ಮಕ್ಕಳನ್ನು ಪ್ರತಿನಿತ್ಯ ತಪ್ಪದೇ ಶಾಲೆಗೆ ಕಳುಹಿಸಿ

| Published : Jun 18 2025, 11:49 PM IST

ಸಾರಾಂಶ

ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಲೋಕಾಪುರ

ತಂದೆ-ತಾಯಂದಿರು ಮಕ್ಕಳನ್ನು ಶಾಲೆಗೆ ಸೇರಿಸಿದರೆ ಸಾಲದು, ಪ್ರತಿನಿತ್ಯ ತಪ್ಪದೇ ಶಾಲೆಗೆ ಕಳುಹಿಸುವುದು ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಮುಲ್ಲಾ ಹೇಳಿದರು.

ಸಮೀಪದ ಲಕ್ಷಾನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರವೇಶ ಪಡೆದ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್, ಮಕ್ಕಳ ಹೆಸರಲ್ಲಿ ₹೧೦೦೦ ಡಿಪಾಜಿಟ್, ಸ್ಕೂಲ್‌ ಬ್ಯಾಗ್‌, ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು. ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಹೇಳಿದರು.

ಸಿಆರ್‌ಸಿ ಗಂಗಾಧರ ಗಾಣಗೇರ ಮಾತನಾಡಿ, ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ನೀಡಿದೆ. ಸರ್ಕಾರವು ಉಚಿತ ಸಮವಸ್ತ್ರ ವಿತರಿಸುವ ಮೂಲಕ ಎಲ್ಲಾ ಮಕ್ಕಳಿಗೆ ಸಮಾನ ಶಿಕ್ಷಣ ಅವಕಾಶ ಒದಗಿಸಲು ಪ್ರಯತ್ನಿಸುತ್ತಿದೆ. ಸಮವಸ್ತ್ರಗಳು ಮಕ್ಕಳಿಗೆ ಶಾಲಾ ವಾತಾವರಣದಲ್ಲಿ ಗುರುತಿಸಲು ಮತ್ತು ಅವರಲ್ಲಿ ಸಮಾನತೆಯ ಭಾವನೆ ಬೆಳೆಸಲು ಸಹಾಯ ಮಾಡುತ್ತದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಸುಭಾಸ ಕನಕಪ್ಪನವರ ಮಾತನಾಡಿ, ಸರ್ಕಾರಿ ಶಾಲೆಗಳು ಉಳಿಯದಿದ್ದರೆ ಬಡವರು, ಕೂಲಿ ಕಾರ್ಮಿಕರು ಹಾಗೂ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದರು. ಬಸನಗೌಡ ಪಾಟೀಲ, ಮುದಕಪ್ಪ ಚಿಗರಡ್ಡಿ, ಭೀಮಪ್ಪ ಬಡಕಲಿ, ಅಶೋಕ ಪೂಜಾರ, ಲಕ್ಷ್ಮೀ ಪಾಟೀಲ, ಮುಖ್ಯಗುರು ವ್ಹಿ.ಎಚ್.ಹಿರೇಮಠ, ವ್ಹಿ.ವೈ.ಪಾಟೀಲ, ಎಫ್.ಆರ್.ಐನಾಪುರ, ವೀಣಾ ಮುದೈಗೋಳ, ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.