ಕನ್ನಡಪ್ರಭ ವಾರ್ತೆ ಅಥಣಿ

ತಳ ಸಮುದಾಯಗಳು ಸ್ವಾವಲಂಬಿ ಬದುಕು ಕಟ್ಟಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಉದ್ಯಮಶೀಲತೆಯನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಆರ್.ಎಚ್.ಕುಲಕರ್ಣಿ ಭವನದಲ್ಲಿ ಎಸ್ಸಿ-ಎಸ್ಟಿ ಹಬ್, ಎಂಎಸ್‌ಎಂಇ ಹಾಗೂ ಅಖಿಲ ಕರ್ನಾಟಕ ಚರ್ಮಕಾರ ಸಮಾಜ ಮಹಾ ಒಕ್ಕೂಟ ಅಸೋಸಿಯೇಷನ್ ಆಯೋಜಿಸಿದ್ದ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಂಎಸ್‌ಎಂಇ ನೋಂದಣಿ ಮಾಡಿಕೊಂಡು ಪ್ರಮಾಣಪತ್ರ ಪಡೆದವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆದು ಉದ್ಯಮಿಗಳಾಗಿ ಬೆಳೆಯಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕರು ಉದ್ಯೋಗ ಅರಸುವವರಾಗದೇ, ಉದ್ಯೋಗ ಸೃಷ್ಟಿಸುವವರಾಗಬೇಕು ಎಂದು ಕಿವಿಮಾತು ಹೇಳಿದರು.ಮಹಿಳೆಯರು ಹಾಗೂ ಸಣ್ಣ ಉದ್ಯಮಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಸಾಲ ಯೋಜನೆಗಳನ್ನು ರೂಪಿಸಿದ್ದು, ಕೆಲ ಯೋಜನೆಗಳಲ್ಲಿ ₹10 ಕೋಟಿ ವರೆಗೆ ಸಾಲ ಸೌಲಭ್ಯವೂ ಲಭ್ಯವಿದೆ. ಈ ಅವಕಾಶಗಳನ್ನು ಸಮುದಾಯದ ಜನರು ಸದುಪಯೋಗಪಡಿಸಿಕೊಂಡು ತಮ್ಮ ಉದ್ಯಮಗಳನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಅಭಿವೃದ್ಧಿಯ ಅನೇಕ ಅವಕಾಶಗಳು ದೊರೆತಿವೆ. ಆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಗಟ್ಟಿಯಾದ ಸ್ಥಾನಮಾನ ಗಳಿಸಬೇಕು ಎಂದು ತಿಳಿಸಿದರು.ಅಖಿಲ ಕರ್ನಾಟಕ ಚರ್ಮಕಾರ ಸಮಾಜ ಮಹಾ ಒಕ್ಕೂಟದ ಅಧ್ಯಕ್ಷ ಅನೀಲ ಸೌದಾಗರ ಮಾತನಾಡಿ, ಸಮಗಾರ (ಚರ್ಮಕಾರ) ಸಮುದಾಯವು ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿದ್ದು, ಸರ್ಕಾರದ ಸೌಲಭ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಬೇಕಾಗಿದೆ. ಸಮುದಾಯದ ಪ್ರತಿಯೊಬ್ಬರೂ ಉದ್ಯಮಿಗಳಾಗಿ ಬೆಳೆಯುವ ಉದ್ದೇಶದಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಜಾಗೃತಿ ಕಾರ್ಯಕ್ರಮಗಳನ್ನು ತಾಲೂಕು ಮಟ್ಟಕ್ಕೆ ತರಲಾಗಿದೆ ಎಂದು ಹೇಳಿದರು.ಬೆಳಗಾವಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ ಗೋಡಕೆ ಮಾತನಾಡಿ, ಉದ್ಯಮಶೀಲತೆಯಲ್ಲಿ ಯಶಸ್ಸು ಸಾಧಿಸಲು ಎಂಎಸ್‌ಎಂಇ ಪ್ರಮಾಣಪತ್ರ ಅತ್ಯಗತ್ಯವಾಗಿದೆ. ಇದರ ಮೂಲಕ ವಿವಿಧ ಯೋಜನೆಗಳು, ಸಬ್ಸಿಡಿಗಳು ಹಾಗೂ ಸಾಲ ಸೌಲಭ್ಯಗಳನ್ನು ಪಡೆಯಬಹುದು. ಬ್ಯಾಂಕುಗಳೊಂದಿಗೆ ಉತ್ತಮ ವ್ಯವಹಾರಿಕ ಸಂಬಂಧ ಹೊಂದಿ, ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುವ ಮೂಲಕ ಹೆಚ್ಚಿನ ಆರ್ಥಿಕ ನೆರವು ಪಡೆಯಲು ಸಾಧ್ಯವಾಗುತ್ತದೆ.

