ಸಾರಾಂಶ
ಶಿವಪ್ಪ ಮುತ್ಯಾರವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಈ ವೇಳೆ ಅಗ್ನಿ ಹಾಯ್ದು ಹರಕೆಯನ್ನು ಭಕ್ತರು ತೀರಿಸಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ತಾಳಿಕೋಟಿ ರಸ್ತೆ ಮಿನಿವಿಧಾನಸೌಧ ಎದುರುಗಡೆ ಇರುವ ಗುರಸಂಗಪ್ಪ ಕೋಣಿನ ಅವರ ತೋಟದಲ್ಲಿರುವ ಶಿವಯೋಗೀಶ್ವರ ದೇವಸ್ಥಾನ ಜಾತ್ರೆ ಸೋಮವಾರ ಸಡಗರ, ಸಂಭ್ರಮದಿಂದ ಜರುಗಿತು.ಬೆಳಗ್ಗೆ ಅಗ್ನಿಪುಟಿ ಮಾಡುವ ಕಾರ್ಯಕ್ರಮ ಜರುಗಿತು. ನಂತರ ಎತ್ತಿನ ಬಂಡಿಯಲ್ಲಿ ಶಿವಪ್ಪ ಮುತ್ಯಾರವರ ಭಾವಚಿತ್ರ ಮೆರವಣಿಗೆ ಸಕಲ ವಾದ್ಯವೈಭವದೊಂದಿಗೆ ಬಸವ ತೀರ್ಥದಲ್ಲಿ ಪಲ್ಲಕ್ಕಿ ಉತ್ಸವದೊಂದಿಗೆ ಗಂಗಾಸ್ಥಳ ಮುಗಿಸಿ ಪುರವಂತರ ಸೇವೆಯೊಂದಿಗೆ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ವಾದ್ಯಮೇಳದೊಂದಿಗೆ, ಸುಮಂಗಲೆಯರ ಕುಂಭ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುರಸಂಗಪ್ಪ ಕೋಣಿನ ಅವರ ತೋಟಕ್ಕೆ ಪಲ್ಲಕ್ಕಿ ಉತ್ಸವ ಮರಳಿತು.
ಕರ್ತೃಗದ್ದುಗೆಗೆ ಕುಂಭಾಭಿಷೇಕ, ಮಹಾಪೂಜೆ ನೆರವೇರಿದ ನಂತರ ಶಿವಯೋಗೇಶ್ವರ ದೇವಸ್ಥಾನದ ಮುಂಭಾಗ ಭಕ್ತರು ಪಲ್ಲಕ್ಕಿಯೊಂದಿಗೆ ಅಗ್ನಿ ಹಾಯ್ದರು. ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಶಿವಯೋಗೇಶ್ವರ ದೇವಸ್ಥಾನದಲ್ಲಿ ಪೂಜೆ, ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮುತ್ಯಾರವರ ದರ್ಶನ ಪಡೆದು ಕೃತಾರ್ಥರಾದರು.ರಾತ್ರಿ ನಿಡೋಣಿಯ ಬೀರಲಿಂಗೇಶ್ವರ ಡೊಳ್ಳಿನ ಸಂಘ ಹಾಗೂ ನಾಗೂರಿನ ಅಮೋಘಸಿದ್ದೇಶ್ವರ ಡೊಳ್ಳಿನ ಸಂಘದಿಂದ ಡೊಳ್ಳಿನ ಪದಗಳು ಜರುಗಿದವು.
ಪಲ್ಲಕ್ಕಿ ಉತ್ಸವದಲ್ಲಿ ರವಿ ಹಿರೇಮಠ, ಮಲ್ಲಪ್ಪ ಕೋಣಿನ, ಬಸವರಾಜ ಹಾರಿವಾಳ, ಶರಣು ಕೂಡಗಿ, ಪಾವಡೆಪ್ಪ ಕರಮಳ್ಕರ, ದೇವೇಂದ್ರ ಚವ್ಹಾಣ, ಸಂಗಪ್ಪ ವಾಡೇದ, ಶಿವಪ್ಪ ಬಾವೂರ, ಸಿದ್ದಪ್ಪ ಹಿರೇಕುರುಬರ, ಬಸವರಾಜ ಕೋಣಿನ, ನೀಲಗಂಗಾ ಮಲಗೊಂಡ, ಸುನಂದಾ ವಾಡೇದ, ಮಲ್ಲಮ್ಮ ತುಂಬಗಿ, ನಾಗಮ್ಮ ತೋಟದ, ಬಸಮ್ಮ ಕೋಣಿನ ಇತರರು ಭಾಗವಹಿಸಿದ್ದರು.