Sheshagiri is a mentor to young journalists: Naveen Kumar
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಸುಮಾರು 40 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಬಿ.ವಿ. ಶೇಷಗಿರಿಯವರು ಈ ಭಾಗದ ಬಡವರು ಹಾಗೂ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದರು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಶಿಕಾರಿಪುರ ತಾಲೂಕು ಘಟಕದ ಅಧ್ಯಕ್ಷ ಎಂ. ನವೀನ್ ಕುಮಾರ್ ಹೇಳಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಬಿ.ವಿ. ಶೇಷಗಿರಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಶೇಷಗಿರಿಯವರು ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು. ತಮಗೂ ಅವರು ಗುರುಗಳಾಗಿದ್ದು, ಪತ್ರಿಕೋದ್ಯಮದ ವಿವಿಧ ಆಯಾಮಗಳು ಹಾಗೂ ದೃಷ್ಟಿಕೋನಗಳನ್ನು ತಿಳಿಸಿ, ಕಲಿಸುವ ಮೂಲಕ ಹಲವು ಪತ್ರಕರ್ತರಿಗೆ ಮಾರ್ಗದರ್ಶನ ನೀಡಿದ್ದರು ಎಂದು ಸ್ಮರಿಸಿದರು.ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್. ಹುಚ್ಚರಾಯಪ್ಪ ಮಾತನಾಡಿ, ವ್ಯಕ್ತಿ ಬದುಕಿರುವಾಗಲೇ ಅವರಿಗೆ ಅಗತ್ಯವಾದ ಸಹಾಯ ಹಾಗೂ ಬೆಂಬಲ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ಬಿ.ವಿ. ಶೇಷಗಿರಿಯವರೊಂದಿಗೆ ಹಾಗೂ ಅವರ ಕುಟುಂಬದೊಂದಿಗೆ ಇಡೀ ಪತ್ರಿಕಾ ಸಮುದಾಯ ಸದಾ ಇದ್ದು, ಮುಂದೆಯೂ ಕುಟುಂಬದ ಬೆಂಬಲಕ್ಕೆ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಸಂಘದ ಮಾಜಿ ಅಧ್ಯಕ್ಷ ಎಚ್.ಆರ್. ರಾಘವೇಂದ್ರ ಮಾತನಾಡಿ, ಶೇಷಗಿರಿಯವರೊಂದಿಗಿನ ತಮ್ಮ ಒಡನಾಟ ಹಾಗೂ ಅವರಲ್ಲಿದ್ದ ಪ್ರಾಮಾಣಿಕ ಕರ್ತವ್ಯ ಪ್ರಜ್ಞೆಯನ್ನು ಸ್ಮರಿಸಿದರು.ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಪತ್ರಕರ್ತ ದೀಪು ಹಾಗೂ ಹಿರಿಯ ಪತ್ರಕರ್ತ ಬಿ.ವಿ. ಶೇಷಗಿರಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ನಿರ್ದೇಶಕರಾದ ರಾಜಾರಾವ್ ಜಾದವ್, ಬಿ.ಎಲ್. ರಾಜಪ್ಪ, ಉಪಾಧ್ಯಕ್ಷರಾದ ಎಚ್.ಎಸ್. ರಘು, ಪ್ರಧಾನ ಕಾರ್ಯದರ್ಶಿ ಮಂಜು ಮಠದ, ಟ್ರಸ್ಟ್ ಉಪಾಧ್ಯಕ್ಷ ಅರುಣ್ ಕುಮಾರ್, ಕಾಳಿಂಗ್, ಐ.ಎಫ್. ಮಳಿಗಿ, ನರಸಿಂಹ ಸ್ವಾಮಿ, ಶಿರಾಳಕೊಪ್ಪದ ಅರುಣ್, ಸತೀಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.---------------
ಪೋಟೋ: 29ಎಸ್ಎಂಜಿಕೆಪಿ07