ಹೆತ್ತವರ ಬಗೆಗಿನ ಭಕ್ತಿ ಸಂಸ್ಕಾರಕ್ಕೆ ಶಕ್ತಿ: ಶ್ರೀಗಳು

| Published : Feb 25 2024, 01:49 AM IST

ಸಾರಾಂಶ

ಶಿಕ್ಷಣ ಸಂಸ್ಥೆಗಳು ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗಬೇಕು. ಮಕ್ಕಳಲ್ಲಿ ಹೆತ್ತವರ ಬಗ್ಗೆ ಭಕ್ತಿ ಮೂಡಿಸಬೇಕು. ಅದರಿಂದ ಸಂಸ್ಕಾರ ಬೆಳೆದು, ಭವಿಷ್ಯ ಉಜ್ವಲವಾಗುತ್ತದೆ ಎಂದು ಜಿಡಗಾ ಮುಗಳಖೋಡದ ಡಾ. ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಶಿಕ್ಷಣ ಸಂಸ್ಥೆಗಳು ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗಬೇಕು. ಮಕ್ಕಳಲ್ಲಿ ಹೆತ್ತವರ ಬಗ್ಗೆ ಭಕ್ತಿ ಮೂಡಿಸಬೇಕು. ಅದರಿಂದ ಸಂಸ್ಕಾರ ಬೆಳೆದು, ಭವಿಷ್ಯ ಉಜ್ವಲವಾಗುತ್ತದೆ ಎಂದು ಜಿಡಗಾ ಮುಗಳಖೋಡದ ಡಾ. ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಉದನೂರದ ಹಿರೇಗೌಡ ಲೇಔಟ್‍ನಲ್ಲಿನ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಿದ್ದ ಅಮ್ಮನ ಕೈ ತುತ್ತು, ಪಾಲಕರ ಪಾದ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಿದ್ದರಾಮ ಶಿವಯೋಗಿಗಳ ಆಶೀರ್ವಾದ ಮಕ್ಕಳ ಮೇಲೆ ಸದಾ ಇದ್ದು, ಸಂಸ್ಕಾರವಂತ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಬೆಳೆಯಲಿದ್ದಾರೆ ಎಂದು ಹೇಳಿದರು.

ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು ಮಾತನಾಡಿ, ಪ್ರತಿಯೊಬ್ಬರೂ ಸಂಸ್ಕಾರವಂತರಾದಾಗ ಸಮಾಜದಲ್ಲಿ ಶಾಂತಿ, ನೆಮ್ಮದಿ, ಪರಸ್ಪರ ಗೌರವ ದೊರೆಯಲು ಸಾಧ್ಯ. ಮಕ್ಕಳಲ್ಲಿ ಪ್ರೀತಿ, ವಿಶ್ವಾಸ ಬಿತ್ತುವ ಕೆಲಸ ಆಗಲಿ. ಸಂಸ್ಕೃತಿಯುಳ್ಳವರು ಮಾತ್ರ ಸುಭದ್ರ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.

ಕೆಕೆಆರ್‍ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿ, ಶಿಕ್ಷಣವೆಂದರೆ ಸಂಸ್ಕಾರ ಎಂಬ ಮಾತು ಪಾದಪೂಜೆ, ಕೈತುತ್ತು ಊಟ ಕಾರ್ಯಕ್ರಮಗಳಿಂದ ಸಾಕಾರವಾಗುತ್ತದೆ. ಸಂಸ್ಥೆಗಳ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡಿ, ಸಾಧಕರಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ರಾಜಕುಮಾರ ಉದನೂರ ಮಾತನಾಡಿದರು. ಭಾಗಮ್ಮ ಉದನೂರ ಅಧ್ಯಕ್ಷತೆ ವಹಿಸಿದ್ದರು. ಮಾತೋಶ್ರೀ ಸಿದ್ದಮ್ಮಾಂಬೆ ತಾಯಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ಪಿಡಬ್ಲುಡಿ ಇಂಜಿನಿಯರ್ ಸುರೇಶ ಶರ್ಮಾ, ಬಿಜೆಪಿ ಮುಖಂಡ ಗಿರಿರಾಜ ಯಳಮೇಲಿ, ಬಿಇಒ ವಿಜಯಕುಮಾರ ಜಮಖಂಡಿ, ಪಿಐ ಬಸವರಾಜ ತೇಲಿ, ಪ್ರಕಾಶ ಪಾಟೀಲ್ ಹೀರಾಪುರ, ಪವನಕುಮಾರ ವಳಕೇರಿ, ಹನುಮಂತರಾಯ ಕಪ್ನೂರ, ವಿಶ್ವನಾಥ ಪೊಲೀಸ್‌ ಪಾಟೀಲ್‌, ಶಿವಶಂಕರ ಬಿರಾದಾರ, ಆನಂದ ಲೇಂಗಟಿ, ರುದ್ರಮನಿ ಹಿರೇಮಠ, ಆನಂದಿ ಹಿರೇಮಠ ಇತರರಿದ್ದರು.