ಹೊನ್ನಾವರ: ಪ್ರತಿಯೊಂದು ಮಾನವನ ದೈನಂದಿನ ಬದುಕಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಅತ್ಯಗತ್ಯವಾಗಿದ್ದು, ವಿಜ್ಞಾನ ತಂತ್ರಜ್ಞಾನ ಹೊರತುಪಡಿಸಿದ ಜೀವನ ಊಹಿಸಲೂ ಅಸಾಧ್ಯವಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್. ಕಿರಣ್ಕುಮಾರ್ ಹೇಳಿದರು.
ತಾಲೂಕಿನ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಸಂಸ್ಕೃತಿ ಕುಂಭ - ಮಲೆನಾಡ ಉತ್ಸವ - 2026 ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಸ್ವತಂತ್ರಗೊಂಡ ಬಳಿಕ ವಿಜ್ಞಾನ ತಂತ್ರಜ್ಞಾನದ ಕಡೆಗೆ ಗಮನ ಹರಿಸುವುದಕ್ಕಿಂತ ದೇಶದ ಮೂಲ ಸೌಕರ್ಯಗಳ ಅಭಿವೃದ್ಧಿ, ಬಡತನ ನಿವಾರಣೆ, ಜನರ ಜೀವನ ಮಟ್ಟ ಸುಧಾರಿಸುವ ಸವಾಲುಗಳು ಹೆಚ್ಚಿದ್ದವು. ಆದರೂ ದೇಶದ ವಿಜ್ಞಾನಿಗಳ ಪ್ರಯತ್ನದಿಂದ ದೇಶವು ಅಲ್ಪಾವಧಿಯಲ್ಲಿಯೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿವೆ. ಇತ್ತೀಚೆಗೆ ಬಾಹ್ಯಾಕಾಶದಲ್ಲಿ ದೇಶದ ಸಾಧನೆ ವಿಶ್ವದ ಗಮನ ಸೆಳೆಯುತ್ತಿದೆ ಎಂದು ಅವರು ಶ್ಲಾಘಿಸಿದರು.ಇಂದು ಪ್ರತಿಯೊಬ್ಬನ ಜೀವನ ವಿಜ್ಞಾನ ತಂತ್ರಜ್ಞಾನವನ್ನು ಅವಲಂಬಿಸಿದೆ. ವಿಜ್ಞಾನ-ತಂತ್ರಜ್ಞಾನ ಹೊರತು ಜೀವನವೇ ಇಲ್ಲ ಎಂಬಂತಾಗಿದೆ. ದೇಶದಲ್ಲಿ ವಿಜ್ಞಾನ-ತಂತ್ರಜ್ಞಾನದಲ್ಲಿ ಇನ್ನಷ್ಟು ಹೊಸ ಅವಿಷ್ಕಾರಗಳು ನಡೆಯಬೇಕಿದೆ. ಅದಕ್ಕಾಗಿ ಮಕ್ಕಳಲ್ಲಿ ವಿಜ್ಞಾನ, ತಂತ್ರಜ್ಞಾನದ ಮೇಲಿನ ಆಸಕ್ತಿಯನ್ನು ಹೆಚ್ಚಿಸಿದಾಗ ಮುಂದೆ ಹೊಸ ಹೊಸ ಅವಿಷ್ಕಾರಗಳಿಗೆ ನಾಂದಿಯಾಗುತ್ತದೆ ಎಂದು ಅವರು ಹೇಳಿದರು.
ಶ್ರೀ ಮಾರುತಿ ಗುರೂಜಿ ಅವರು ಬಂಗಾರಮಕ್ಕಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಧ್ಯಾತ್ಮಿಕ ಜಾಗೃತಿ ಬೆಳೆಸಿದ್ದಾರೆ. ಆಧ್ಯಾತ್ಮಿಕತೆಯ ಜತೆಗೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಗಳನ್ನು ನಡೆಸುತ್ತಿರುವ ಗುರೂಜಿ ಅವರ ಸೇವೆಯು ಇಡೀ ದೇಶಕ್ಕೇ ಮಾದರಿಯಾಗಿದೆ. ಎರಡು ದಶಕಗಳಿಂದ ನಡೆಸುತ್ತಿರುವ ''''ಸಂಸ್ಕೃತಿ ಕುಂಭ - ಮಲೆನಾಡ ಉತ್ಸವʼ ಕಾರ್ಯಕ್ರಮದಲ್ಲಿ ವಿಜ್ಞಾನ ವಸ್ತು ಪ್ರದರ್ಶನದ ಮೂಲಕ ವಿಜ್ಞಾನ ತಂತ್ರಜ್ಞಾನದ ಬಗ್ಗೆ ಗ್ರಾಮೀಣ ಮಕ್ಕಳಲ್ಲಿ ಅರಿವು ಮತ್ತು ಆಸಕ್ತಿ ಮೂಡಿಸುತ್ತಿರುವುದು ಮಾರುತಿ ಗುರೂಜಿ ಅವರಲ್ಲಿ ಅಡಗಿರುವ ದೂರದೃಷ್ಟಿಯ ಸಂಕೇತವಾಗಿದೆ. ಈ ಕಾರ್ಯಗಳು ಶ್ರೀ ಕ್ಷೇತ್ರದ ಮೂಲಕ ಇನ್ನಷ್ಟು ಉತ್ತಮವಾಗಿ ಹಾಗೂ ಯಶಸ್ವಿಯಾಗಿ ನೆರವೇರಲಿ ಎಂದು ವಿಜ್ಞಾನಿ ಕಿರಣ್ ಕುಮಾರ್ ಶುಭ ಹಾರೈಸಿದರು.ಮಾಜಿ ಶಾಸಕ ಸುನಿಲ್ ನಾಯ್ಕ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜನ ವಿರೋಧಿ ಮಾತ್ರವಲ್ಲದೆ ಪಶ್ಚಿಮಘಟ್ಟಕ್ಕೆ ಮಾರಕವಾಗಿದೆ. ಇದರ ವಿರುದ್ಧ ಮಾರುತಿ ಗುರೂಜಿ ಅವರು ಗಟ್ಟಿ ಧ್ವನಿಯಾಗಿದ್ದಾರೆ. ಈ ಮೂಲಕ ಹೋರಾಟಕ್ಕೆ ಅವರು ಶಕ್ತಿ ತುಂಬಿದ್ದಾರೆ. ಕ್ಷೇತ್ರವನ್ನು ಕೇವಲ ಧಾರ್ಮಿಕ ಆಚರಣೆ ಮತ್ತು ಜಾತ್ರೆಗೆ ಸೀಮಿತಗೊಳಿಸದೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವುದು ಸಮಾಜಕ್ಕೆ ಮಾದರಿಯಾಗಿ ರೂಪಿಸಿದ್ದಾರೆ. ಮಾರುತಿ ಗುರೂಜಿ ಅವರ ಈ ಕೆಲಸ ಕಾರ್ಯದಲ್ಲಿ ಈ ಊರಿನ ಪರ ಊರಿನ ಜನತೆ ಕೈ ಜೋಡಿಸಬೇಕು ಎಂದು ಹೇಳಿದರು.
ಬೆಂಗಳೂರು ಶ್ರೀ ಸಹಸ್ರಾರ ಯೋಗೀಶ್ವರ ಸ್ವಾಮಿ ಮಹಾಪೀಠಂ ಶ್ರೀ ಯೋಗೀಶ್ವರ ಮಹಾಸ್ವಾಮಿ ಉಪದೇಶ ನೀಡಿ, ನಾನು ನನ್ನದು ಎಂಬ ಪದ ಮಾರಕವಾಗಿದೆ. ನಾವು ನಮ್ಮದು ಎಂಬ ಕಲ್ಪನೆ ಜನರಲ್ಲಿ ಮೂಡಬೇಕು. ಹೀಗಾದಾಗ ಸಮಾಜದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯವಾಗುತ್ತದೆ. ಅನ್ನದಾನ, ವಿದ್ಯಾದಾನ ಸಹಿತ ಹತ್ತಾರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಈ ಕ್ಷೇತ್ರದೊಂದಿಗೆ ನಾವೆಲ್ಲರೂ ಜತೆಗೂಡಬೇಕು ಎಂದು ಹೇಳಿದರು.
ಶ್ರೀ ಕ್ಷೇತ್ರ ಬಂಗಾರಮಕ್ಕಿ ಧರ್ಮಾಧಿಕಾರಿ ಮಾರುತಿ ಗುರೂಜಿ ಅಧ್ಯಕ್ಷತೆ ವಹಿಸಿದ್ದರು.