ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶೋಷಿತ ಸಮುದಾಯಗಳು ಸ್ವಾಭಿಮಾನದಿಂದ ಬದುಕಬೇಕಾದ ಅನಿವಾರ್ಯತೆ ಇದೆ. ಅಲಕ್ಷಿತ ಸಮುದಾಯಗಳನ್ನು 12 ನೇ ಶತಮಾನದಲ್ಲಿ ಬಸವಾದಿ ಶಿವಶಣರು ಅನುಭವ ಮಂಟಪ ಮತ್ತು ಮಹಾಮನೆಗೆ ಮುಕ್ತ ಪ್ರವೇಶಾವಕಾಶ ನೀಡುವ ಮೂಲಕ ತಳ ಸಮುದಾಯದವರ ಬದುಕಿನ ಬೆಳಕಾಗಿದ್ದರು ಎಂದು ಜಗದ್ಗುರು ಮುರಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.ಅಖಿಲ ಕರ್ನಾಟಕ ಶ್ರೀ ಗುರು ಮೇದರ ಕೇತೇಶ್ವರ ಟ್ರಸ್ಟ್ ನ ವತಿಯಿಂದ ನಗರದ ಕೇತೇಶ್ವರ ಸಮುದಾಯ ಭವನದಲ್ಲಿ ನಡೆದ ಕೇತೇಶ್ವರ ಜಯಂತಿ, ಮೇದರ ಸಂಸ್ಕೃತಿ ವೈಭವ ಹಾಗೂ ಲಿಂಗೈಕ್ಯ ಹನುಮಂತಯ್ಯ ಕೇತೇಶ್ವರ ಸ್ವಾಮೀಜಿಯವರ 36 ನೇ ಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಕುಲ ಕಸುಬುಗಳ ಜೊತೆಗೆ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸುವತ್ತ ಎಲ್ಲರೂ ಗುರಿ ನೆಡಬೇಕಿದೆ. ಈ ಹಿಂದಿನ ಬಸವಪ್ರಭು ಕೇತೇಶ್ವರ ಮಹಾಸ್ವಾಮಿಗಳು ಸಮಾಜವನ್ನು ಬಹಳ ಶ್ರಮವಹಿಸಿ ಸಂಘಟಿತರನ್ನಾಗಿ ಮಾಡಿದ್ದಾರೆ. ಅದು ಹಾಗೆಯೇ ಮುಂದುವರಿದುಕೊಂಡು ಹೋಗಬೇಕು ಎಂದರು.ಶಿವಶರಣ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಬಸವಾದಿ ಶಿವಶರಣರು ಎಲ್ಲಾ ವರ್ಗಗಳಿಗೆ ಸ್ವಾಭಿಮಾನವನ್ನು ಕೊಟ್ಟು ಹೋಗಿದ್ದಾರೆ. ನಮಗೆ ಸಿಗಬೇಕಾದ ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಾ, ಸಂಕೋಚವನ್ನು ಬಿಟ್ಟು ಎಲ್ಲ ಕ್ಷೇತ್ರಗಳಲ್ಲಿ ಸ್ಥಾನ ಪಡೆಯಬೇಕು. ಯಾವ ಪೋಷಕರು ಸಹ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಬೇಡಿ. ಸಣ್ಣ ಸಮುದಾಯಗಳಲ್ಲಿ ಒಗ್ಗಟ್ಟು ಇದ್ದರೆ ಗುರಿ ಸಾಧಿಸುವ ಮೂಲಕ ಗೆಲುವನ್ನು ಪಡೆಯಬಹುದು ಎಂದು ತಿಳಿಸಿದರು.
ಇಮ್ಮಡಿ ಬಸವ ಪ್ರಭುಕೇತೇಶ್ವರ ಸ್ವಾಮೀಜಿ ಮಾತನಾಡಿ, ಹಿಂದಿನ ನಮ್ಮ ಮಹಾಸ್ವಾಮಿಗಳವರು ಹಾಕಿ ಕೊಟ್ಟಿರುವ ದಾರಿಯಲ್ಲಿ ಸಾಗುತ್ತಿದ್ದು ಸಮಾಜದ ಮುಖಂಡರು, ಭಕ್ತರು ಶ್ರೀಮಠಕ್ಕೆ ಆಗಾಗ ಬರುತ್ತಾ ಸಲಹೆ ಸಹಕಾರ ನೀಡುತ್ತಿರಬೇಕು ಎಂದರು.ಈ ಸಂದರ್ಭದಲ್ಲಿ ಛಲವಾದಿ ಗುರು ಪೀಠದ ಬಸವನಾಗಿದೇವ ಮಹಾಸ್ವಾಮಿ, ಲಂಬಾಣಿ ಗುರುಪೀಠದ ಸರ್ದಾರ್ ಸೇವಾಲಾಲ್ ಮಹಾಸ್ವಾಮಿ, ಮೇದರ ಕೇತೇಶ್ವರ ಗುರುಪೀಠ ಟ್ರಸ್ಟ್ ಅಧ್ಯಕ್ಷ ಸಿ.ಪಿ ಪಾಟೀಲ್ ಹಾಗೂ ವಿವಿಧ ಮಠಗಳ ಸ್ವಾಮೀಜಿಗಳು, ಮೇದರ ಜನಾಂಗದ ಮುಖಂಡರು ಹಾಜರಿದ್ದರು.