ಸಾರಾಂಶ
ಹಿಂದಿನ ಕಾಲದಲ್ಲಿ ವಿಷ ಜಂತುಗಳು ಕಚ್ಚಿದಲ್ಲಿ ಕ್ಷೇತ್ರದ ಮಣ್ಣು ಮತ್ತು ಇಲ್ಲಿನ ತೀರ್ಥ ಕುಡಿದರೆ, ವಿಷ ಕಡಿಮೆ ಆಗಿ ಸಮಸ್ಯೆ ಪರಿಹಾರವಾಗುತ್ತಿದ್ದ ಕ್ಷಣವನ್ನು ಕಣ್ಣಾರೆ ಕಂಡ ಹಿರಿಯರು ಈಗಲೂ ನೆನಪಿಸುತ್ತಾರೆ. ಅದಕ್ಕಾಗಿ ಇಂದಿಗೂ ಇಲ್ಲಿನ ತೀರ್ಥ ಮತ್ತು ಮಣ್ಣನ್ನು ಭಕ್ತರು ತಮ್ಮ ಮನೆಯಲ್ಲಿ ಇಟ್ಟು ಕೊಳ್ಳುತ್ತಾರೆ.
ಕನ್ನಡಪ್ರಭವಾರ್ತೆ ಮೂಲ್ಕಿ
ಶಿಬರೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಉಳ್ಳಾಯ ದೈವದ ವಾರ್ಷಿಕ ನೇಮೋತ್ಸವ ನಡೆಯಿತು. ಉತ್ಸವದಲ್ಲಿ ಉರುಳು ಸೇವೆ ಕಂಚೀಲು ಸೇವೆ, ತುಲಾ ಭಾರ ಸೇವೆ, ಉಳ್ಳಾಯ ದೈವದ ನೇಮೋತ್ಸವ, ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾಹ್ನದಿಂದ ನಿರಂತರ ರಾತ್ರಿವರೆಗೆ ಅನ್ನ ಸಂತರ್ಪಣೆ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್ ಮತ್ತವರ ಪುತ್ರ ಕ್ಷೇತ್ರದಲ್ಲಿ ತುಲಾಭಾರ ಸೇವೆ ಮಾಡಿದರು. ತಿಗಲೆ ಇತ್ತಿನಾಯಗ್ ತಿಬಾರ್ ಎಂಬ ಖ್ಯಾತಿಯನ್ನು ಹೊಂದಿರುವ ಶಿಬರೂರು ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿದ್ದು ಪ್ರತೀ ವರ್ಷ ಧನು ಸಂಕ್ರಮಣದಂದು ಧ್ವಜಾರೋಹಣಗೊಂಡು ಜಾತ್ರಾ ಮಹೋತ್ಸವ ಆರಂಭಗೊಳ್ಳುತ್ತದೆ. ಇಲ್ಲಿನ ತೀರ್ಥ ಬಹಳ ಪ್ರಸಿದ್ಧಿಯನ್ನು ಪಡೆದಿದ್ದು ಹಿಂದಿನ ಕಾಲದಲ್ಲಿ ಸೂರಿಂಜೆ ಗುತ್ತು ತ್ಯಾಂಪ ಶೆಟ್ಟಿ ಎಂಬುವವರ ಬಳಿ ವಿಷವನ್ನು ಹೀರುವ ಕಲ್ಲು ಇದ್ದು ಅವರು ತಮ್ಮ ಅಂತಿಮ ಕಾಲದಲ್ಲಿ ಎಲ್ಲರಿಗೂ ಉಪಯೋಗವಾಗಲಿ ಎಂಬ ಕಾರಣಕ್ಕೆ ಆ ಕಲ್ಲನ್ನು ಶಿಬರೂರು ದೈವಸ್ಥಾನದ ಎದುರಿನ ಬಾವಿಗೆ ಹಾಕಿದ್ದು, ಮುಂದಕ್ಕೆ ಆ ಬಾವಿಯ ನೀರು ವಿಷವನ್ನು ಹೀರುವ ಗುಣವನ್ನು ಪಡೆದಿದೆ ಎಂಬ ನಂಬಿಕೆ ಇದೆ.ಹಿಂದಿನ ಕಾಲದಲ್ಲಿ ವಿಷ ಜಂತುಗಳು ಕಚ್ಚಿದಲ್ಲಿ ಕ್ಷೇತ್ರದ ಮಣ್ಣು ಮತ್ತು ಇಲ್ಲಿನ ತೀರ್ಥ ಕುಡಿದರೆ, ವಿಷ ಕಡಿಮೆ ಆಗಿ ಸಮಸ್ಯೆ ಪರಿಹಾರವಾಗುತ್ತಿದ್ದ ಕ್ಷಣವನ್ನು ಕಣ್ಣಾರೆ ಕಂಡ ಹಿರಿಯರು ಈಗಲೂ ನೆನಪಿಸುತ್ತಾರೆ. ಅದಕ್ಕಾಗಿ ಇಂದಿಗೂ ಇಲ್ಲಿನ ತೀರ್ಥ ಮತ್ತು ಮಣ್ಣನ್ನು ಭಕ್ತರು ತಮ್ಮ ಮನೆಯಲ್ಲಿ ಇಟ್ಟು ಕೊಳ್ಳುತ್ತಾರೆ. ಇಲ್ಲಿನ ಈ ತೀರ್ಥ ಬಾವಿಗೆ ಕೊಡಪಾನ ಅಥವಾ ಪಂಪು ಮೂಲಕ ನೀರನ್ನು ಎತ್ತುವಂತಿಲ್ಲ. ಅದರ ಬದಲು ಏತದ ಮೂಲಕವೇ ನೀರನ್ನು ಎತ್ತುವುದು ಇಲ್ಲಿನ ವಿಶೇಷ.