ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಸಹನೆ ರೂಢಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯುತ್ತಮ ವೇದಿಸ್ಯಾಗಿದೆ ಎಂದು ಸಮೀರವಾಡಿಯ ಕೆ.ಜೆ. ಸೋಮಯ್ಯಾ ಶಾಲೆಯ ಪ್ರಾಚಾರ್ಯ ಸಿ.ಅನಿಲಕುಮಾರ ಹೇಳಿದರು.
ಸಮೀಪದ ಸಮೀರವಾಡಿಯ ಕೆ ಜೆ ಸೋಮಯ್ಯಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ನ ಐದು ದಿನಗಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಧ್ವಜರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ಕೌಟ್ಸ್ ಮತ್ತು ಗೈಡ್ಸ್ ಪಕ್ಷಾತೀತ ಸಂಸ್ಥೆಯಗಿದ್ದು, ಜಾತಿ, ಧರ್ಮಗಳನ್ನು ಮೀರಿದ ವೈಚಾರಿಕ ಪ್ರಜ್ಞೆ ಮೂಡಿಸುವ ಸಂಸ್ಥೆಯಾಗಿದೆ. ಇದರ ಚಟುವಟಿಕೆಗಳು ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿವೆ. ವಿಶ್ವದೆಲ್ಲೆಡೆ ವ್ಯಾಪಿಸಿರುವ ಸಂಸ್ಥೆಯ ಸಂಘಟನೆ ಬಲಪಡಿಸಲು ಪ್ರತಿ ಶಾಲೆಯಲ್ಲಿ ಘಟಕ ತೆರೆದು ಬಲವರ್ಧನೆ ಮಾಡಬೇಕಿದೆ. ವಿದ್ಯಾರ್ಥಿಗಳನ್ನು ವಿಶ್ವ ಮಾನವರನ್ನಾಗಿ ಸಜ್ಜುಗೊಳಿಸಲು, ಅವರಲ್ಲಿ ಸೇವಾ ಮನೋಭಾವ ಬೆಳೆಸಿ ದೇಶಕ್ಕೆ ಕೊಡುಗೆ ನೀಡಲು ಸಜ್ಜುಗೊಳಿಸಬೇಕಿದೆ ಎಂದು ಹೇಳಿದರು.ಸ್ಕೌಟ್ಸ್ ಮಾಸ್ಟರ್ ಸುರೇಶ ಬಾಡಗಿ ಮಾತನಾಡಿ, ಇಂಗ್ಲೆಂಡ್ ನಿವೃತ್ತ ಸೇನಾಧಿಕಾರಿಯಾಗಿದ್ದ ಲಾರ್ಡ್ ಬೇಡನ್ ಪೋವೆಲ್ರಿಂದ 1907ರಲ್ಲಿ ಗಂಡು ಮಕ್ಕಳ ಸ್ಕೌಟ್ಸ್ ಆರಂಭವಾಯಿತು. ಪ್ರಯೋಗಾರ್ಥವಾಗಿ 20 ಹುಡುಗರಿಗೆ ಬ್ರೌನ್ ಸೀ ದ್ವೀಪದಲ್ಲಿ ಕ್ಯಾಂಪ್ ಮಾಡಿ ಶಿಕ್ಷಣ ಕೊಡಲಾಯಿತು. ಅದರ ಉಪಯುಕ್ತತೆ ಕಂಡು ಬಂದಿದ್ದರಿಂದ ಅವರು ಸ್ಕೌಟಿಂಗ್ ಫಾರ್ ಬಾಯ್ಸ್ ಎಂಬ ಸ್ಕೌಟ್ಸ್ ಶಿಕ್ಷಣದ 15 ದಿನದ ನಿಯತಕಾಲಿಕ ಪುಸ್ತಕ ಪ್ರಕಟಿಸಿದರು. ಇದು ಮುಂದೆ ಸ್ಕೌಟ್ಸ್ ನ ಶಿಕ್ಷಣ ಮತ್ತು ಚಳವಳಿಗೆ ನಾಂದಿಯಾಯಿತು ಎಂದು ಹೇಳಿದರು.
ಗೈಡ್ ಮಾಸ್ಟರ್ ಸ್ವಪ್ನಾ ಅನಿಗೋಳ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿಶ್ವಾವ್ಯಾಪಿಯಾಗಿ ಬೆಳೆದು ಜಗತ್ತಿಗೆ ಶಿಸ್ತಿನ ಪಾಠ ಕಲಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಭಾರತದಲ್ಲಿ 1950ರಲ್ಲಿ ಮೊದಲ ಬಾರಿಗೆ ಆರಂಭವಾದರೆ ಕರ್ನಾಟಕದಲ್ಲಿ 1917ರಲ್ಲೇ ಸ್ಕೌಟ್ ಚಳವಳಿ ಆರಂಭವಾಯಿತು. ದ ಬಾಯ್ಸ್ ಸ್ಕೌಟ್ಸ್ ಆಫ್ ಮೈಸೂರು ಎಂಬ ಹೆಸರಿನ ಸಂಸ್ಥೆಗೆ ಅಂದಿನ ಮಹಾರಾಜರಾಗಿದ್ದ ಶ್ರೀ ಕೃಷ್ಣದೇವರಾಜ ಒಡೆಯರ್ ಪೋಷಕರಾಗಿದ್ದರು. ತಮ್ಮ ಆಡಳಿತದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸ್ಕೌಟ್ಸ್ ಚಟುವಟಿಕೆಗಳನ್ನು ಆರಂಭಿಸಬೇಕೆಂದು ರಾಜಾಜ್ಞೆ ಹೊರಡಿಸಿದ್ದರು ಎಂದರು.ದೀಕ್ಷೆ: ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಸ್ಕೌಟ್ ಮಾಸ್ಟರ್ ಸುರೇಶ ಬಾಡಗಿ ಅವರು ದೀಕ್ಷೆ ಬೋಧಿಸಿದರು. ಗೈಡ್ ಮಾಸ್ಟರ್ ತಬಸುಮ್ ಘೋರಿ ಗೈಡ್ಗಳಿಗೆ ದೀಕ್ಷೆ ಬೋಧಿಸಿದರು.
ಶಿಬಿರಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಗ್ನಿ ಶಿಬಿರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಕಲೆಯಪ್ರತಿಭೆ ಪ್ರದರ್ಶಿಸಿದರು. ಹಗ್ಗದ ತುದಿ ಕಟ್ಟುವುದು, ಹಗ್ಗದಿಂದ ಗಂಟು ರಚಿಸುವುದು, ಸ್ಕೌಟ್ಸ್ ಪ್ರಾರ್ಥನೆ ಮತ್ತು ಧ್ವಜ ಗೀತೆ, ರಾಷ್ಟ್ರಗೀತೆ, ಧ್ವಜಗಳ ಬಗ್ಗೆ ಮಾಹಿತಿ ನೀಡಲಾಯಿತು.ಕಾರ್ಯಕ್ರಮದಲ್ಲಿ ಸ್ಕೌಟ್ ಮಾಸ್ಟರ್ ಎಂ.ಬಿ. ಹಿಡಕಲ್, ಸ್ಕೌಟ್ ಮಾಸ್ಟರ್ ಗಳಾದ ಶಿವಲಿಂಗಪ್ಪ ಜುಟ್ನಟ್ಟಿ, ಕಿರಣ ನಾಯಕ ,ಶಿವಲಿಂಗಪ್ಪ ಚುಟ್ನಟ್ಟಿ, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.