ಕನ್ನಡಪ್ರಭ ವಾರ್ತೆ ಮುಧೋಳ
ಚುನಾವಣೆಯಲ್ಲಿ ಹಣ ನೀಡಿ ಮತ ಪಡೆಯುವ ಪ್ರವೃತ್ತಿ ಇಂದಿನ ದಿನಗಳಲ್ಲಿ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಈ ಹಣಬಲದ ಸಂಸ್ಕೃತಿ ಹೀಗೆಯೇ ಮುಂದುವರಿದರೇ ದೇಶದ ಪವಿತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಗುವುದು ಖಚಿತ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಕಳವಳ ವ್ಯಕ್ತಪಡಿಸಿದರು.ನಗರದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ರಾಜಕೀಯ ಹಾಗೂ ಶಿಕ್ಷಣ ವ್ಯವಸ್ಥೆಯ ಕುಸಿತದ ಬಗ್ಗೆ ಹರಿತವಾದ ಮಾತುಗಳಲ್ಲಿ ಬೇಸರ ವ್ಯಕ್ತಪಡಿಸಿದರು.ಶಾಲೆಗಳು ಜ್ಞಾನ ದೇಗುಲಗಳಾಗುವ ಬದಲು ವಿವಾದಗಳ ಕೇಂದ್ರವಾಗುತ್ತಿವೆ. ಹಿಜಾಬ್, ಜನಿವಾರ, ಕುಂಕುಮದಂತಹ ಭಾವನಾತ್ಮಕ ಮತ್ತು ಅನಗತ್ಯ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಅನಗತ್ಯ ಚರ್ಚೆಗಳಿಂದಾಗಿ ನೈಜ ಗುಣಮಟ್ಟದ ಶಿಕ್ಷಣ ಮೂಲೆಗುಂಪಾಗುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ದೈಹಿಕ ಶಿಕ್ಷಕರ ಕೊರತೆ ಎಷ್ಟಿದೆಂದರೇ ಬೆರಳೆಣಿಕೆಯಷ್ಟು (ಕೇವಲ ಇಬ್ಬರು) ದೈಹಿಕ ಶಿಕ್ಷಕರಿದ್ದಾರೆ ಎಂಬ ಮಾಹಿತಿ ಆಘಾತಕಾರಿ. ದೈಹಿಕ ಶಿಕ್ಷಣವಿಲ್ಲದೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರು.ತಾಯ್ನುಡಿ ಕನ್ನಡ ಪತ್ರಿಕೆಯಲ್ಲೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾಗುತ್ತಿರುವುದು ನಮ್ಮ ಶಿಕ್ಷಣ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬುವುದಕ್ಕೆ ಹಿಡಿದ ಕೈಗನ್ನಡಿ. ಇದು ಸರ್ಕಾರ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಎಂದರು.
ಹಿಂದಿನ ಸರ್ಕಾರಗಳು ಶಿಕ್ಷಣದ ಮೂಲಸೌಕರ್ಯ ಮತ್ತು ಶಿಕ್ಷಕರ ನೇಮಕಾತಿಗೆ ನೀಡುತ್ತಿದ್ದ ಮಹತ್ವವನ್ನು ಇಂದಿನ ಆಡಳಿತ ಮರೆತಂತಿದೆ. ಕೇವಲ ಅಂಕಗಳಿಕೆಯೇ ಶಿಕ್ಷಣವಲ್ಲ, ಅದು ಮೌಲ್ಯಯುತ ಬದುಕನ್ನು ರೂಪಿಸಬೇಕು. ಆದರೆ, ರಾಜಕೀಯ ಪ್ರೇರಿತ ವಿಚಾರಗಳಿಂದ ಶಿಕ್ಷಣದ ಹಾದಿ ತಪ್ಪುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ಶಿಕ್ಷಣದ ಪವಿತ್ರತೆಯನ್ನು ಉಳಿಸಲು ಸರ್ಕಾರ ಮತ್ತು ಸಮಾಜ ಈಗಲೇ ಎಚ್ಚೆತ್ತುಕೊಳ್ಳದಿದ್ದರೇ ಮುಂದಿನ ಪೀಳಿಗೆಗೆ ನಾವು ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ.
-ಬಸವರಾಜ ಹೊರಟ್ಟಿ, ಸಭಾಪತಿಗಳು, ವಿಧಾನ ಪರಿಷತ್.