ಸಾರಾಂಶ
ಇತ್ತೀಚೆಗಷ್ಟೇ ಚಾಮುಂಡಿ ಬೆಟ್ಟಕ್ಕೆ ರಾತ್ರಿ 8.30ಕ್ಕೆ ಭೇಟಿ ನೀಡಿದಾಗ ವಿಪರೀತ ಜನವಿದ್ದುದ್ದನ್ನು ಕಂಡು ಅಲ್ಲಿನ ಪುರೋಹಿತರನ್ನು ವಿಚಾರಿಸಿದಾಗ ಅವರು ಶಕ್ತಿ ಯೋಜನೆ ಬಂದಾಗಿನಿಂದ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತ ಸಾಗರ ಹರಿದು ಬರುತ್ತಿದೆ ಎಂದಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಸಾಕಷ್ಟು ಉಪಯೋಗವಾಗುತ್ತಿದೆ. ಸಾವಿರಾರು ಮಂದಿ ದೇವಸ್ಥಾನಗಳಿಗೆ ಸುಲಭವಾಗಿ ಭೇಟಿ ನೀಡುತ್ತಿರುವುದು ಧರ್ಮ ಕಾರ್ಯವಲ್ಲವೇ ಎಂದು ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಪ್ರಶ್ನಿಸಿದ್ದಾರೆ.ಶಕ್ತಿ ಯೋಜನೆಯಿಂದ ಹೆಣ್ಣು ಮಕ್ಕಳಿಗಾದ ಉಪಯೋಗ ಬಹಳವಿದೆ. ಇತ್ತೀಚೆಗಷ್ಟೇ ಚಾಮುಂಡಿ ಬೆಟ್ಟಕ್ಕೆ ರಾತ್ರಿ 8.30ಕ್ಕೆ ಭೇಟಿ ನೀಡಿದಾಗ ವಿಪರೀತ ಜನವಿದ್ದುದ್ದನ್ನು ಕಂಡು ಅಲ್ಲಿನ ಪುರೋಹಿತರನ್ನು ವಿಚಾರಿಸಿದಾಗ ಅವರು ಶಕ್ತಿ ಯೋಜನೆ ಬಂದಾಗಿನಿಂದ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತ ಸಾಗರ ಹರಿದು ಬರುತ್ತಿದೆ ಎಂದಿದ್ದಾರೆ.
ಆಗ ಈ ಯೋಜನೆ ಕೊಟ್ಟ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸಬೇಕು ಅನ್ನಿಸಿತು. ಕಷ್ಟದಲ್ಲಿರುವವರು, ದುಃಖದಲ್ಲಿ ಇರುವವರು, ನೆಮ್ಮದಿ ಇಲ್ಲದವರು ಬರುವ ಸ್ಥಳವೇ ದೇವಾಲಯ. ಅಂತ ಸ್ಥಳಕ್ಕೆ ಹಣವಂತರು ಬರುವುದು ಸ್ವಲ್ಪ ಕಡಿಮೆ. ಬಡವರು ತಮಗೆ ಎಷ್ಟೇ ನೋವಿದ್ದರೂ ಮೊದಲು ಬರುವುದು ದೇವರ ಬಳಿಗೆ. ಹೀಗೆ ದೇವರ ಬಳಿಗೆ ಬರಲು ಮುಂಚೆ ಕಷ್ಟವಾಗುತ್ತಿತ್ತು. ಆದರೆ ಈಗ ಸುಲಭವಾಗಿ ದೇವರನ್ನು ಕಾಣಲು ಬರುತ್ತಿದ್ದಾರೆ ಎಂದು ಹೇಳಿದ್ದಾರೆ.ಶಕ್ತಿ ಯೋಜನೆಯಿಂದ ತಾಯಂದಿರಿಗೆ ಬಹಳ ಉಪಯೋಗವಾಗುತ್ತಿದೆ. ಇಂತಹ ಯೋಜನೆ ನೋಡಿ ಎಸ್.ಎಲ್. ಭೈರಪ್ಪ ಅವರು ಈ ಬಾರಿ ರಾಜ್ಯದ ಒಲವು ಕಾಂಗ್ರೆಸ್ಸಿನ ಪರ ಇದೆ ಎಂದು ಹೇಳಿರಬಹುದು ಎಂದು ಅವರು ತಿಳಿಸಿದ್ದಾರೆ.