ಸಾರಾಂಶ
ಕರ್ನಾಟಕ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಶಕುನಿ ರಾಜಕೀಯ ಜಾಸ್ತಿಯಾಗುತ್ತಿದೆ. ಬಿಜೆಪಿಯ ಕೆಲ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ತಂದಿಡುವುದೇ ಕೆಲಸವಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ್ನಾಟಕ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಶಕುನಿ ರಾಜಕೀಯ ಜಾಸ್ತಿಯಾಗುತ್ತಿದೆ. ಬಿಜೆಪಿಯ ಕೆಲ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ತಂದಿಡುವುದೇ ಕೆಲಸವಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆರೋಪಿಸಿದರು.ಜಿಲ್ಲೆಯ ಸವದತ್ತಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷರಿಂದ ಒಳ ಒಪ್ಪಂದದ ರಾಜಕೀಯ ನಡೆಯುತ್ತಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಯತ್ನಾಳ ಅವರ ಬಗ್ಗೆ ಅಪಾರ ಗೌರವವಿದೆ. ಅವರಿಗೆ ಇಂತಹ ಹೇಳಿಕೆಗಳು ಶೋಭೆ ತರುವುದಿಲ್ಲ ಎಂದ ಅವರು, ಬೇಕಿದ್ದರೆ ತಮ್ಮ ಪಕ್ಷದ ಬಗ್ಗೆ ಮಾತಾಡಲಿ. ಇನ್ನೊಂದು ಪಕ್ಷದ ಬಗ್ಗೆ ಮಾತನಾಡುವುದು ಬೇಡ. ಗೊಂದಲ ಸೃಷ್ಟಿಸುವುದೇ ಅವರ ಕೆಲಸ. ಅನವಶ್ಯಕ ಹೇಳಿಕೆಗಳಿಂದ ಗೊಂದಲ ಸೃಷ್ಟಿ ಮಾಡಿ, ಸಿಎಂ, ಡಿಸಿಎಂ ನಡುವೆ ತಂದಿಡುವ ಕೆಲಸವನ್ನು ಮೊದಲು ಬಿಡಲಿ ಎಂದು ತಿರುಗೇಟು ನೀಡಿದರು.
ಸಿಎಂ, ಡಿಸಿಎಂ ಇಬ್ಬರೂ ಮುತ್ಸದ್ಧಿ ರಾಜಕಾರಣಿಗಳು. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಮಾಡುವುದು ಪಕ್ಷದ ಶಾಸಕರು ಹಾಗೂ ಹೈಕಮಾಂಡ್ ಹೊರತು ಬಿಜೆಪಿ ರಾಜ್ಯಾಧ್ಯಕ್ಷರಲ್ಲ. ಒಳಒಪ್ಪಂದ ರಾಜಕಾರಣದ ಮಾತನ್ನು ಇನ್ನು ಮುಂದಾದರೂ ಯತ್ನಾಳ ನಿಲ್ಲಿಸಲಿ ಎಂದ ಸಚಿವರು, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಪದೆ ಪದೇ ಅನ್ಯಾಯ ಆಗುತ್ತಿದೆ. ಮೊದಲು ಅದನ್ನು ಸರಿಪಡಿಸಲಿ. ಬಳಿಕ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ನಾಯಕರು ಮಾತನಾಡಲಿ. ಶೀಘ್ರವೇ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಾಗಲಿದೆ ಎಂದರು.