ಒಬಿಸಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ಒಗ್ಗಟ್ಟು ಪ್ರದರ್ಶಿಸಿ

| Published : Oct 08 2024, 01:06 AM IST

ಸಾರಾಂಶ

ವೀರಶೈವ-ಲಿಂಗಾಯತ ಸಮಾಜದ ಎಲ್ಲ ಉಪಪಂಗಡಗಳ ಮುಖಂಡರು ಒಬಿಸಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ಒಗ್ಗಟ್ಟು ಪ್ರದರ್ಶಿಸಿದರೆ ಖಂಡಿತವಾಗಿಯೂ ನಾವು ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಿದೆ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಧಾರವಾಡ:

ವೀರಶೈವ-ಲಿಂಗಾಯತ ಸಮಾಜಕ್ಕೆ ಕೇಂದ್ರದ ಇತರ ಹಿಂದುಳಿದ ಜಾತಿ (ಒಬಿಸಿ) ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಮಾಜ ಬಾಂಧವರು ಒಗ್ಗಟ್ಟಾಗಿ ಪ್ರಯತ್ನಿಸುವುದು ಅಗತ್ಯ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.

ಇಲ್ಲಿಯ ಲಿಂಗಾಯತ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಭಾನುವಾರ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಉದ್ಘಾಟಿಸಿ ಅವರು ಮಾತನಾಡಿದರು. ವೀರಶೈವ-ಲಿಂಗಾಯತ ಸಮಾಜದ ಎಲ್ಲ ಉಪಪಂಗಡಗಳ ಮುಖಂಡರು ಈ ದಿಸೆಯಲ್ಲಿ ಯತ್ನಿಸಿದರೆ ಖಂಡಿತವಾಗಿಯೂ ನಾವು ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಿದೆ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಮಾಜದ ಶಾಸಕರ ಸಹಕಾರದಿಂದ ಬಣಜಿಗ ಸಮಾಜಕ್ಕೆ 2ಎ ಸೌಲಭ್ಯ ಕೊಡಿಸಿದೆ. ಇದರಿಂದ ಸಮಾಜದ ಬಡ ಮಕ್ಕಳು ಶಿಕ್ಷಣ ಹಾಗೂ ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗಿದೆ. ಬಣಜಿಗ ಸಮಾಜದ ಪ್ರತಿಭಾವಂತ ಮಕ್ಕಳನ್ನು ಸತ್ಕರಿಸುತ್ತಿರುವುದು ಶ್ಲಾಘನೀಯ. ಇದರೊಂದಿಗೆ ವೀರಶೈವ-ಲಿಂಗಾಯತ ಸಮಾಜದ ಏಕತೆ ನಮ್ಮ ಮುಖ್ಯ ಉದ್ದೇಶವಾಗಿರಬೇಕು. ಲಿಂಗಾಯತ ಇತರ ಉಪಪಂಗಳಡದವರೊಂದಿಗೆ ಸೌಹಾರ್ದತೆಯಿಂದ ಇರಬೇಕು. ಉಪ ಪಂಗಡಗಳ ಜನರೊಂದಿಗೆ ಬೀಗತನ ನಡೆಯಬೇಕು. ಎಲ್ಲ ಉಪ ಪಂಗಡದವರು ಒಗ್ಗಟ್ಟಾಗಿದ್ದರೆ ಮಾತ್ರ ಸೌಕರ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬಣಜಿಗ ಸಮಾಜ ಬಸವಣ್ಣನ ಆದರ್ಶಗಳ್ನು ಪಾಲಿಸುವ ಸಮಾಜವಾಗಿದ್ದು, ತಾಳ್ಮೆ, ಇತರರನ್ನು ಗೌರವಿಸುವುದು, ಸಂಘರ್ಷ ರಹಿತ, ದ್ವೇಷ ರಹಿತ ಗುಣಗಳು ಸಮಾಜ ಬಾಂಧವರ ಹಿರಿಮೆಗಳಾಗಿವೆ. ನಾನು ರಾಜ್ಯಾದ್ಯಂತ ಬಣಜಿಗ ಸಮಾಜದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಜಿಲ್ಲಾ ಹಾಗೂ ತಾಲೂಕು ಘಟಕಗಳು ಕ್ರಿಯಾಶೀಲವಾಗಿದ್ದು, ರಾಜ್ಯಮಟ್ಟದ ಕೇಂದ್ರ ಸಮಿತಿ ನಿಷ್ಟ್ರೀಯಗೊಂಡಿದೆ. ಅದನ್ನು ಕ್ರಿಯಾಶೀಲಗೊಳಿಸುವ ದಿಸೆಯಲ್ಲಿ ಸಮಾಜದ ಹಿರಿಯರು ಕಾರ್ಯೋನ್ಮುಖರಾಗಬೇಕು ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಬಣಜಿಗ ಸಮಾಜದ ಮಕ್ಕಳು ಕೇವಲ ಅಂಕಗಳ ಬೆನ್ನು ಹತ್ತುವುದು ಸರಿಯಲ್ಲ. ಅಂಕಗಳಿಕೆ ಮುಖ್ಯವಾದರೂ ಕೇವಲ ಅಂಕಗಳಿಗೆಯೊಂದೇ ಅಂತಿಮವಲ್ಲ. ಶೇ. 35ರಷ್ಟು ಅಂಕಗಳಿಸಿದರೂ ಜೀವನದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಬಣಜಿಗರಲ್ಲಿದೆ. ಸಾಧನೆ ಮಾಡಲು ಹಲವು ಕ್ಷೇತ್ರಗಳಿವೆ ಎಂಬುದನ್ನು ಯುವಕರು ಮರೆಯಬಾರದು ಎಂದರು.

ವಿಪ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿದರು. ಅರುಣಕುಮಾರ ಶೀಲವಂತ ಅಧ್ಯಕ್ಷತೆ ವಹಿಸಿದ್ದರು. ಡಾ. ವಿ.ಸಿ. ಸವಡಿ ಪ್ರಾಸ್ತಾವಿಕ ಮಾತನಾಡಿದರು. ವಿಪ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಶರಣಪ್ಪ ಕೊಟಗಿ, ಮಲ್ಲಿಕಾರ್ಜುನ ಸಾವಕಾರ, ಪ್ರೇಮಕ್ಕ ಅಂಗಡಿ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ, ಸವಿತಾ ಅಮರಶೆಟ್ಟಿ, ವೀರಣ್ಣ ಮಳಗಿ, ಇದ್ದರು. ಮಹಾಂತೇಶ ಗುಂಜೆಟ್ಟಿ ಸ್ವಾಗತಿಸಿದರು. ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು.