ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರಇಲ್ಲಿನ ಮೂಡ್ಲಕಟ್ಟೆಯ ಐ. ಎಂ. ಜೆ. ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಸಂಸ್ಥೆ ಇದರ ಕ್ರೀಡಾ ಸಂಘ ಮತ್ತು ಯೋಗ ಹಾಗೂ ಆಧ್ಯಾತ್ಮ ವೇದಿಕೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣೆ ವಿಷಯದ ಕುರಿತು ಇತ್ತೀಚೆಗೆ ಕಾರ್ಯಾಗಾರ ಜರುಗಿತು.ಹೆಸರಾಂತ ಕರಾಟೆಯ ಸಾಧಕರು ಹಾಗೂ ಉಡುಪಿ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿರಣ್ ಕುಂದಾಪುರ ಅವರು ಈ ಕಾರ್ಯಾಗಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕ್ರೀಡೆಯಲ್ಲಿ ಮಹತ್ತರ ಸ್ಥಾನದಲ್ಲಿರುವ ಕರಾಟೆ ಮತ್ತು ಸ್ವಯಂ ರಕ್ಷಣೆಯ ಕಲೆಯನ್ನು ಕೇಂದ್ರ ವಿಷಯವನ್ನಾಗಿಟ್ಟುಕೊಂಡು ಅದರ ಪ್ರಯೋಜನದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಮುಖ್ಯ ಕರಾಟೆ ತರಬೇತುದಾರರು ಮತ್ತು ಜೀವನ ಸಲಹೆಗಾರರಾದ ಸಂದೀಪ್ ವಿ. ಕಿರಣ್ ಅವರು ಕರಾಟೆಯ ಮೂಲಕ ಸ್ವಯಂ ರಕ್ಷಣೆ ಹೇಗೆ ಮಾಡಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿಸಿದರು.ವೇದಿಕೆಯಲ್ಲಿ ಇನ್ನೊಬ್ಬ ಕರಾಟೆ ತರಬೇತುದಾರರಾದ ಸವಿತಾ ಖಾರ್ವಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ಉಪ ಪ್ರಾಂಶುಪಾಲರಾದ ಪ್ರೊ. ಜಯಶೀಲ್ ಕುಮಾರ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರವೀಣ್ ಖಾರ್ವಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವು ಪ್ರಥಮ ಬಿ ಸಿ ಎ ವಿಭಾಗದ ವಿದ್ಯಾರ್ಥಿನಿ ಭಾನುಮತಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಪ್ರಥಮ ಬಿ ಸಿ ಎ ವಿದ್ಯಾರ್ಥಿನಿ ಸಿಂಚನ ಹಾಗೂ ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಪ್ರತಿಭಾ ಅವರು ಅತಿಥಿಗಳ ಕಿರು ಪರಿಚಯವನ್ನು ಮಂಡಿಸಿದರು. ದ್ವಿತೀಯ ಬಿಸಿಎ ವಿಭಾಗದ ವಿದ್ಯಾರ್ಥಿನಿ ನೇತ್ರಾವತಿ ನಿರೂಪಿಸಿದರು. ಈ ಕಾರ್ಯಾಗಾರದಿಂದಾಗಿ ವಿದ್ಯಾರ್ಥಿಗಳು ಸ್ವ ರಕ್ಷಣೆಯ ಬಗ್ಗೆ ಆತ್ಮವಿಶ್ವಾಸ ಪಡೆದುಕೊಂಡರು.