ಮಲೇಬೆನ್ನೂರು ಸಮೀಪದ ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದ ಕರಿಬಸವೇಶ್ವರ ದೇವಾಲಯಕ್ಕೆ ತೆರಳುವ ಮುಖ್ಯ ಮಾರ್ಗ ಮತ್ತು ನಿಟುವಳ್ಳಿ ರಸ್ತೆಗೆ ಅಡ್ಡಿಯಾಗಿರುವ ಅಂಗಡಿ ಮತ್ತು ಹೋಟೆಲ್‌ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಮುಂದಾಗಿದೆ.

- ಪೊಲೀಸ್‌ ಭದ್ರತೆ: ೬೮ಕ್ಕೂ ಹೆಚ್ಚು ಅಂಗಡಿ, ಹೋಟೆಲ್‌ ತೆರವು

- - -

ಮಲೇಬೆನ್ನೂರು: ಇಲ್ಲಿಗೆ ಸಮೀಪದ ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದ ಕರಿಬಸವೇಶ್ವರ ದೇವಾಲಯಕ್ಕೆ ತೆರಳುವ ಮುಖ್ಯ ಮಾರ್ಗ ಮತ್ತು ನಿಟುವಳ್ಳಿ ರಸ್ತೆಗೆ ಅಡ್ಡಿಯಾಗಿರುವ ಅಂಗಡಿ ಮತ್ತು ಹೋಟೆಲ್‌ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಮುಂದಾಗಿದೆ. ಗ್ರಾಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ಒತ್ತುವರಿ ಅಂಗಡಿಗಳ ತೆರವುಗೊಳಿಸಲು ಸೂಕ್ತ ನಿರ್ಣಯ ತೆಗದುಕೊಂಡು ಕಳೆದ 3 ದಿನಗಳಿಂದ ಜೆಸಿಬಿ ಮೂಲಕ ರಸ್ತೆಯ ಇಕ್ಕೆಲಗಳಲ್ಲಿರುವ ಚರಂಡಿ ಮೇಲೆ ಒತ್ತುವರಿ ಮಾಡಿ, ಅಂಗಡಿ, ಹೋಟೆಲ್‌ಗಳನ್ನು ಹಾಕಿರುವ ಸುಮಾರು ೪೮ ಜನರಿಗೆ ತೆರವುಗೊಳಿಸಲು ಗ್ರಾಪಂ ನೋಟಿಸ್ ನೀಡಿತ್ತು. ಕರಿಬಸವೇಶ್ವರ ಸ್ವಾಮಿ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ತೊಂದರೆಯಾಗುವ ವಿಚಾರ ಸಹ ನೋಟೀಸ್‌ನಲ್ಲಿ ತಿಳಿಸಿ, ಸ್ವಯಂ ತೆರವಿಗೆ 3 ದಿನಗಳ ಕಾಲಾವಕಾಶ ಕೊಡಲಾಗಿತ್ತು.

ಸುಮಾರು ೧೪ ವರ್ಷಗಳಿಂದ ಅಂಗಡಿ, ಹೋಟೆಲ್‌ಗಳನ್ನು ನಡೆಸುತ್ತಲೇ ಜೀವನ ಕಟ್ಟಿಕೊಂಡಿದ್ದೇವೆ. ಬೇರೆ ವ್ಯವಸ್ಥೆ ಮಾಡಿಕೊಡಿ ಎಂದು ಅಂಗಡಿ ಮಾಲೀಕರು ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರು. ಕ್ಷೇತ್ರಕ್ಕೆ ಬೇರೆ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಲಿದ್ದಾರೆ. ದಿನೇದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಚಿಕ್ಕ ರಸ್ತೆಯಲ್ಲಿ ಸಹಸ್ರಾರು ಭಕ್ತರ ಸಂಚಾರ ಕಷ್ಟವಾಗುತ್ತದೆ. ಅನಾಹುತಗಳು ತಪ್ಪಿಸಲು ಸಹಕರಿಸಬೇಕು ಎಂದು ಪಿಡಿಒ ರಾಮಚಂದ್ರಪ್ಪ ಹಾಗೂ ಸದಸ್ಯರು ಅಂಗಡಿ ಮಾಲೀಕರ ಮನವೊಲಿಸಿದರು.

ಅನಂತರ ಅವರೇ ಸ್ವತಃ ಸಾಮಾನುಗಳನ್ನು ಬೇರೆಡೆ ಸಾಗಿಸಿದರು. ಒಟ್ಟು ೬೮ಕ್ಕೂ ಹೆಚ್ಚು ಅಂಗಡಿ, ಹೋಟೆಲ್‌ಗಳ ತೆರವು ಕಾರ್ಯವನ್ನು ಪೊಲೀಸರ ಭದ್ರತೆಯಲ್ಲಿ ಜೆಸಿಬಿ ಮೂಲಕ ತೆರವು ಮಾಡಲಾಯಿತು.

- - -

-ಚಿತ್ರ೨: ಜೆಸಿಬಿ ಮೂಲಕ ಅಂಗಡಿಗಳ ತೆರವು ಕಾರ್ಯ ನಡೆಯಿತು.