ಸಾರಾಂಶ
ಶಿಡ್ಲಘಟ್ಟ : ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮೂರನೇ ಬಾರಿಗೆ ಕೇಂದ್ರದಲ್ಲಿ ಮೋದಿ ನಾಯಕತ್ವದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ತಾಲೂಕಿನ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಕೇಂದ್ರ ಸಚಿವರನ್ನು ಭೇಟಿ ಮಾಡಿ ಜಿಲ್ಲೆಯ ಅಭಿವೃದ್ದಿಗೆ ಮನವಿ ಮಾಡಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ, ಸೋಮಣ್ಣ ಅವರನ್ನು ಭೇಟಿ ಮಾಡಿ ಅಭಿನಂದಿಸಿದ ಅವರು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವು ಗಡಿಭಾಗಕ್ಕೆ ಹೊಂದಿಕೊಂಡಿದ್ದು ತೀರಾ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿ ರೇಷ್ಮೆ ಉದ್ದಿಮೆ ಮತ್ತು ಹೈನುಗಾರಿಕೆಯು ಸಂಕಷ್ಟದಲ್ಲಿದ್ದು ಈ ಸಂಕಷ್ಟದಿಂದ ರೈತರನ್ನು, ರೀಲರುಗಳನ್ನು ಪಾರು ಮಾಡಬೇಕಿದೆ ಎಂದು ಮನವಿ ಮಾಡಿದರು. ಸ್ಥಳೀಯರಿಗೆ ಉದ್ಯೋಗ ಸೃಷ್ಟಿ
ಶಿಡ್ಲಘಟ್ಟದಲ್ಲಿ ಎಲ್ಲೂ ಕೈಗಾರಿಕಾ ಪ್ರದೇಶ ಇಲ್ಲ. ಇಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸುವುದರಿಂದ ಒಂದಷ್ಟು ಮಂದಿಗೆ ಸ್ಥಳೀಯವಾಗಿ ಉದ್ಯೋಗ ಸಿಗಲಿದೆ . ಗಡಿಭಾಗ ತಾಲೂಕು ಎಂದು ಪರಿಗಣಿಸಿ ವಿಶೇಷವಾಗಿ ವಸತಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯ ಮನೆಗಳ ಮಂಜೂರು ಮಾಡಿ ನಿವೇಶನ ಇಲ್ಲದ ಮತ್ತು ವಸತಿರಹಿತರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಶಾಶ್ವತ ನೀರಾವರಿ ಕಲ್ಪಿಸಿ
ಮುಖ್ಯವಾಗಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಇದೊಂದು ಉತ್ತಮ ಅವಕಾಶ ದೊರೆತಿದ್ದು ಎಲ್ಲ ಸಚಿವರು ಸೇರಿ ಬಯಲು ಸೀಮೆಯ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿ ಮಾಡಬೇಕೆಂದು ಕ್ಷೇತ್ರದ ಜನತೆ ಪರವಾಗಿ ಕೋರಿದರು. ಈ ವೇಳೆ ಶಾಸಕರಾದ ಜಿ.ಟಿ.ದೇವೇಗೌಡ, ಕೋಲಾರ ಕ್ಷೇತ್ರದ ನೂತನ ಸಂಸದ ಮಲ್ಲೇಶ್ ಬಾಬು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಇದ್ದರು.