ಕನ್ನಡಪ್ರಭ ವಾರ್ತೆ, ತುಮಕೂರುಕುಂಚಿಟಿಗ ಸಮಾಜದ ಏಕೈಕ ಶಾಸಕ, ಹಿರಿಯ ರಾಜಕಾರಣಿ, ಶಿರಾ ಕ್ಷೇತ್ರ ಶಾಸಕ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲೆಯ ಕುಂಚಿಟಿಗ ಸಮಾಜದ ವಿವಿಧ ಸಂಘಗಳ ಮುಖಂಡರು ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ. ಸೋಮವಾರ ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ. ಶ್ರೀಧರ್, ರಾಜ್ಯದ 25-30 ಲಕ್ಷ ಜನಸಂಖ್ಯೆಯ ಕುಂಚಿಟಿಗ ಸಮಾಜದ ಏಕೈಕ ಶಾಸಕರಾಗಿರುವ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಿ, ನಮ್ಮ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು. ಐದು ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾದ ಜಯಚಂದ್ರ ಅವರ ಅನುಭವ, ಹಿರಿತನ ಪರಿಗಣಿಸಿ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.ಜಯಚಂದ್ರ ಅವರು ಕೇವಲ ರಾಜಕಾರಣಿ ಮಾತ್ರವಲ್ಲದೇ ಕುಂಚಿಟಿಗ ಜನಾಂಗದ ರಾಜಕೀಯ ಅಸ್ತಿತ್ವದ ಸಂಕೇತವಾಗಿದ್ದಾರೆ. ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವುದು ಸಮುದಾಯದ ಗೌರವವನ್ನು ಉಳಿಸುವುದರ ಜೊತೆಗೆ ರಾಜ್ಯ ರಾಜಕಾರಣದಲ್ಲಿ ಸಾಮಾಜಿಕ ಸಮತೋಲನವನ್ನು ಕಾಪಾಡುವ ಮಹತ್ವದ ಹೆಜ್ಜೆಯಾಗಿರುತ್ತದೆ ಎಂದರು.ಸಂಘದ ಮಾಜಿ ಅಧ್ಯಕ್ಷ ಆರ್. ಕಾಮರಾಜ್ ಮಾತನಾಡಿ, ಕುಂಚಿಟಿಗ ಒಕ್ಕಲಿಗ ಜನಾಂಗದ ಕ್ರಿಯಾಶೀಲ ರಾಜಕಾರಣಿ ಹಾಗೂ ಕಳೆದ ೫ ದಶಕಗಳ ಸಕ್ರಿಯ ರಾಜಕೀಯ ಜೀವನದಲ್ಲಿ ಏಳು ಬಾರಿ ಕಳ್ಳಂಬೆಳ್ಳ ಮತ್ತು ಶಿರಾ ಕ್ಷೇತ್ರದಲ್ಲಿ ಶಾಸಕರಾಗಿ, ಸಚಿವರಾಗಿ ಟಿ.ಬಿ. ಜಯಚಂದ್ರ ಅವರು ರಾಜ್ಯಕ್ಕೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಇಂತಹ ಹಿರಿಯ ನಾಯಕರಿಗೆ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ ಕುಂಚಿಟಿಗ ಸಮಾಜಕ್ಕೆ ಪ್ರಾತಿನಿಧ್ಯ ನೀಡುವ ಜೊತೆಗೆ ಜಯಚಂದ್ರ ಅವರ ಪಕ್ಷನಿಷ್ಠೆಯನ್ನು ಗೌರವಿಸಬೇಕು ಎಂದು ಹೇಳಿದರು.ಶಿರಾ ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಮುಕುಂದಪ್ಪ ಮಾತನಾಡಿ, ಜಿಲ್ಲೆಗೆ ಹೇಮಾವತಿ ನೀರು ಹರಿದುಬರಲು ಹಾಗೂ ಶಿರಾ ತಾಲ್ಲೂಕಿನ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿದ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಕಾರ್ಯದರ್ಶಿ ಬಿ.ವಿ. ಶಿವರಾಜು, ಖಜಾಂಚಿ ಭಕ್ತರಹಳ್ಳಿ ದೇವರಾಜು, ಮಾಜಿ ಅಧ್ಯಕ್ಷ ದೊಡ್ಡಲಿಂಗಪ್ಪ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ, ವಕೀಲ ಜಿ.ಎಲ್. ನರೇಂದ್ರಬಾಬು, ವಕೀಲರು, ಕೆಂಪೇಗೌಡ ಪಟ್ಟಣ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಶಿವರಾಮಯ್ಯ, ಮುಖಂಡರಾದ ಎಸ್.ಕೆ. ನಾಗರಾಜು, ಜಯಣ್ಣ, ಲಲಿತಾ ಮಲ್ಲಪ್ಪ, ನಾಗರಾಜು, ಶಶಿಧರ್, ಬೆಳ್ಳಾರ ರವಿ, ಗೋ.ಮು. ನಾಗರಾಜು, ನಿವೃತ್ತ ಪ್ರಾಚಾರ್ಯ ಮರಳಯ್ಯ, ಅಶೋಕ್, ಲಕ್ಷ್ಮೀಪ್ರಸಾದ್, ಬಸಂತನಹಳ್ಳಿ ರಾಜು, ಮಧು ಜೀರಿಗೆ, ಮದ್ದೆವಳ್ಳಿ ನಾಗಣ್ಣ, ಆರ್.ಟಿ. ನಾರಾಯಣಪ್ಪ, ಹೆಂದೊರೆ ಮೋಹನ್, ಗೌಡಗೆರೆ ವಸಂತ ಮೊದಲಾದವರು ಹಾಜರಿದ್ದರು.