ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಮಕ್ಕಳಿಗೆ ಶಿಕ್ಷಣದ ಜ್ಞಾನ ನೀಡಬೇಕಾದ ಶಾಲೆಗಳು ದೇಗುಲಗಳಾದೇ ವ್ಯಾಪಾರ ಮಾಡುವ ವಾಣಿಜ್ಯ ಕೇಂದ್ರಗಳಾಗಿ ಬದಲಾಗುತ್ತಿವೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದ ಚೆನ್ನಮ್ಮ ಎಜುಕೇಶನ್ ಟ್ರಸ್ಟ್ , ಚೆನ್ನಮ್ಮ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಬಹುತೇಕ ಶಾಲೆಗಳಿಗೆ ಬಂಡವಾಳಶಾಹಿಗಳು ಬಂಡವಾಳ ಹೂಡಿ ಹಣ ಗಳಿಸುವ ದಾರಿಯನ್ನು ಕಂಡುಕೊಂಡಿರುವುದು ಅಪಾಯಕಾರಿ ಬೆಳವಣಿಗೆ ಎಂದು ಎಚ್ಚರಿಸಿದರು.
ಶಾಲೆಗಳು ದೇವಾಲಯಗಳಾಗದಾಗ ಮಾತ್ರ ಮಕ್ಕಳಲ್ಲಿ ಭಯ, ಭಕ್ತಿ, ಗೌರವ, ನೈತಿಕತೆ ಕಾಣಬಹುದು. ಒಂದು ವೇಳೆ ವ್ಯಾಪಾರೀಕರಣ ವಾದರೆ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.ದೇಶದಲ್ಲಿ ಶಿಕ್ಷಣಕ್ಕೆ ಕೊರತೆ ಇಲ್ಲ. ಸರ್ಕಾರ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ. ಖಾಸಗಿ ಶಾಲೆಯವರು ಕೂಡ ದುಡ್ಡಿಗೆ ತಕ್ಕಂತೆ ಶಿಕ್ಷಣ ನೀಡುತ್ತಿದ್ದಾರೆ. ಯುವಕರು ಸಮಾಜದಿಂದ ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆದರೆ, ಸುಶಿಕ್ಷಿತ ಕೆಲ ಯುವಜನರು ಸಮಾಜಕ್ಕೆ ಕಂಟಕಪ್ರಾಯರಾಗಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕಲಿಕೆಗೆ ವಯಸ್ಸಿನ ಮಿತಿ ಇಲ್ಲ. ಓದುವ ಹವ್ಯಾಸದಿಂದ ಜ್ಞಾನಾರ್ಜನೆ ವೃದ್ಧಿಯಾಗುತ್ತದೆ. ಒಳ್ಳೆಯ ಆಲೋಚನೆ ಮಾಡುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಇದರಿಂದ ನಾವು ಮಾಡುವ ಒಳ್ಳೆಯ ಕೆಲಸಗಳು ಉಪಯೋಗಕ್ಕೆ ಬರುತ್ತವೆ ಎಂದರು.ಸಮಾರಂಭದಲ್ಲಿ ವಿದ್ಯಾರ್ಥಿಗಳು ಸಿನಿಮಾ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದರು. ಜಿಪಂ ಮಾಜಿ ಸದಸ್ಯ ಸಿ.ಮಾದಪ್ಪ, ಕಲಾವಿದ ಬೋರೇಗೌಡ, ತಾಪಂ ಮಾಜಿ ಸದಸ್ಯ ಮಾದೇಗೌಡ, ಉಪನ್ಯಾಸಕ ಅರುಣ್ ಆರಾಧ್ಯ, ಹುಳ್ಳೇನಹಳ್ಳಿ ನಾಗರಾಜು, ಎಂ.ಪಿ. ಚಂದ್ರಶೇಖರ್, ವಿವೇಕ್, ಹ.ಮಹದೇವು, ವೆಂಕಟೇಶ್, ನರಸಿಂಹ ,ಟ್ರನ ಕಾರ್ಯದರ್ಶಿ ವೈ.ಯಂ. ರತ್ನ ಜಯಶಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.