ಹಿರಿಯ ನಾಗರಿಕರಿಗೆ ಆತ್ಮಸ್ಥೈರ್ಯ ತುಂಬಿ: ಸಂದೇಶ್‌

| Published : Oct 07 2025, 01:02 AM IST

ಸಾರಾಂಶ

ನೆಲಮಂಗಲ: ಹಿರಿಯ ನಾಗರಿಕರು ಸಮಾಜದ ಮಾರ್ಗದರ್ಶಕರು, ಅವರನ್ನು ಗೌರವಿಸುವ ಜತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಅಪರ ಹಿರಿಯ ಸಿವಿಲ್ ನ್ಯಾಯಧೀಶರಾದ ಟಿ.ಎಲ್.ಸಂದೇಶ್‌ ತಿಳಿಸಿದರು.

ನೆಲಮಂಗಲ: ಹಿರಿಯ ನಾಗರಿಕರು ಸಮಾಜದ ಮಾರ್ಗದರ್ಶಕರು, ಅವರನ್ನು ಗೌರವಿಸುವ ಜತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಅಪರ ಹಿರಿಯ ಸಿವಿಲ್ ನ್ಯಾಯಧೀಶರಾದ ಟಿ.ಎಲ್.ಸಂದೇಶ್‌ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಹಿರಿಯರನ್ನು ಗೌರವಿಸಲಾಗುತ್ತಿತ್ತು. ಅದರೇ ಪ್ರಸ್ತುತ ದಿನಗಳಲ್ಲಿ ಹಿರಿಯರನ್ನು ಕಡೆಗಣಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದ್ದರಿಂದ ಹಿರಿಯನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕಳೆದ 2007ರಿಂದ ಹಿರಿಯ ನಾಗರಿಕರ ದಿನಾಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ತಂದೆ ತಾಯಿಯಿಂದ ಆಸ್ತಿ ಪಡೆದ ನಂತರ ಅವರ ಪಾಲನೆ, ಪೋಷಣೆ ಮಾಡದಿದ್ದರೆ ಕಾನೂನಿನ ಮೂಲಕ ಆಸ್ತಿ ವಾಪಸ್‌ ಪಡೆದುಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಹಿರಿಯ ನಾಗರಿಕರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜತೆಗೆ ಯಾವುದೇ ರೀತಿಯ ಕಾನೂನು ಅರಿವು ಬೇಕಾದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯ ಸಹಕಾರ ಪಡೆದುಕೊಳ್ಳಬಹುದು ಎಂದು ಹೇಳಿದರು.

ಅಪರ ಹಿರಿಯ ಸಿವಿಲ್ ನ್ಯಾಯಧೀಶರಾದ ಕಿಶೋರ್‌ಕುಮಾರ್ ಮಾತನಾಡಿ‌, ಹಿರಿಯನ್ನು ಪ್ರೀತಿ ಗೌರವದಿಂದ ಕಾಣುವವರ ನಡುವೆ ಕೆಲವರು ಅಸ್ತಿಗಾಗಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆಸ್ತಿ ವರ್ಗಾವಣೆಯಾದ ಬಳಿಕ ಹಿರಿಯರನ್ನು ನಿರ್ಲಕ್ಷ ಮಾಡಿ ವೃದ್ಧಾಶ್ರಮಗಳಿಗೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.‌ ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಅರಿವಿಲ್ಲದೆ ಈ ರೀತಿ ಘಟನೆಗಳು ನಡೆಯುತ್ತಿವೆ. ಅಧಿಕಾರಿಗಳು ಕಾನೂನು ಅರಿವಿನ ಜತೆಗೆ ಅರ್ಹ ಪಲಾನುಭವಿಗಳಿಗೆ ಸರ್ಕಾರ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದ ಪ್ರಯುಕ್ತ ಸುಮಾರು 10ಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನದ ಆದೇಶದ ಪ್ರತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗೇಡ್-2 ತಹಸೀಲ್ದಾರ್ ಎಂ.ಕಲಾವತಿ, ಶಿರಸ್ತೇದಾರ್ ವಿಮಲಾ, ಗ್ರಾಮ ಆಡಳಿತಾಧಿಕಾರಿ ಮಾರುತಿ, ತಾಲೂಕು ಕಚೇರಿ ಸಿಬ್ಬಂದಿ ಹರೀಶ್, ಅರುಣ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ‌

ಪೊಟೊ:6ಕೆಎನ್‌ಎಲ್‌ಎಮ್‌1:

ನೆಲಮಂಗಲ ತಾಲೂಕು ಕಚೇರಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಅಪರ ಹಿರಿಯ ಸಿವಿಲ್ ನ್ಯಾಯಧೀಶರಾದ ಸಂದೇಶ್‌ ಉದ್ಘಾಟಿಸಿದರು. ಗೇಡ್-2 ತಹಸೀಲ್ದಾರ್ ಎಂ.ಕಲಾವತಿ, ಶಿರಸ್ತೇದಾರ್ ವಿಮಲಾ ಮತ್ತಿತರರಿದ್ದರು.