ಶಿಗ್ಗಾಂವಿ: ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಶರೀಫ ಶಿವಯೋಗಿ ಹಾಗೂ ಗುರು ಗೋವಿಂದ ಭಟ್ಟರ ಜಾತ್ರಾ ಮಹೋತ್ಸವ ಫೆ. 25ರಿಂದ 27ರ ವರೆಗೆ ನಡೆಯಲಿದೆ.

ಫೆ. ೨೫ರ ಬೆಳಗ್ಗೆ ಭಾವೈಕ್ಯ ಧ್ವಜಾರೋಹಣ, ಸಾಯಂಕಾಲ ೪ ಗಂಟೆಗೆ ಶಿಶುನಾಳಧೀಶನ ದೇವಸ್ಥಾನದಿಂದ ಶರೀಫಗಿರಿಗೆ ಕಳಸದ ಮೆರವಣಿಗೆ ಹಾಗೂ ಕಳಸಾರೋಹಣ ಶಿಶುವಿನಾಳ ಭಕ್ತರಿಂದ ಜರುಗಲಿದೆ.೨೬ರ ಸಾಯಂಕಾಲ ೬ ಗಂಟೆಗೆ ಮಹಾರಥೋತ್ಸವ ಜರುಗುವುದು. ೨೭ರ ಸಾಯಂಕಾಲ ೬ ಗಂಟೆಗೆ ಕಡುಬಿನ ಕಾಳಗ ಜರುಗುವುದು.

ಜಾತ್ರೆಯ ದಾಸೋಹ ಸೇವೆಯನ್ನು ಹುಬ್ಬಳ್ಳಿ ಬೇಕರಿ ಮಾಲೀಕ ವಿಶ್ವನಾಥಸಾ, ಅಶೋಕ ದಲಬಂಜನ, ದಾವಣಗೇರೆ ಶಿಲ್ಪಿ ಗುರೂಜಿ, ಕುಂದಗೋಳದ ಗಣೇಶಗುಡಿ ಭಜನಾ ಸಂಘ, ಶಿರಗುಪ್ಪಿ ಗುರುಲಿಂಗೇಶ್ವರ ದಾಸೋಹ ಸಮಿತಿ, ಯಲಿವಾಳ ಗ್ರಾಮಸ್ಥರು, ಗುಡಗೇರಿ ಕಲ್ಮೇಶ್ವರ ಭಜನಾ ಸಂಘದಿಂದ ವಿರೂಪಾಕ್ಷಪ್ಪ ಬಳಿಗೇರ, ದಾಸೋಹ ಸಮಿತಿ ಹಾಗೂ ಗೆಳೆಯರ ಬಳಗದಿಂದ ಅನ್ನ ದಾಸೋಹ ಸೇವೆ ಜರುಗುವುದು.

ಶರೀಫರು ಮತ ಧರ್ಮದಿಂದ ಮುಸ್ಲಿಂರಾದರೂ ಧರ್ಮ ದೃಷ್ಟಿಯಿಂದ ವಿಶ್ವಮಾನವರಾಗಿ ಜಗ ಕಲ್ಯಾಣಕ್ಕಾಗಿ ಶ್ರಮಿಸಿ ಧೀಮಂತ ಎನಿಸಿದರು. ಹೀಗಾಗಿ ಅವರ ಜೀವನದ ಸಂದೇಶಗಳು ಜನತೆಗೆ ದಾರ್ಶನಿಕವಾಗಿ ಉಳಿದಿವೆ. ತಿಳಿಗನ್ನಡದ ಸರಳವಾಗಿರುವ ಅವರ ಬೆಡಗಿನ ಹಾಡುಗಳಲ್ಲಿ ಆಧ್ಯಾತ್ಮದ ಸೊಗಡು ತುಂಬಿದೆ. ಯಾವ ಮತ ಪಂಥಗಳಿಗೆ ಸೇರದ ಶರೀಫರ ಸಮಾಧಿ ಸರ್ವಧರ್ಮದ ಸಮನ್ವಯದ ತಾಣವಾಗಿದೆ. ಇಂಥಹ ಪುಣ್ಯಕ್ಷೇತ್ರ ಶಿಗ್ಗಾಂವಿಯಿಂದ ಸುಮಾರು ೧೫ ಕಿಮೀ ದೂರದಲ್ಲಿ ಈಗ ಸುಂದರ ಪ್ರವಾಸಿ ತಾಣವಾಗಿ ಜನರನ್ನು ಆಕರ್ಷಿಸುತ್ತಿದೆ.ಹುಲಗೂರ ಖಾದರಶಾರವರ ವರ ಪ್ರಸಾದದಿಂದ ಜನಿಸಿದ ಶರೀಫರು ಕಳಸದ ಗುರು-ಗೊವಿಂದಭಟ್ಟರಿಂದ ಸಂತ ಶಿಖಾಮಣಿಯಾಗಿ ರೂಪುಗೊಂಡು ಮರೆಯಲಾಗದ ಮಹಾನುಭಾವರಾದರು. ಸರ್ಕಾರ ಶರೀಫರ ಸ್ಮರಣೆಯಾಗಿ ಇಲ್ಲಿ ಅಧ್ಯಾತ್ಮಿಕ ಅಧ್ಯಯನ ಕೇಂದ್ರ, ಪ್ರವಾಸಿ ನಿಲಯ, ಬೃಹದಾಕಾರದ ಗ್ರಂಥಾಲಯ, ಕಲಾಭವನ, ಸಮುದಾಯ ಭವನ ನಿರ್ಮಿಸುವುದರ ಜೊತೆಗೆ ಉತ್ತಮ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲು ಆಗಿನ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕೂಡಾ ಸಾಕಷ್ಟು ಪ್ರಮಾಣದಲ್ಲಿ ತನು, ಮನ, ಧನದಿಂದ ಸೇವೆಯನ್ನು ಸಲ್ಲಿಸಿದ್ದಾರೆ.