ಗಜೇಂದ್ರಗಡ: ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣಗಳನ್ನು ಬೆಳೆಸಲು ಎಸ್‌ಎಫ್‌ಐ ಸಂಘಟನೆ ಸಹಾಯಕವಾಗಿದೆ. ನಮ್ಮ ಹಕ್ಕುಗಳ ರಕ್ಷಣೆಗೆ ಹೋರಾಟ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅನ್ನದಾನೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ವಸಂತರಾವ್ ಗಾರಗಿ ಹೇಳಿದರು.

ಪಟ್ಟಣದ ಬಂಟನೂರ್ ಬಿಲ್ಡಿಂಗ್ ನಡೆದ ಎಸ್‌ಎಫ್‌ಐ ಕಾರ್ಯಾಲಯದಲ್ಲಿ ಮೂರನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿದ್ದಾಗ ನಾನು ಸಹ ಎಸ್‌ಎಫ್‌ಐನ ಸದಸ್ಯನಾಗಿದ್ದೆ. ಬಸ್ ಪಾಸ್ ಸೇರಿ ಇತರ ಶೈಕ್ಷಣಿಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಎಸ್‌ಎಫ್‌ಐ ಹೋರಾಟ ನಡೆಸಿ ನನ್ನಂತಹ ಅನೇಕ ವಿದ್ಯಾರ್ಥಿಗಳಿಗೆ ಅಂದು ಸಹಾಯಕವಾಯಿತು. ಹಕ್ಕುಗಳಿಗಾಗಿ ಹೋರಾಟ ಮಾಡಿ ಅವುಗಳನ್ನು ಪಡೆದುಕೊಳ್ಳಬೇಕು. ದೇಶದ ಶೈಕ್ಷಣಿಕ ಸಮಸ್ಯೆಗಳನ್ನು ಸರಿಪಡಿಸಲು ತಮ್ಮದೇ ಕೊಡುಗೆ ನೀಡಬೇಕು ಎಂದರು.

ಎಸ್‌ಎಫ್‌ಐ ಗಣೇಶ ರಾಥೋಡ ಮಾತನಾಡಿ, ವಿದ್ಯಾರ್ಥಿಗಳಿಗೆ ಅನ್ಯಾಯ ಆದರೆ ಅದರ ವಿರುದ್ಧ ಧ್ವನಿ ಎತ್ತಿ ಹೋರಾಟ ನಡೆಸಿ ನ್ಯಾಯ ಕೊಡಿಸುವ ಕೆಲಸ ಎಸ್‌ಎಫ್‌ಐ ಸಂಘಟನೆಯು ದೇಶಾದ್ಯಂತ ಮಾಡುತ್ತಿದೆ. ತಾಲೂಕು ಮಟ್ಟದಲ್ಲಿ ಸಮ್ಮೇಳಗಳನ್ನು ನಡೆಸಿ ಹೊಸ ನಾಯಕತ್ವವನ್ನು ನೀಡುವುದು ಸಂವಿಧಾನಾತ್ಮಕ ಪ್ರಜಾಸತ್ತಾತ್ಮಕ ಸಂಘಟನಾ ನಿಯಮವನ್ನು ಸಂಘಟನೆ ಅಳವಡಿಸಿಕೊಂಡಿದೆ. ಹೀಗಾಗಿ ಗಜೇಂದ್ರಗಡ ತಾಲೂಕು ಸಮ್ಮೇಳನ ಆಯೋಜಿಸಲಾಗಿದ್ದು, ತಾಲೂಕಿನ ವಿವಿಧ ಕಾಲೇಜುಗಳಿಂದ ಹಾಸ್ಟೆಲ್‌ಗಳಿಂದ ಘಟಕಗಳ ಪ್ರತಿನಿಧಿಗಳು ಆಯ್ಕೆಯಾಗಿ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯುವ ಕೆಲಸವಾಗಿದೆ ಎಂದರು.

ಸಂಘಟನೆಯ ಅನೀಲ್ ಆರ್. ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಾನು ಸಮಿತಿಗೆ ಅಧ್ಯಕ್ಷನಾಗಿ ತಾಲೂಕು ಸಮಿತಿ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ಮಾಡಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಿದೆ. ಮುಂದೆಯೂ ಸಮ್ಮೇಳನದಲ್ಲಿ ಆಯ್ಕೆಯಾಗುವ ಕಮಿಟಿ ಮತ್ತೆ ಹಲವಾರು ಹೋರಾಟಗಳನ್ನು ರೂಪಿಸಿ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ ಎಂದರು.

ಎಸ್‌ಎಫ್‌ನ ಗಜೇಂದ್ರಗಡ ಮೂರನೇ ತಾಲೂಕು ಸಮ್ಮೇಳನಕ್ಕೆ ಕೃಷಿ ಕೂಲಿಕಾರರ ಸಂಘಟನೆಯ ಬಾಲು ರಾಥೋಡ, ಕಾರ್ಮಿಕ ಸಂಘಟನೆ ಸಿಐಟಿಯು ಪೀರು ರಾಥೋಡ, ಬೀದಿಬದಿ ವ್ಯಾಪಾರಸ್ಥರ ಸಂಘಟನೆಯ ಎಸ್.ಎಸ್. ದಿಂಡವಾಡ, ಜನವಾದಿ ಮಹಿಳಾ ಸಂಘಟನೆಯ ಅಕ್ಕಮ್ಮ ರಾಠೋಡ, ಎಸ್‌ಎಫ್‌ಐ ಮುಖಂಡ ಚಂದ್ರು ರಾಥೋಡ ಮಾತನಾಡಿದರು.


ಪ್ರಶ್ನೆಪತ್ರಿಕೆ ಸೋರಿಕೆ ನೈತಿಕ ಹೊಣೆ ಹೊತ್ತು ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು ಹಾಗೂ ಗ್ರಾಮೀಣ ಪ್ರದೇಶದ ಎಲ್ಲ ಹಳ್ಳಿಗಳಿಗೂ ಬಸ್ ಸೌಲಭ್ಯಗಳನ್ನು ಒದಗಿಸಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಸೇರಿ ಇತರ ನಿರ್ಣಯಗಳನ್ನು ಅಂಗೀಕರಿಸಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ

ಎಸ್‌ಎಫ್‌ಐ ಘಟಕದ ೨೧ ಜನರ ನೂತನ ಕಮಿಟಿ ಅಧ್ಯಕ್ಷರಾಗಿ ಅನಿಲ್ ಆರ್., ಕಾರ್ಯದರ್ಶಿಯಾಗಿ ಶರಣು ಮಾಟರಂಗಿ, ಉಪಾಧ್ಯಕ್ಷರಾಗಿ ಗುರುಕಿರಣ್, ಮಹಮ್ಮದ್ ಇರ್ಫಾನ್, ತನುಜಾ ರಾಯಬಾಗಿ, ಸಹ ಕಾರ್ಯದರ್ಶಿಗಳಾಗಿ ಪ್ರಸನ್ನ ಮೂರ್ತಿ, ಕವಿತಾ ರಾಥೋಡ, ಶಿವಬಸಯ್ಯ ಸೇರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.