ಸ್ವಸಹಾಯ ಸಂಘಗಳಿಗೆ ₹20 ಲಕ್ಷದವರೆಗೆ ಸಾಲ ಸೌಲಭ್ಯ ಲಭ್ಯವಿದ್ದು, ಆತ್ಮನಿರ್ಭರ ಭಾರತ ಸೇರಿದಂತೆ ವಿವಿಧ ಯೋಜನೆಗಳ ಪ್ರಯೋಜನವನ್ನು ಮಹಿಳೆಯರು ಹಾಗೂ ಸಣ್ಣ ಉದ್ಯಮಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಎಸ್ಸಿ-ಎಸ್ಟಿ ಹಬ್ ಯೋಜನೆಗಳ ಕುರಿತು ಮಾಹಿತಿ ನೀಡಲಾಗಿದ್ದು, ಉದ್ಯಮ ಆರಂಭಿಸಲು ಅಗತ್ಯವಿರುವ ನೋಂದಣಿ, ಪ್ರಮಾಣಪತ್ರಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಅರಿವು ಮೂಡಿಸಲಾಯಿತು ಈ ಸಂದರ್ಭದಲ್ಲಿ ಕೆ. ಸುರೇಶ್, ಜ್ಯೋತಿಷಕುಮಾರ ಶರ್ಮಾ, ಮುರುಗೇಶ, ಭೀಮರಾವ್, ಪ್ರಶಾಂತ ಘೋಡಕೆ, ಸತೀಶ ಬಸಗೌಡರ, ಎಸ್.ಪಿ ಮಾಂಗ್, ಸುಂಜಾತ, ಶೇಖರ ಸೌದಾಗರ, ಗಜಾನನ ಮಂಗಸೂಳಿ, ರಮೇಶ ಸಿಂದಗಿ, ಬಸವರಾಜ ಬುಟಾಳಿ, ಸುನಿತಾ ಐಹೊಳೆ, ಶಿವಾನಂದ ಸೌದಾಗರ, ದಿಲೀಪ್ ಕಾಂಬಳೆ, ರಾಕೇಶ್ ಸೌದಾಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.----

ಕೋಟ್‌ರಾಜ್ಯ ಲಿಡ್ಕರ್ ನಿಗಮಕ್ಕೆ ಅನೇಕ ವರ್ಷಗಳಿಂದ ಅಧ್ಯಕ್ಷ ಸ್ಥಾನಕ್ಕೆ ನೇಮಕ ನಡೆದಿಲ್ಲ, ಸಿಎಂ ಡಿ.ಕೆ.ಶಿವಕುಮಾರ ಅವರು ತಮ್ಮ ಆಡಳಿತದಲ್ಲಿ ಲಿಡ್ಕರ್ ನಿಗಮಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕು. ಇದರಿಂದ ಚರ್ಮೋದ್ಯೋಗ ಕೈಗಾರಿಕೆಯಲ್ಲಿ ಪಾಲ್ಗೊಂಡ ಅನೇಕ ಬಡ ಹಾಗೂ ಮಧ್ಯಮ ಕುಟುಂಬಗಳಿಗೆ ಇನ್ನಷ್ಟು ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಸಹಕಾರಿಯಾಗುತ್ತದೆ. - ಅನಿಲ್ ಸೌದಾಗರ, ರಾಜ್ಯಾಧ್ಯಕ್ಷರು,ಅಖಿಲ ಕರ್ನಾಟಕ ಚರ್ಮಕಾರ ಸಮಾಜ ಮಹಾ ಒಕ್ಕೂಟ