ಸಾರಾಂಶ
ಬಸವಕಲ್ಯಾಣ ತಾಲೂಕಿನ ಪ್ರತಾಪೂರ ಗ್ರಾಮದ ಭೀಮನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಂಚ ಕಮಿಟಿಯಿಂದ ನೂತನ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಮಾರುತಿರಾವ ಮೂಳೆ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ನಾನು ಇಂದು ವಿಧಾನ ಪರಿಷತ್ತಿನ ಸದಸ್ಯನಾಗಲು ಅಂಬೇಡ್ಕರ್ ಅವರು ಬರೆದಂತಹ ಸಂವಿಧಾನವೇ ಕಾರಣ ಎಂದು ನೂತನ ಎಂಎಲ್ಸಿ ಮಾರುತಿರಾವ ಮೂಳೆ ಹೇಳಿದರು.ಅವರು ಬಸವಕಲ್ಯಾಣ ತಾಲೂಕಿನ ಪ್ರತಾಪೂರ ಗ್ರಾಮದ ಭೀಮನಗರದಲ್ಲಿ ಅಂಬೇಡ್ಕರ್ ಪಂಚ ಕಮಿಟಿಯಿಂದ ಎಂಎಲ್ಸಿಯಾಗಿದಕ್ಕೆ ಸನ್ಮಾನ ಸಮಾರಂಭ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಒಂದು ವೇಳೆ ಇವತ್ತು ಸಂವಿಧಾನ ಇರದೇ ಹೋದರೆ ನಾನು ಇಂದು ವಿಧಾನ ಪರಿಷತ್ತಿನ ಸದಸ್ಯನಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜ ಹಾಗೂ ದೇಶದ ಪ್ರಗತಿಗೆ ದುಡಿದ ಡಾ.ಅಂಬೇಡ್ಕರ್ ಅವರಂತಹ ಮಹಾನ್ ನಾಯಕರನ್ನು ಕೇವಲ ಒಂದೇ ಜಾತಿ, ಧರ್ಮಕ್ಕೆ ಸೀಮಿತ ಮಾಡದೆ ಅವರ ಹೆಸರು ಕೆಡಿಸುವಂತಹ ಕೆಲಸ ಮಾಡಬಾರದು ಎಂದು ಎಂಎಲ್ಸಿ ಮಾರುತಿರಾವ ಮೂಳೆ ಮನವಿ ಮಾಡಿದರು.ಉಪನ್ಯಾಸಕ ನರಸಿಂಗರೆಡ್ಡಿ ಗದಲೇಗಾಂವ, ಡಾ.ದಿಲೀಪ ಶಿಂಧೆ, ರಾಜು ಚೌಧರಿ, ಚಾಮುಂಡಿ ಬೆಂಡೆ ಮಾತನಾಡಿದರು. ಅತಿಥಿಗಳಾಗಿ ಅರ್ಜುನ ಕನಕ, ವಾರಿಸ್ ಅಲಿ, ತಹಸೀನ್ ಅಲಿ ಜಮಾದಾರ, ಗ್ರಾಮ ಅಧ್ಯಕ್ಷೆ ಶೋಭಾ ರಾಜೇಶ ಮೇತ್ರೆ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ನಾಗೇಶ ಕಾಂಬಳೆ, ಡಾ.ಬಿ.ಆರ್.ಅಂಬೇಡ್ಕರ್ ಪಂಚ ಕಮಿಟಿಯ ಪ್ರಮುಖರಾದ ಶೇಷೆರಾವ ಗಾಯಕವಾಡ, ಭಾವುರಾವ ಕಾಂಬಳೆ, ರಂಗರಾವ ಸೂರ್ಯವಂಶಿ, ಪ್ರಲ್ಹಾದ ಕಾಂಬಳೆ ಮತ್ತಿತರರು ಇದ್ದರು.
ಮಾನವ ಬಂಧುತ್ವ ವೇದಿಕೆಯ ತಾಲೂಕಾ ಅಧ್ಯಕ್ಷ ಪಿಂಟು ಕಾಂಬಳೆ ಸ್ವಾಗತಿಸಿದರು, ಸಮತಾ ಸೈನಿಕ ದಳದ ದತ್ತಾತ್ರೇಯ ಸೂರ್ಯವಂಶಿ ವಂದಿಸಿದರು.