರವಾಡ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿದ್ದು, ಅನುದಾನ ಬಿಡುಗಡೆ ಮಾಡಿದೆ. ಇಲ್ಲಿನ ಯಶಸ್ಸನ್ನು ನೋಡಿ ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದೆ. ಗ್ಯಾಸ್‌ ರೀಫಿಲ್ಲಿಂಗ್‌ ಜವಾಬ್ದಾರಿ ಹೊರೆಸಿರುವುದು ಶಿಕ್ಷಕರಲ್ಲಿ ಚಿಂತೆ ಹುಟ್ಟುಹಾಕಿದ್ದು, ಇಸ್ಕಾನ್‌, ಅದಮ್ಯ ಚೇತನ ಮೂಲಕ ಬಿಸಿಯೂಟ ಸರಬರಾಜು ಆಗುತ್ತಿದ್ದ ಶಾಲೆಗಳಲ್ಲಿ ಬೇಯಿಸಿದ ಮೊಟ್ಟೆ ಪಡೆಯುತ್ತಿದ್ದ ಶಿಕ್ಷಕರಲ್ಲೂ ಈ ಹೊಸ ಹೊಣೆಗಾರಿಕೆ ದಿಗಿಲು ಹುಟ್ಟಿಸಿದೆ.

ಏನಿದು ಯೋಜನೆ?:


ಪ್ರತಿ ಮಕ್ಕಳಿಗೂ ಪೌಷ್ಟಿಕ ಆಹಾರ ಸಿಗಬೇಕೆಂಬ ಉದ್ದೇಶದಿಂದ ಬೇಯಿಸಿದ ಮೊಟ್ಟೆ ಕೊಡುವ ಯೋಜನೆಯನ್ನು ಸರ್ಕಾರ 2022ರಲ್ಲಿ ಜಾರಿಗೊಳಿಸಿತು. ಪ್ರತಿ ಮೊಟ್ಟೆಗೆ ₹6 ಕೊಡಲಾಗುತ್ತಿತ್ತು. ಮೊಟ್ಟೆ ಖರೀದಿಸಿ, ಬೇಯಿಸಿ, ಸುಲಿದು ಮಕ್ಕಳಿಗೆ ಕೊಡಬೇಕು. ಯಾವ ಶಾಲೆಗಳಲ್ಲಿ ಬಿಸಿಯೂಟ ತಯಾರಾಗುತ್ತದೆಯೋ ಅಲ್ಲಿ ಸಮಸ್ಯೆಯಾಗಿರಲಿಲ್ಲ. ಆದರೆ, ಇಸ್ಕಾನ್‌, ಅದಮ್ಯ ಚೇತನಗಳಂತಹ ಸಂಸ್ಥೆಗಳು ಬಿಸಿಯೂಟ ಕೊಡುವ ಶಾಲೆಗಳಲ್ಲಿ ಮೊಟ್ಟೆ ಬೇಯಿಸಿ ಕೊಡುವುದು ದೊಡ್ಡ ಸಮಸ್ಯೆಯಾಗಿತ್ತು. ಹೀಗಾಗಿ, ಶಾಲೆಗಳಿಗೆ ಮೊಟ್ಟೆ ಬೇಯಿಸುವ ಪರಿಕರ ಕೊಡಬೇಕೆಂಬ ಬೇಡಿಕೆ ಇತ್ತು. ಅದಕ್ಕೆ ಸ್ಪಂದಿಸಿದ್ದ ರಾಜ್ಯ ಸರ್ಕಾರ 2025-26ರ ಬಜೆಟ್‌ನಲ್ಲಿ ಅನುದಾನ ಘೋಷಿಸಿದ್ದು, ಗ್ಯಾಸ್‌ ಸಿಲಿಂಡರ್‌, ಒಲೆ, ಪಾತ್ರೆ ಖರೀದಿಗೆ ಹಣ ನೀಡಿದೆ.

