ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಮಹಿಳೆಯರು ಆರ್ಥಿಕ, ಸಾಮಾಜಿಕವಾಗಿ ಸದೃಢರಾಗಿ ಸ್ವಾವಲಂಬಿಗಳಾಗಬೇಕೆಂಬ ದೃಷ್ಟಿಯಿಂದ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಮೂಲಕ ಹಲವಾರು ಯೋಜನೆಗಳನ್ನು ರೂಪಿಸಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.ತಾಲೂಕಿನ ಬಿದರೆಗುಡಿ ಕಾವಲು ಕೃಷಿ ವಿಜ್ಞಾನ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಸೃಜನಶೀಲ ಕಾರ್ಯಕ್ರಮದ ಮೂಲಕ ತೆಂಗಿನ ಚಿಪ್ಪಿನಿಂದ ಗೃಹ ಬಳಕೆ ಹಾಗೂ ಅಲಂಕಾರಿಕ ವಸ್ತು ತಯಾರಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಸ್ವಾವಲಂಬಿ ಜೀವನ ನಿರ್ವಹಣೆಗೆ ಮಹಿಳಾ ಸಬಲೀಕರಣಗಳದಂತಹ ಕಾರ್ಯಕ್ರಮಗಳು ಅವಶ್ಯವಾಗಿದ್ದು ಮಹಿಳೆಯರು ಸ್ವಾವಲಂಬಿಗಳಾಗಿ ಸಮಾಜದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಂತಹ ಕೌಶಲ್ಯ ತರಬೇತಿಗಳು ಮುಖ್ಯ ಪಾತ್ರವಹಿಸುತ್ತವೆ. ಆದ್ದರಿಂದ ಇಂತಹ ಅವಕಾಶಗಳನ್ನು ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಉಪಯೋಗಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದರು. ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರಾದ ಡಾ. ಗೋವಿಂದೆಗೌಡ ಮಾತನಾಡಿ, ಮಹಿಳೆಯರು ಗುಂಪು ಚಟುವಟಿಕೆ ಮೂಲಕ ಹಾಗೂ ವೈಕ್ತಿಕವಾಗಿ ಹೇಗೆ ಸ್ವ ಉದ್ಯೋಗ ಮಾಡಬೇಕು. ಮತ್ತು ಮಾಡಿರುವ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ತಿಳಿಸಿದ ಅವರು, ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅನೇಕ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ ಎಂದರು. ಎಂಎಸ್ಸಿ ಫ್ಯಾಶನ್ ಡಿಜೈನರ್ ಜಯಲಕ್ಷ್ಮೀರವರು ತೆಂಗಿನ ಚಿಪ್ಪಿನಿಂದ ತರಬೇತಿಗೆ ಬೇಕಾಗುವ ಸಾಮಗ್ರಿಗಳ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಕೆವಿಕೆ ವಿಜ್ಞಾನಿ ಡಾ.ಸಿಂಧು, ತಾಲೂಕಿನ ಯೋಜನಾಧಿಕಾರಿ ಕೆ. ಉದಯ್, ಜ್ಞಾನ ವಿಕಾಸ ಸಮನ್ವಯಧಿಕಾರಿ ಪದ್ಮಾವತಿ, ಮಹಿಳಾ ಉದ್ಯಮಿ ನವೀನ, ಭಾರತಿ ಯೋಗಾನಂದ, ಆರ್ಥಿಕ ಸಾಕ್ಷಾರತ ಕೇಂದ್ರದ ಸಮಾಲೋಚಕರಾದ ರೇಖಾ, ಕುಸುಮ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಮಹಾದೇವಮ್ಮ, ಮೇಲ್ವಿಚಾರಕ ಪರಶಿವಮೂರ್ತಿ, ಸೇವಾಪ್ರತಿನಿಧಿಗಳಾದ ಪ್ರಮೀಳಾ, ರೇಣುಕಾ ಸೇರಿದಂದತೆ ಮಹಿಳೆಯರು ಭಾಗವಹಿಸಿದ್ದರು.