ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಿದರೆ ಅವರು ಭವಿಷ್ಯದಲ್ಲಿ ಮಹಾನ್ ವ್ಯಕ್ತಿಗಳಾಗಿ, ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಪ್ರಾಂಶುಪಾಲ ಮಲ್ಲಿಕಾರ್ಜುನ ಹೊಸಮನಿ ಹೇಳಿದರು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಿದರೆ ಅವರು ಭವಿಷ್ಯದಲ್ಲಿ ಮಹಾನ್ ವ್ಯಕ್ತಿಗಳಾಗಿ, ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಪ್ರಾಂಶುಪಾಲ ಮಲ್ಲಿಕಾರ್ಜುನ ಹೊಸಮನಿ ಹೇಳಿದರು.ಪಟ್ಟಣದ ಡೆಕ್ಕನ್ ಶಿಕ್ಷಣ ಸಂಸ್ಥೆಯ ಪ್ರಗತಿ ಪಿಯು ಕಾಲೇಜು ಆವರಣದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕಡಿಮೆ ಅಂಕ ಬಂದಾಗ ಕುಗ್ಗಬಾರದು, ಹೆಚ್ಚು ಅಂಕ ಬಂದಾಗ ಹಿಗ್ಗಬಾರದು. ನಿರಂತರ ಅಭ್ಯಾಸ, ಪರಿಶ್ರಮ ಹಾಗೂ ಬರೆಯುವ ಅಭ್ಯಾಸದಿಂದ ಯಶಸ್ಸು ಸಾಧಿಸಬೇಕು. ಬಲೂನ್ ಹಾರಲು ಗಾಳಿ ಎಷ್ಟು ಅಗತ್ಯವೋ, ವ್ಯಕ್ತಿಯ ಬೆಳವಣಿಗೆಗೆ ಜಾತಿ-ಧರ್ಮಕ್ಕಿಂತ ಶಿಕ್ಷಣ ಮತ್ತು ಜ್ಞಾನ ಅಷ್ಟೇ ಅಗತ್ಯ ಎಂದು ನೆಲ್ಸನ್ ಮಂಡೇಲಾ ಅವರ ಸಂದೇಶವನ್ನು ಸ್ಫೂರ್ತಿಯಾಗಿ ಪಡೆದು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಆಡಳಿತಾಧಿಕಾರಿಗಳಾದ ಸಂಜೀವಕುಮಾರ ಚಂದಾಪುರ ಮಾತನಾಡಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಸಂತಸದ ವಿಚಾರ. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಮುಂದೆ ಬರಬೇಕು. ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬಡತನದಲ್ಲಿಯೇ ಬೆಳೆದು, ತಮ್ಮ ಪರಿಶ್ರಮ ಮತ್ತು ಜ್ಞಾನದಿಂದ ವಿಜ್ಞಾನಿಯಾಗಿ ರಾಷ್ಟ್ರಕ್ಕೆ ಮಾದರಿಯಾದರು. ವಿದ್ಯಾರ್ಥಿಗಳು ಅವರ ಜೀವನದಿಂದ ಸ್ಫೂರ್ತಿ ಪಡೆದು ಉನ್ನತ ಗುರಿ ಸಾಧಿಸಬೇಕು ಎಂದು ಹೇಳಿದರು.ಡೆಕ್ಕನ್ ಸಂಸ್ಥೆಯ ಅಧ್ಯಕ್ಷ ಗೋವಿದರಾಜು ಕಾಮಿನಿ ಮಾತನಾಡಿ, ವಿದ್ಯಾರ್ಥಿಗಳು ಮುಂದೆ ಭವಿಷ್ಯ ಉಜ್ವಲವಾಗಿ ಮುಂದುವರೆಯಲಿ ಶುಭ ಹಾರೈಸಿದರು. ಸಂಸ್ಥೆಯ ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಡೆಕ್ಕನ್ ಸಂಸ್ಥೆಯ ಉಪಾಧ್ಯಕ್ಷ ಇಸ್ಮಾಯಿಲ್ ಪ್ಯಾರೇ, ಮುಖ್ಯ ಗುರು ಹಣಮಂತರಾವ ಗೊಂಗ್ಲೆ, ಬಾಲರಾಜ್, ಕಾರ್ಯದರ್ಶಿ ಆಕ್ತರ್ ಪ್ಯಾರೇ, ಹಿರಿಯ ಶಿಕ್ಷಕರು ಜಹೀರುದ್ದೀನ್, ಝಕೀರಹುಸೇನ್, ಶಿವಕುಮಾರರೆಡ್ಡಿ, ಸಂಸ್ಥೆಯ ಪದಾಧಿಕಾರಿಗಳು, ಕಾಲೇಜಿನ ಶಿಕ್ಷಕರು ಸಿಬ್ಬಂದಿವರ್ಗದವರು ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.