ಸಾರಾಂಶ
ಶಿಗ್ಗಾಂವಿ: ನಡೆ, ನುಡಿ ಹಾಗೂ ಆಚಾರ-ವಿಚಾರಗಳ ಸಮ್ಮಿಲಿತ ಜೀವನ ಸವೆಸಿದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಆಧುನಿಕ ತಂತ್ರಜ್ಞಾನ ಯುಗದಲ್ಲಿ ಆಧ್ಯಾತ್ಮಿಕ ತಳಹದಿಯ ಮೇಲೆ ಮಾನವೀಯ ಮೌಲ್ಯಗಳನ್ನು ಬೆಳೆಸಿದರು ಎಂದು ಕುಂದಗೋಳದ ಕಲ್ಯಾಣಪುರ ಮಠದ ಶ್ರೀ ಮ.ನಿ.ಪ್ರ. ಅಭಿನವ ಬಸವಣ್ಣನವರು ಪ್ರತಿಪಾದಿಸಿದರು.
ತಾಲೂಕಿನ ಮುಗಳಿ ಗ್ರಾಮದಲ್ಲಿ ಜರುಗಿದ ದಾಸೋಹ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಿದ್ಧಗಂಗಾ ಮಠದ ಶಿವಕುಮಾರ ಮಹಾಸ್ವಾಮಿಗಳು ಬಡ ಹಾಗೂ ಶೋಷಿತ ಸಮುದಾಯದ ಮಕ್ಕಳ ಶೈಕ್ಷಣಿಕ ಶ್ರೇಯಸ್ಸಿಗೆ ತಮ್ಮ ಬದುಕನ್ನು ಮುಡಿಪಿಟ್ಟಿದ್ದರು. ಬರಗಾಲದಂಥ ಭೀಕರ ದಿನಗಳಲ್ಲೂ ಜೋಳಿಗೆ ಹಿಡಿದು ಮಠದಲ್ಲಿ ಆಶ್ರಯ ಪಡೆದಿದ್ದ ಮಕ್ಕಳ ಹಸಿವನ್ನು ಇಂಗಿಸಿದ್ದರು. ಜತೆಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು. ಅವರ ಜೀವನ ನಮಗೆಲ್ಲ ಅನುಕರಣೀಯ ಎಂದರು.ಉಪನ್ಯಾಸ ನೀಡಿದ ಪ್ರೊ. ಶಿವಪ್ರಕಾಶ ಬಳಿಗಾರ, ದೈವಾಂಶ ಸಂಭೂತರು ಹಾಗೂ ಲಿಂಗಪೂಜಾ ನಿಷ್ಠರೂ ಆಗಿದ್ದ ಶಿವಕುಮಾರ ಮಹಾಸ್ವಾಮಿಗಳು ಮಠದ ವಿದ್ಯಾರ್ಥಿಗಳ ಹೊಟ್ಟೆ ಮತ್ತು ಜ್ಞಾನದ ಹಸಿವನ್ನು ಇಂಗಿಸಿ ಲೋಕಕ್ಕೆ ಮಾದರಿಯಾದರು. ಸಿದ್ಧಗಂಗಾ ಮಠದಲ್ಲಿದ್ದು ಅಧ್ಯಯನ ಮಾಡಿದ ಪ್ರತಿಯೊಬ್ಬರೂ ಧನ್ಯರು ಎಂದರು.
ಡಾ. ಚಂದ್ರಪ್ಪ ಸೊಬಟಿ, ಮಠದ ಹಳೆಯ ವಿದ್ಯಾರ್ಥಿಗಳಾದ ಈಶ್ವರಗೌಡ ಪಾಟೀಲ ಹಾಗೂ ಸುರೇಶ ಅರಳಿಕಟ್ಟಿ ಮಾತನಾಡಿದರು. ಶ್ರೀ ಪಂಚಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ಶಿವಪ್ಪ ಅರಳಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.ಭಾರತ ಸೇವಾ ಸಂಸ್ಥೆಯ ಶ್ರೀಕಾಂತ ದುಂಡಿಗೌಡ್ರ, ಸುಜಲಾನ್ ಸಂಸ್ಥೆಯ ದೀಪಕ್ ಕ್ಷೀರಸಾಗರ, ಮುಖಂಡರಾದ ಶಿವಾನಂದ ರಾಮಗೇರಿ, ತಿಪ್ಪಣ್ಣ ಸಾತಣ್ಣವರ, ಸುಭಾಷ್ ಕತ್ತಿ, ಎಸ್.ವಿ. ಕಟಗಿಹಳ್ಳಿಮಠ, ನೀಡ್ಸ್ ಸಂಸ್ಥೆಯ ಸಿಇಒ ಎಚ್.ಎಫ್. ಅಕ್ಕಿ, ನಿವೃತ್ತ ಯೋಧ ರುದ್ರಪ್ಪ ಮೂಲಿಮನಿ, ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿ.ಜಿ. ದುಂಡಪ್ಪನವರ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಧರ್ಮಣ್ಣ ಅರಳಿಕಟ್ಟಿ, ಎಸ್ಡಿಎಂಸಿ ಅಧ್ಯಕ್ಷ ಸೋಮಣ್ಣ ಸಕ್ರಿ, ಪಿಡಿಒ ಬಸವರಾಜ ಪೂಜಾರ, ಮುಖ್ಯ ಶಿಕ್ಷಕರಾದ ಗಣೇಶ ರಾಯ್ಕರ್, ಈಶ್ವರ ಕಾಲವಾಡ ಹಾಗೂ ಗ್ರಾಪಂ ಸದಸ್ಯರು, ಎಸ್ಡಿಎಂಸಿ ಪದಾಧಿಕಾರಿಗಳು, ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಳಿಕ ಪ್ರಸಾದ ವ್ಯವಸ್ಥೆ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಉಳವಪ್ಪ ಅಮಾತ್ಯೆಣ್ಣನವರ ಸ್ವಾಗತಿಸಿದರು. ಚಂದ್ರು ಬಡಿಗೇರ ಹಾಗೂ ಮಂಜುನಾಥ ಬಿಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗುರುನಾಥ ಹುಬ್ಬಳ್ಳಿ ವಂದಿಸಿದರು.