ಉತ್ತರ ಕರ್ನಾಟಕದ ಹೆಸರಾಂತ ನವ್ಯ ಹಾಗೂ ಬಂಡಾಯ ಕವಿ ಗಜಲ್ ಮಾಂತ್ರಿಕ ನಾಡೋಜ ಡಾಕ್ಟರ್ ಶಾಂತರಸರ ಸಾಹಿತ್ಯವನ್ನು ಶಾಲಾ ಕಾಲೇಜುಗಳ ಪಠ್ಯದಲ್ಲಿ ಅಧ್ಯಯನದ ವಸ್ತುವಾಗಿ ಇಡದಿರುವುದು ದುರಂತ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ನಾಗರಾಜು ಅಭಿಪ್ರಾಯಪಟ್ಟರು.

ಕನ್ನಡಪ್ರಭವಾರ್ತೆ ತಿಪಟೂರು

ಉತ್ತರ ಕರ್ನಾಟಕದ ಹೆಸರಾಂತ ನವ್ಯ ಹಾಗೂ ಬಂಡಾಯ ಕವಿ ಗಜಲ್ ಮಾಂತ್ರಿಕ ನಾಡೋಜ ಡಾಕ್ಟರ್ ಶಾಂತರಸರ ಸಾಹಿತ್ಯವನ್ನು ಶಾಲಾ ಕಾಲೇಜುಗಳ ಪಠ್ಯದಲ್ಲಿ ಅಧ್ಯಯನದ ವಸ್ತುವಾಗಿ ಇಡದಿರುವುದು ದುರಂತ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ನಾಗರಾಜು ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಾಂತರಸ ೧೦೧ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಬಡತನದಲ್ಲಿ ಹುಟ್ಟಿ ಸಾವಿರ ೧೯೪೨ರ ಭಾರತ ಬಿಟ್ಟು ತೊಲಗಿ ಚಳುವಳಿಯ ಸಂದರ್ಭದಲ್ಲಿ ಸುಮಾರು ೪೬ ಹೆಚ್ಚು ಶ್ರೇಷ್ಠ ಕೃತಿಗಳನ್ನು ರಚಿಸುವುದರ ಮೂಲಕ ಉತ್ತರ ಕರ್ನಾಟಕದಲ್ಲಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದವರು ಶಾಂತರಸರು.ರಾಯಚೂರು ಜನರ ಕುಡಿಯುವ ನೀರಿನ ಭವಣೆ ಮತ್ತು ರೈತರ ಬೆಳೆ ನಷ್ಟದ ಆತ್ಮಹತ್ಯೆಯ ಸಂದರ್ಭದಲ್ಲಿ ರೈತರ ಪರವಾಗಿ ಸರ್ಕಾರದ ವಿರುದ್ಧ ಚಳುವಳಿ ನಡೆಸಿ ಪರಿಹಾರ ನಷ್ಟ ಕೊಡಿಸಿದರು. ಶರಣಮ್ಮ ಎಂಬ ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆದಾಗ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಲಬೋ ಲಬೋ ಎಂದು ಬಾಯಿ ಬಡಿದುಕೊಳ್ಳುವುದರ ಮೂಲಕ ಸರ್ಕಾರವನ್ನು ಎಚ್ಚರಿಸಿದರು. ಕನ್ನಡದ ನೆಲ ಜಲ ಉಳಿವಿಗಾಗಿ ಹಾಗೂ ಕನ್ನಡ ಭಾಷೆಗೆ ಸಾರ್ವಭೌಮತ್ವ ದೊರಕಿಸಿಕೊಡದ ಭ್ರಷ್ಟ ಸರ್ಕಾರದಿಂದ ನಾನು ರಾಜ್ಯೋತ್ಸವ ಪ್ರಶಸ್ತಿ ಪಡೆಯುವುದೇ ಇಲ್ಲ ಎಂದು ೧೯೯೨ ರಲ್ಲಿ ಪತ್ರ ಬರೆದು ಪ್ರಶಸ್ತಿ ನಿರಾಕರಿಸಿದ ಆದರ್ಶ ವ್ಯಕ್ತಿ ಶಾಂತರಸರು. ಬಸವಣ್ಣ, ಕುವೆಂಪು, ಕಾರಂತ, ಬೇಂದ್ರೆಯವರನ್ನು ಓದಿಕೊಂಡ ವಿದ್ಯಾರ್ಥಿಗಳಿಗೆ ಶಾಂತರಸರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜಿನ ಪಟ್ಟಿಯಲ್ಲಿ ಶಾಂತರಸರ ಸಾಹಿತ್ಯವನ್ನು ಅಧ್ಯಯನದ ವಸ್ತುವಾಗಿ ಇಡಬೇಕೆಂದು ಅಭಿಪ್ರಾಯಪಟ್ಟರು.

ಈ ವೇಳೆ ಪ್ರಾಂಶುಪಾಲ ಡಾಕ್ಟರ್ ಶಶಿಕುಮಾರ್, ರಂಗನಾಯಕ ಟ್ರಸ್ಟನ ಕಾರ್ಯದರ್ಶಿ ಎ.ಆರ್. ಪ್ರಭಾಕರ್, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ, ಮಂಜಪ್ಪ, ಭೌತಶಾಸ್ತ್ರ ಉಪನ್ಯಾಸಕ ಯೋಗೀಶ್ಉ ಪಸ್ಥಿತರಿದ್ದರು.. ಕನ್ನಡ ವಿಭಾಗದ ಮುಖ್ಯಸ್ಥರಾದ ಸ್ಮಿತಾ ಎಚ್.ಎಸ್. ಸ್ವಾಗತಿಸಿದರು. ತೇಜಸ್ವಿನಿ ಜಿ.ಎಸ್ ವಂದಿಸಿದರು. ಐಚ್ಛಿಕ ಕನ್ನಡ ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕಗಳನ್ನು ಗಳಿಸಿದ ವೇದಾಶಂಕರ್ ಎಂಬ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು.