ದೇವೇಗೌಡರ ಸಾವನ್ನು ಬಯಸಿದ್ದಾರೋ ಅಥವಾ ಅವರ ಕುಟುಂಬ ನಾಶವಾಗಬೇಕೆಂದು ಬಯಸಿದ್ದಾರೋ ಅವರ ಬಗ್ಗೆ ನಾನು ಚರ್ಚೆ ಮಾಡಬಾರದು. ಇಂತಹ ವ್ಯಕ್ತಿಗಳ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ. ನಾವು ಬೆಳೆಸಿದ್ದರಿಂದ ಅವರು ಈಗ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ರಾಜ್ಯ ಸರ್ಕಾರ ಬದಲಾವಣೆ ಆಗುತ್ತಿದ್ದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಯಲ್ಲಿ ಸೂತಕದ ಛಾಯೆ ಕಾಣಿಸ್ತಿದೆ ಎನ್ನುವವರನ್ನು ನಾವು ಬೆಳೆಸಿದ್ದರಿಂದ ಅವರು ಈಗ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ ಎಂದು ಪರೋಕ್ಷವಾಗಿ ಚಲುವರಾಯಸ್ವಾಮಿ ವಿರುದ್ಧ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ತಾಲೂಕಿನ ಪಿ.ನೇರಲಕೆರೆ ಗ್ರಾಮದ ಶ್ರೀನೇರಲಕೆರಮ್ಮದೇವಿ (ತೋಪಿನಮ್ಮ) ದೇವಸ್ಥಾನದ ನೂತನ ಉತ್ಸವ ಮೂರ್ತಿ ದೇವಾಲಯದ 48ನೇ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಎಂತಹ ರಾಜಕಾರಣಿಗಳಿದ್ದಾರೆಂದು ನೀವೇ ಯೋಚಿಸಿ. ಈ ರೀತಿಯ ಭಾವನೆ ಇರುವವರ ಬಗ್ಗೆ ನೀವು ತೀರ್ಮಾನಿಸಬೇಕು ಎಂದರು.

ದೇವೇಗೌಡರ ಸಾವನ್ನು ಬಯಸಿದ್ದಾರೋ ಅಥವಾ ಅವರ ಕುಟುಂಬ ನಾಶವಾಗಬೇಕೆಂದು ಬಯಸಿದ್ದಾರೋ ಅವರ ಬಗ್ಗೆ ನಾನು ಚರ್ಚೆ ಮಾಡಬಾರದು. ಇಂತಹ ವ್ಯಕ್ತಿಗಳ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಣ್ಣ ನೆನಪಿಗೆ ಬರುವುದಿಲ್ಲ:

5 ವರ್ಷದ ಸರ್ಕಾರಕ್ಕೆ ಹಳೇ ಮೈಸೂರು ಭಾಗದ ಜನರು ಆಶೀರ್ವದಿಸುತ್ತಾರೆ. ಉತ್ತರ ಕರ್ನಾಟಕ ಭಾಗದ ಜನರು ಸಾಲ ಮನ್ನಾ ಯೋಜನೆಯನ್ನು ದೊಡ್ಡ ಮಟ್ಟದಲ್ಲಿ ಅನುಕೂಲ ಪಡೆದುಕೊಂಡರೂ ಕೂಡ ನಮ್ಮ ಬಗ್ಗೆ ಮಮತೆ ಬಂದಿಲ್ಲ. ಆ ಭಾಗದಲ್ಲಿ ನಾನು ಪ್ರವಾಸ ಕೈಗೊಂಡಾಗ ನಿಮ್ಮಿಂದ ನಮಗೆ ಬಹಳಷ್ಟು ಅನುಕೂಲವಾಯಿತು ಎನ್ನುತ್ತಾರೆ. ಆದರೆ, ಮತ ಹಾಕುವಾಗ ಈ ಕುಮಾರಣ್ಣ ನೆನಪಿಗೆ ಬರುವುದಿಲ್ಲ. ನೀವೆಲ್ಲರೂ ನನ್ನನ್ನು ಉಳಿಸಿದ್ದೀರಿ ನಿಮ್ಮೆಲ್ಲರ ಋಣ ತೀರಿಸುತ್ತೇನೆ ಎಂದರು.

ನಾನು ಈ ಮಟ್ಟಕ್ಕೆ ಬೆಳೆಯಲು ರಾಮನಗರ ಜಿಲ್ಲೆ ಒಂದು ಭಾಗ, ನಂತರ ಜಿಲ್ಲೆಯ ಜನರು ತೋರಿದ ಪ್ರೀತಿ ವಿಶ್ವಾಸ ನಂಬಿಕೆಯನ್ನು ನಾನು ಮಣ್ಣಿಗೆ ಹೋಗುವ ತನಕ ಮರೆಯುವುದಿಲ್ಲ. ಕರ್ನಾಟಕ ಸಂಪದ್ಬರಿತ ರಾಜ್ಯ. ಇಲ್ಲಿನ ಸಂಪತ್ತನ್ನು ಜನರಿಗೆ ತಲುಪಿಸಿ ಒಳ್ಳೆಯ ಕಾರ್ಯಕ್ರಮ ರೂಪಿಸಲು ಒಂದು ಅವಕಾಶ ಕೊಟ್ಟು ನನ್ನ ಜೀವನದ ಗುರಿ ಸಾಧಿಸಲು ಪರೀಕ್ಷೆ ಮಾಡಿ ಎಂದು ಕೋರಿದರು.

ನನಗೆ ಒಂದು ಶಕ್ತಿ ಕೊಡಿ:

ಮಾಜಿ ಪ್ರಧಾನಿ ದೇವೇಗೌಡರು 70 ವರ್ಷ ರಾಜಕಾರಣದಲ್ಲಿ ಕೆಲವೇ ವರ್ಷ ಅಧಿಕಾರ ನಡೆಸಿದ್ದಾರೆ. ಹಲವು ರೀತಿಯ ಜನಪರ ಕಾರ್ಯಕ್ರಮ ಕೊಡಬೇಕೆಂದು ಆಸೆ ಇತ್ತಾದರೂ ಅವರಿಗೆ ಸಿಕ್ಕ ಕಡಿಮೆ ಅವಧಿಯಲ್ಲಿ ಅಧಿಕಾರ ನಡೆಸಲು ಸಾಧ್ಯವಾಗದೆ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಆಗಲಿಲ್ಲ. ಅವರ ಮಗನಾಗಿ ನಾನು ದೇವೇಗೌಡರ ಗುರಿಯನ್ನು ಸಾಧಿಸಿ ಯಶಸ್ಸು ಕಾಣಬೇಕೆಂದು ಹೃದಯದಲ್ಲಿರುವ ಕನಸನ್ನು ಸಾಕಾರಗೊಳಿಸಲು ನೀವು ತೀರ್ಮಾನಿಸಿ ನನಗೆ ಶಕ್ತಿ ಕೊಡಬೇಕು ಎಂದರು.

ಈ ಹಿಂದೆ ಜಿಲ್ಲೆಯ ಇನ್ನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಾ ಕುಟುಂಬಕ್ಕೂ ಭೇಟಿ ಕೊಟ್ಟು ಸಾಂತ್ವನ ಹೇಳಿ ವೈಯುಕ್ತಿಕವಾಗಿ ಕೈಲಾದಷ್ಟು ಸಹಾಯ ಮಾಡಿದ್ದೇನೆ. ನಾನು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಬೇಕೆಂದು ಅಂದೇ ನಿರ್ಧರಿಸಿದ್ದೆ ಎಂದರು.

