ಜೀವನ ಮಿಡಿತಗಳಿಗೆ ತಿರುವು ನೀಡುವ ಸಣ್ಣಕಥೆಗಳು
KannadaprabhaNewsNetwork | Published : Oct 19 2023, 12:45 AM IST
ಜೀವನ ಮಿಡಿತಗಳಿಗೆ ತಿರುವು ನೀಡುವ ಸಣ್ಣಕಥೆಗಳು
ಸಾರಾಂಶ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದಸರಾ ಕಥಾ ಸಂಭ್ರಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜೀವನದ ಪ್ರತಿಯೊಂದು ಅನುಭವ ಮತ್ತು ಮಿಡಿತಗಳಿಗೆ ತಿರುವು ನೀಡುವ ಶಕ್ತಿ ಸಣ್ಣಕಥೆಗಳಿಗೆ ಇದೆ ಎಂದು ಹಿರಿಯ ಸಾಹಿತಿ ಪ್ರೊ. ಎಂ.ಬಿ. ನಟರಾಜ ಅಭಿಪ್ರಾಯಪಟ್ಟರು. ನಗರದ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ದಸರಾ ಕಥಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಮಾಯಣ ಮತ್ತು ಮಹಾಭಾರತ ಕಥೆಯು ನಮ್ಮ ಪರಂಪರೆ ಪ್ರತಿನಿಧಿಸಲಿದೆ. ಅದರ ಮುಂದುವರಿದ ಭಾಗವಾಗಿ ಜನಪದ ಸಾಹಿತ್ಯ ಕಥೆಗಳ ರಚನೆ ಹಾಗೂ ವಿವಿಧ ಪ್ರಕಾರಗಳಲ್ಲಿ ವಾಚಿಸುವ ಪರಂಪರೆಯನ್ನು ಪ್ರಾರಂಭಿಸಲಾಯಿತು. ಜನರ ಜ್ಞಾನ ವಿಸ್ತಾರದಲ್ಲಿ ಸಣ್ಣಕಥೆಗಳು ಮಹತ್ವ ಪಡೆದುಕೊಂಡಿವೆ. ಅಂತಹ ಅತ್ಯಮೂಲ್ಯ ಕಥೆಗಳನ್ನು ಜೋಪಾನ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು. ಸಮಾಜದಲ್ಲಿ ಜನರ ಚಿಂತನೆಗಳು ಬದಲಾದಂತೆಲ್ಲಾ, ಕಥೆ ಬರೆಯುವ ಪ್ರಕಾರಗಳು ಬದಲಾಗುತ್ತಿವೆ. ಯುವಸಮೂಹ ತಮ್ಮ ಜೀವನಾನುಭಗಳನ್ನು ಸಣ್ಣಕಥೆಗಳ ಮೂಲಕ ಅತ್ಯಮೂಲ್ಯವಾಗಿ ಹಿಡಿದಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು. ಮುಖ್ಯ ಅತಿಥಿ ಐಎಫ್ಎಸ್ ಅಧಿಕಾರಿ ಮುಕುಂದಚಂದ್ರ ಮಾತನಾಡಿ, ಭಾಷೆ ಬೆಳೆಸಿದಂತೆಲ್ಲ ಬೆಳೆಯುತ್ತಾ ಜೀವಂತವಾಗಿರುತ್ತದೆ. ಅಂತಹ ಜೀವಂತಿಕೆ ಸಾಧ್ಯವಾಗುವುದು ಅತ್ಯುತ್ತಮ ಸಾಹಿತ್ಯ ಕೃತಿಗಳಿಂದ. ಸಣ್ಣಕಥೆಗಳು ಬದುಕಿಗೆ ಅನೇಕ ಪ್ರೇರಣಾ ವೈಶಿಷ್ಟ್ಯ ನೀಡಲಿವೆ. ಕನ್ನಡ ಸಣ್ಣಕಥೆ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಇತ್ತೀಚೆಗೆ ಇತರ ಭಾಷೆಗಳಿಂದ ಅನೇಕ ಕಥೆಗಳು ಅನುವಾದವಾಗಿ ಬರುತ್ತಿರುವುದು ಒಂದು ಸಂತೋಷದಾಯಕ ಸಂಗತಿ ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಚಂದ್ರೇಗೌಡ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ ಉಪಸ್ಥಿತರಿದ್ದರು. ಕಥೆಗಾರರಾದ ಸಿಮ್ಸ್ ಕಾಲೇಜು ವೈದ್ಯರಾದ ಡಾ. ಕೆ.ಎಸ್. ಗಂಗಾಧರ, ಕುವೆಂಪು ವಿ.ವಿ.ಯ ಡಾ.ಹಸೀನಾ, ನೇತ್ರಾವತಿ ಆಯನೂರು, ಎನ್ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ, ಮೇದಿನಿ ಕೆಸಿನಮನೆ, ಡಿ.ಎಚ್. ಸೂರ್ಯಪ್ರಕಾಶ್, ಸೊರಬದ ರಾಜ್ ಗೋಕಲೆ, ಭದ್ರಾವತಿ ನಾಗೋಜಿ ರಾವ್, ಡಾ. ಕೆ.ಜಿ. ವೆಂಕಟೇಶ್, ಶ್ರೀನಿವಾಸ ನಗಲಾಪುರ ಸಣ್ಣಕಥೆ ವಾಚಿಸಿದರು. - - - -ಪೋಟೋ: ಶಿವಮೊಗ್ಗ ನಗರದ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ದಸರಾ ಕಥಾ ಸಂಭ್ರಮ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಪ್ರೊ. ಎಂ.ಬಿ. ನಟರಾಜ ಉದ್ಘಾಟಿಸಿದರು.