ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಉನ್ನತ ಶಿಕ್ಷಣದ ವೃತ್ತಿ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ಮೊದಲು ವಿದ್ಯಾರ್ಥಿಗಳು, ಹಿರಿಯರು, ಪೋಷಕರ ಸಲಹೆ, ಮಾರ್ಗದರ್ಶನ ಪಡೆಯಬೇಕು ಎಂದು ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಮಂಜುನಾಥ್ ಹೇಳಿದರು.ನಗರದ ಪಿಇಎಸ್ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ಪಿಇಎಸ್ ವಿಜ್ಞಾನ,ಕಲಾ ಮತ್ತು ವಾಣಿಜ್ಯ ಕಾಲೇಜು ಆಯೋಜಿಸಿದ್ದ ಪಿಇಎಸ್ ಉತ್ಸವ-2024 ಮತ್ತು ಪ್ರತಿಭಾ ಪುರಸ್ಕಾರ-ಪಾರಂಪರಿಕ ದಿನೋತ್ಸವ ಹಾಗೂ ಸಾಂಸ್ಕೃತಿಕ ಮತ್ತು ಕೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ತಮಗೆ ಇಷ್ಟವಾದ ವೃತ್ತಿಕೋರ್ಸ್ ಆಯ್ಕೆ ಮಾಡಿಕೊಳ್ಳಲು ಪೋಷಕರು ಮತ್ತು ಅಧ್ಯಾಪಕರು ಹಾಗೂ ಹಿರಿಯರ ಹಿತವಚನಗಳನ್ನು ಪಡೆದುಕೊಳ್ಳಿ ಎಂದರು.ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಓದುವುದಲ್ಲಿ ಮುಂದಿದ್ದೀರಿ. ಕಾಲೇಜಿಗೆ ಕೀರ್ತಿ ತಂದು ತಂದೆ ತಾಯಿಗಳಿಗೆ ಖುಷಿಯಾಗುವ ರೀತಿ ಅಂಕಗಳನ್ನು ಪಡೆದಿದ್ದೀರಿ. ಅದೇ ರೀತಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆದು ಉತ್ತಮ ಅಧಿಕಾರಿಗಳಾಗಿ, ಉದ್ಯಮಿಗಳಾಗಿ, ಓದಿದ ಕಾಲೇಜುಗಳತ್ತ ಬನ್ನಿ ಎಂದು ಹಿತವಚನ ನುಡಿದರು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ.ವೀರೇಶ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲೇ ಸೇವಾ ಚಟುವಟಿಕೆಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಶಾಲಾ ಕಾಲೇಜು ಹಂತದಲ್ಲಿ ರೋರ್ಸ್, ಎನ್.ಸಿಸಿ. ಎನ್ ಎಸ್ ಎಸ್, ಯುವರೆಡ್ಕ್ರಾಸ್ನಂತಹ ಸೇವಾ ತಂಡಗಳಲ್ಲಿ ಗುರುತಿಸಿಕೊಂಡರೆ ನಾಯಕತ್ವ ಗುಣ ನಿಮ್ಮಲ್ಲಿ ಬೆಳೆಯುತ್ತದೆ ಎಂದು ಕಿವಿಮಾತು ಹೇಳಿದರು.ಈ ವೇಳೆ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ಧರ್ಮದರ್ಶಿಗಳಾದ ಶಿವಣ್ಣ, ಮುದ್ದೇಗೌಡ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ.ವಿ.ಸವಿತಾ, ಕ್ರೀಡಾ ಸಮಿತಿ ಸಂಚಾಲಕ ಡಾ.ಆರ್.ರಮೇಶ್, ಡಾ.ಜಿ.ವಿ.ನರಸಿಂಹನ್, ಪ್ರೊ.ಚಂದ್ರಶೇಖರ್, ಪ್ರೊ.ನಂದೀಶ್ ಸೇರಿದಂತೆ ಅಧ್ಯಾಪಕವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.