ಸಾಲಮನ್ನಾ, ಲಾಟರಿ ನಿಷೇಧ:

ಜಿಲ್ಲೆಯ ಜನರು ಏಳು ಕ್ಷೇತ್ರದಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದರು. 38 ಸ್ಥಾನಗಳಿದ್ದರೂ ಕೂಡ ದೇವರ ಅನುಗ್ರಹದಿಂದ ಮುಖ್ಯಮಂತ್ರಿಯಾಗಿ ರೈತರ 25 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿ ರೈತರನ್ನು ಉಳಿಸಿಕೊಟ್ಟೆ. ಇದು ನಾನು ಮಾಡಿದ ಕೆಲಸ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಹಲವಾರು ಮಹಿಳೆಯರು ಸಾರಾಯಿ ಮತ್ತು ಲಾಟರಿ ನಿಷೇಧ ಮಾಡಿ ನಮ್ಮ ಕುಟುಂಬವನ್ನು ಉಳಿಸಿ ಎಂದು ಬೇಡಿಕೊಂಡಿದ್ದರು. ಹಾಗಾಗಿ ಸಾರಾಯಿ ಮತ್ತು ಲಾಟರಿ ನಿಷೇಧ ಮಾಡಲು ನಿರ್ಧರಿಸಿದೆ. ಅಂತಹ ಸಂದರ್ಭದಲ್ಲಿ ಕೆಲವರು ನನ್ನನ್ನು ಹಣದಲ್ಲಿ ಖರೀದಿಸಲು ಪ್ರಯತ್ನಿಸಿದರು. ಅಂತಹ ಪಾಪದ ಹಣದಲ್ಲಿ ಪಕ್ಷ ಸಂಘಟನೆ ಮಾಡುವ ಅಗತ್ಯವಿಲ್ಲ ಎಂದು ಇಡೀ ರಾಜ್ಯದಲ್ಲಿ ಸಾರಾಯಿ ಮತ್ತು ಲಾಟರಿ ಸಂಪೂರ್ಣ ನಿಷೇಧ ಮಾಡಿ ಬಡ ಕುಟುಂಬಗಳನ್ನು ರಕ್ಷಣೆ ಮಾಡಿದೆ. ಇಂತಹ ಜನಪರ ಆಡಳಿತ ಬೇಕೋ ಈಗಿನ ಆಡಳಿತ ಬೇಕೋ ನೀವೇ ತೀರ್ಮಾನಿಸಿ ಎಂದರು.

ಕರ್ನಾಟಕ ಸಂಪದ್ಬರಿತ ರಾಜ್ಯ. ಇಲ್ಲಿನ ಸಂಪತ್ತನ್ನು ಜನರಿಗೆ ತಲುಪಿಸಿ ಒಳ್ಳೆಯ ಕಾರ್ಯಕ್ರಮಗಳನ್ನು ರೂಪಿಸಲು ಒಂದು ಅವಕಾಶ ಕೊಟ್ಟು ನೋಡಿ. ನನ್ನ ಅವಧಿ ಆಡಳಿತಕ್ಕೂ ಈಗಿನ ಆಡಳಿತಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಜರಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಸುರೇಶ್‌ಗೌಡ, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಮನ್ಮುಲ್ ಮಾಜಿ ನಿರ್ದೇಶಕ ನೆಲ್ಲಿಗೆರೆ ಬಾಲು, ಪಡಿತರ ವಿತಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ಸಮಾಜ ಸೇವಕ ಜವರನಹಳ್ಳಿ ಗೌರೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ಸಿ.ಚನ್ನಪ್ಪ, ಜಿಪಂ ಮಾಜಿ ಸದಸ್ಯ ಚಂದ್ರೇಗೌಡ, ಮುಖಂಡರಾದ ಶಂಕರಲಿಂಗೇಗೌಡ, ಹಡೇನಹಳ್ಳಿ ಉಮೇಶ್, ಗಿರೀಶ್ ಅಧಿಪತಿ ಸೇರಿದಂತೆ ಹಲವರು ಇದ್ದರು.