ಸಾರಾಂಶ
ಹಲವು ವರ್ಷಗಳಿಂದ ರೈತರು ಉಳುಮೆ ಮಾಡುತ್ತಿರುವ ಸರ್ಕಾರಿ ಜಮೀನನ್ನು ಬಗರ್ಹುಕುಂ ಅಡಿ ಮುಸ್ಲಿಂರಿಗೆ ಮಂಜೂರು ಮಾಡುವ ಅಧಿಕಾರಿಯನ್ನು ನೇಣಿಗೇರಿಸುತ್ತೇನೆ ಎಂದು ಹೇಳಿರುವ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಹೇಳಿಕೆ ಖಂಡಿಸಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಹಲವು ವರ್ಷಗಳಿಂದ ರೈತರು ಉಳುಮೆ ಮಾಡುತ್ತಿರುವ ಸರ್ಕಾರಿ ಜಮೀನನ್ನು ಬಗರ್ಹುಕುಂ ಅಡಿ ಮುಸ್ಲಿಂರಿಗೆ ಮಂಜೂರು ಮಾಡುವ ಅಧಿಕಾರಿಯನ್ನು ನೇಣಿಗೇರಿಸುತ್ತೇನೆ ಎಂದು ಹೇಳಿರುವ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಹೇಳಿಕೆ ಖಂಡಿಸಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಎಸ್.ಡಿ.ಪಿ.ಐ. ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಮಾತನಾಡಿ, ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡರವರು ಅಲ್ಪಸಂಖ್ಯಾತ ಮುಸ್ಲಿಂ ಸಮಾಜವನ್ನು ಅವಹೇಳನ ಮಾಡಿರುವುದನ್ನು ವಿರೋಧಿಸುತ್ತೇವೆ. ಇವರನ್ನು ಪಕ್ಷದಿಂದ ಉಚ್ಚಾಟಿಸಲು ಹಾಗೂ ಶಾಸಕ ಸ್ಥಾನದಿಂದ ಅನರ್ಹ ಗೊಳಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ರಮೇಶ್ ಬಂಡಿಸಿದ್ದೇಗೌಡರವರು ಸಾರ್ವಜನಿಕವಾಗಿ ಮುಸಲ್ಮಾನ್ ಸಮಾಜದ (ಸಾಬರ)ರವರಿಗೆ ಬಗರ್ಹುಕುಂ ಯೋಜನೆಯಡಿ ಕೆಲವು ಮುಸ್ಲಿಂ ಸಮಾಜದವರು ಅಧಿಕಾರಿಗಳಿಗೆ ದಾಖಲೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದನ್ನು ಅಧಿಕಾರಿಗಳಿಗೆ ಪ್ರಶ್ನೆ ಮಾಡುತ್ತಿರುವ ಶಾಸಕರು, ಬಹಿರಂಗವಾಗಿ ಸಾಬರಿಗೆ ಬಗರ್ ಹುಕ್ಕುಂ ಸರ್ಕಾರಿ ಜಮೀನಿಗೆ ಸಂಬಂಧಿಸಿ ಯಾರಾದರೂ ದಾಖಲೆ ಮಾಡಿಕೊಟ್ಟರೆ ಅಂತಹವರನ್ನು ನೇಣಿಗೆ ಹಾಕುತ್ತೇನೆಂದು ಸಂವಿಧಾನ ವಿರೋಧಿ ಹಾಗೂ ಅಲ್ಪಸಂಖ್ಯಾ ತರ ವಿರೋಧಿ ಹೇಳಿಕೆಯಾಗಿದೆ ಎಂದು ದೂರಿದರು.ಇದು ಕೇವಲ ಹೇಳಿಕೆಯಲ್ಲ. ಇದು ಭಾರತದ ಸಂವಿಧಾನಾತ್ಮಕ ಮೌಲ್ಯ ಗಳ ಧರ್ಮನಿರಾಪೇಕ್ಷತೆಯ ವಿರುದ್ಧ ನೇರ ಪ್ರಹಾರವಾಗಿದೆ. ಯಾವ ಕಾರಣಕ್ಕೂ ಸಾಂವಿಧಾನ ಪ್ರೇಮಿಗಳು ಹಾಗೂ ಮುಸ್ಲಿಂ ಸಮುದಾಯ ಇದನ್ನು ಒಪ್ಪುವುದಿಲ್ಲ ಎಂದರು. ಆದಷ್ಟು ಬೇಗ ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ಶಜೀಲ್ ಅಹ್ಮದ್, ಕಾರ್ಯದರ್ಶಿ ಇರ್ಫಾನ್ ಪಾಷಾ, ರಾಜ್ಯ ಉಪಾಧ್ಯಕ್ಷ ತನ್ನೀರ್, ಸಹ ಕಾರ್ಯದರ್ಶಿ ಸಲೀಂ ಹಾಸನ್, ಸತ್ತಾರ ಗುಲಾಬ್, ಸೈಯದ್ ಫರೀದ್, ಅಮೀರ್ ಜಾನ್, ಅಲ್ಮಲ್ ಜಾವೀದ್, ಸಮೀರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.