ರೀಫಿಲ್ಲಿಂಗ್‌ ಶಿಕ್ಷಕರ ಹೆಗಲಿಗೆ:

ಪ್ರತಿ ಮೊಟ್ಟೆಗೆ ₹6 ಕೊಡಲಾಗುತ್ತದೆ. ಇದರಲ್ಲಿ ಮೊಟ್ಟೆಗೆ ₹5, ಇಂಧನಕ್ಕೆ 50 ಪೈಸೆ, ಬೇಯಿಸಿದ ಮೊಟ್ಟೆ ಸುಲಿಯಲು 30 ಪೈಸೆ, ಸಾಗಾಣಿಕೆಗೆ 20 ಪೈಸೆ ನಿಗದಿಪಡಿಸಿದೆ. ಸದ್ಯಕ್ಕೇನು ಗ್ಯಾಸ್‌ ಸ್ಟವ್‌, ಸಿಲಿಂಡರ್‌ ಖರೀದಿಗೆಲ್ಲ ದುಡ್ಡನ್ನು ನೀಡುತ್ತಿದೆ. ಖಾಲಿಯಾದ ಸಿಲಿಂಡರ್‌ ರೀಫಿಲ್ಲಿಂಗ್‌ಗೆ ಇಂಧನದ 50 ಪೈಸೆಯಲ್ಲೇ ಸರಿದೂಗಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. ಮೊಟ್ಟೆ ದರ ಏರಿಳಿಕೆಯಾಗುತ್ತಿರುತ್ತದೆ. ಆಗ ಗ್ಯಾಸ್‌ ರೀಫಿಲ್ಲಿಂಗ್‌ಗೆ ಹಣ ಉಳಿಯುವುದೇ ಇಲ್ಲ. ರೀಫಿಲ್ಲಿಂಗ್‌ ಕೈಯಿಂದ ನೀಡಬೇಕೇ? ಎಂಬ ಪ್ರಶ್ನೆ ಶಿಕ್ಷಕರದ್ದು.ಕೋಟ್‌:

ಧಾರವಾಡ ಜಿಲ್ಲೆಯಲ್ಲಿ 1128 ಶಾಲೆಗಳಿದ್ದು, ಇವುಗಳಲ್ಲಿ 140 ಶಾಲೆಗಳಲ್ಲಿ ಈಗಾಗಲೇ ಪರಿಕರಗಳಿವೆ. ಉಳಿದೆಡೆ ಗ್ಯಾಸ್‌ ಸಿಲಿಂಡರ್‌, ಸ್ಟವ್‌, ಪಾತ್ರೆ ಖರೀದಿಸಲು ₹2.51 ಕೋಟಿ ಬಿಡುಗಡೆ ಮಾಡಲಾಗಿದೆ. - ರೂಪಾ ಪುರಮಕರ, ಶಿಕ್ಷಣಾಧಿಕಾರಿಗಳು, ಪಿಎಂ ಪೋಷಣ, ಧಾರವಾಡ.

ಕೋಟ್‌:ಮೊಟ್ಟೆ ಬೇಯಿಸಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಇದೀಗ ಪರಿಕರ ಖರೀದಿಗೆ ಅನುದಾನ ನೀಡಿರುವುದು ಸಂತಸಕರ. ಆದರೆ, ಗ್ಯಾಸ್ ರೀಫಿಲ್ಲಿಂಗ್‌ಗೂ ಹಣ ನೀಡಬೇಕು. ಇಲ್ಲವೇ ಮೊಟ್ಟೆ ದರವನ್ನಾದರೂ ಹೆಚ್ಚಿಸಿದರೆ ಸೂಕ್ತ.- ಮಂಜುನಾಥ ಜಂಗಲಿ, ಅಧ್ಯಕ್ಷರು, ತಾಲೂಕು ಶಿಕ್ಷಕರ ಸಂಘ.