ಸಾರಾಂಶ
Shahapur: Maremma Devi Temple Kalasarohana
-ಮರೆಮ್ಮದೇವಿ ದೇವಸ್ಥಾನದ ನೂತನ ಗೋಪುರ ಹಾಗೂ ಕಳಸಾರೋಹಣ ಸಮಾರಂಭ
-----ಕನ್ನಡಪ್ರಭ ವಾರ್ತೆ ಶಹಾಪುರ
ಒತ್ತಡ ಭರಿತ ಜೀವನದಲ್ಲಿ ಮನಸ್ಸಿನ ಶಾಂತಿ ಕಳೆದುಕೊಂಡ ಜನತೆ ಇಂದು ಆಧ್ಯಾತ್ಮದ ಮೊರೆ ಹೋಗುತ್ತಿರುವುದು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದೆ. ಆದಿಶಕ್ತಿ, ಪರಾಶಕ್ತಿ ಮರೆಮ್ಮದೇವಿ ಮಾತೆಯ ಅನುಗ್ರಹವಿದ್ದರೆ ನಮ್ಮೆಲ್ಲ ದುಃಖ ದುಮ್ಮಾನ ದೂರವಾಗುತ್ತವೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.ನಗರದ ದೇವಿನಗರ ಬಡಾವಣೆಯಲ್ಲಿ ನಡೆದ ಮರೆಮ್ಮ ದೇವಿ ದೇವಸ್ಥಾನದ ನೂತನ ಗೋಪುರ ಹಾಗೂ ಕಳಸಾರೋಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನವರಾತ್ರಿ ಮಹೋತ್ಸವದಲ್ಲಿ ಆದಿಶಕ್ತಿ ದೇವಿಯ ಆರಾಧನೆ ಎಲ್ಲರೂ ಮಾಡುವರು. ನವರಾತ್ರಿಯ ಸಮಯದಲ್ಲಿ ದೇವಿಯ ಅನುಗ್ರಹ ಹೆಚ್ಚಿನದ್ದಾಗಿರುತ್ತದೆ. ಈ ಸಮಯದಲ್ಲಿ ದೇವಿಯನ್ನು ಆರಾಧಿಸಿದರೆ ನಮ್ಮೆಲ್ಲ ಇಷ್ಟಾರ್ಥಗಳು ಸಿದ್ಧಿಸುವವು. ಸಮಾಜದಲ್ಲಿ ಎಲ್ಲರೂ ಭಾವೈಕ್ಯದಿಂದ ಬಾಳುವುದೇ ನಿಜವಾದ ಮಾನವ ಧರ್ಮ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಮಠ-ಮಂದಿರ, ಮಸೀದಿಗಳ ಅಭಿವೃದ್ಧಿಗಾಗಿ ಸಾಕಷ್ಟು ಹಣ ಬಿಡುಗಡೆ ಮಾಡಿದ್ದಾರೆ. ಈ ದೇವಸ್ಥಾನದ ಕಂಪೌಂಡ್ ಹಾಗೂ ಇತರೆ ಕೆಲಸಗಳಿಗೆ 15 ಲಕ್ಷ ರು.ಗಳು ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ದೇವಸ್ಥಾನದ ಕಟ್ಟಡ ಕಾಮಗಾರಿ ಹಾಗೂ ಅಭಿವೃದ್ಧಿಗೆ ಸಿಕ್ಕ ನೆರವಿನ ಬಗ್ಗೆ ರುದ್ರಪ್ಪ ಹುಲಿಮನಿ ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಆರೋಬೋಳ, ಸೂಗಣ್ಣ ಸಾಹು ಮದ್ನಾಳ, ವೀರಶೈವ ಸಮಾಜದ ತಾಲೂಕ ಅಧ್ಯಕ್ಷ ಸಿದ್ದಣ್ಣ ಸಾಹು ಆರುಬೋಳ, ನಗರ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುಂಡಪ್ಪ ತುಂಬಿಗಿ, ಪುರಸಭೆ ಮಾಜಿ ಅಧ್ಯಕ್ಷ ಸಣ್ಣ ನಿಂಗಪ್ಪ ನಾಯ್ಕೋಡಿ, ಬಸವರಾಜ್ ಹೆರುಂಡಿ, ಲಿಯಾಕತ್ ಭಾಷಾ, ವೈದ್ಯಾಧಿಕಾರಿ ಡಾ. ರಮೇಶ್ ಗುತ್ತೇದಾರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ್ ಕುಮಾರ್ ಸುರಪುರ ಮುಂತಾದವರಿದ್ದರು.
-----ಫೋಟೊ: 12ವೈಡಿಆರ್2
ಶಹಾಪುರ ನಗರದ ದೇವಿನಗರ ಬಡಾವಣೆಯಲ್ಲಿ ನಡೆದ ಮರೆಮ್ಮದೇವಿ ದೇವಸ್ಥಾನದ ನೂತನ ಗೋಪುರ ಹಾಗೂ ಕಳಸಾರೋಹಣ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿದರು.