ಸಾರಾಂಶ
ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಇಂತಹ ಕಾರ್ಯಗಳು ನಮ್ಮ ಮನಸ್ಸುಗಳನ್ನು ಬೆಸೆಯುತ್ತವೆ. ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುತ್ತವೆ. ನಮ್ಮ ಬೆಳವಣಿಗೆಗೆ ಕಾರಣರಾದವರ ನೆನೆಯುವುದು ಶ್ರೇಷ್ಠ ಕಾರ್ಯ
ಕೊಪ್ಪಳ: ಗುರುವಂದನೆ ಗುರು, ಶಿಷ್ಯರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.ನಗರದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ (ಎಂಎಚ್ಪಿಎಸ್) ಶಾಲೆಯ ೧೯೯೨-೯೩ನೇ ಸಾಲಿನ ಹಳೆಯ ವಿದ್ಯಾರ್ಥಿ ಬಳಗದಿಂದ ಜರುಗಿದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಇಂತಹ ಕಾರ್ಯಗಳು ನಮ್ಮ ಮನಸ್ಸುಗಳನ್ನು ಬೆಸೆಯುತ್ತವೆ. ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುತ್ತವೆ. ನಮ್ಮ ಬೆಳವಣಿಗೆಗೆ ಕಾರಣರಾದವರ ನೆನೆಯುವುದು ಶ್ರೇಷ್ಠ ಕಾರ್ಯ ಎಂದರು.ಶಿಕ್ಷಕ ಪ್ರಾಣೇಶ ಮಾತನಾಡಿ, ತಮ್ಮ ನಿವೃತ್ತಿ ಜೀವನ ಸುಖಮಯವಾಗಿರಲು ಕಾರಣವೇ ತಮ್ಮ ವೃತ್ತಿ ಜೀವನದಲ್ಲಿ ಮಾಡಿದ ಉತ್ತಮ ಕೆಲಸವಾಗಿದೆ. ಮಕ್ಕಳಿಗೆ ಪರಿಪೂರ್ಣವಾಗಿ ಸೇವೆ ಮಾಡಿದ ತೃಪ್ತಿ ಇದೆ. ಎಲ್ಲರೂ ತಮ್ಮ ಪಾಲಿಗೆ ಬಂದ ಸೇವೆಯನ್ನು ಚೆನ್ನಾಗಿ ಮಾಡಬೇಕು. ತಮ್ಮ ಶಿಷ್ಯರು ದೊಡ್ಡ ಸ್ಥಾನದಲ್ಲಿ ಇರುವುದು ಹೆಮ್ಮೆಯ ಸಂಗತಿ ಎಂದರು.
೧೯೯೨-೯೩ನೇ ಸಾಲಿನಲ್ಲಿ ೭ನೇ ತರಗತಿ ತೇರ್ಗಡೆ ಹೊಂದಿದ ಸುಮಾರು ೮೦ ವಿದ್ಯಾರ್ಥಿಗಳು ೩೦ ವರ್ಷಗಳ ನಂತರ ಪರಸ್ಪರ ಭೇಟಿಯಾದರು. ಆ ವೇಳೆ ಎಂಎಚ್ಪಿಎಸ್ ಶಾಲೆ ಕ್ರೀಡೆ ವಿಶೇಷವಾಗಿ ಲೇಜಿಮ್ ಕಲಿಕೆಯಲ್ಲಿ ಹೆಸರಾಗಿತ್ತು. ಆ ನೆನಪನ್ನು ಮತ್ತೆ ಹಸಿರಾಗಿಸಲು ಎಲ್ಲ ಹಳೆಯ ವಿದ್ಯಾರ್ಥಿನಿಯರು ಲೇಜಿಮ್ ಮಾಡಿ ಪುಷ್ಪವೃಷ್ಠಿ ಮಾಡುವ ಮೂಲಕ ಶಿಕ್ಷಕರನ್ನು ಸ್ವಾಗತಿಸಿದರು.ಶಾಲೆಯ ಶಿಕ್ಷಕರಾದ ಪ್ರಾಣೇಶ್ ಎಚ್. ಅಜ್ಜಪ್ಪ ಏಳುಬಾವಿ, ವಿರುಪಾಕ್ಷಪ್ಪ ಮೇಟಿ, ಲಕ್ಷ್ಮೀಬಾಯಿ ಯಾಳಗಿ, ಅಕ್ಕಮಹಾದೇವಿ ಕಲಹಾಳ, ಉಷಾ ಯಾದಗೀರಕರ್, ನಾಗಮ್ಮ ಯಲಬುರ್ಗಾ, ಗುಂಡಮ್ಮ ಪಾಟೀಲ್, ಪರಿಮಳ ಕುಲಕರ್ಣಿ, ಅಸ್ಮತ್ಬೇಗಂ ಹಾಗೂ ಮರಣ ಹೊಂದಿದ ಕೆಲವು ಶಿಕ್ಷಕರ ಪರವಾಗಿ ಅವರ ಕುಟುಂಬದವರನ್ನು ಕರೆಸಿ ಸನ್ಮಾನಿಸಲಾಯಿತು.ಮಂಜುಳಾ ಡಿ. ಪ್ರಾರ್ಥಿಸಿದರು. ಸಜ್ಜಾದ ಹುಸೇನ್ ಸ್ವಾಗತಿಸಿದರು. ಜಗದೀಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ಪಾಟೀಲ್ ನಿರೂಪಿಸಿದರು. ಸಿದ್ದು ಬುಳ್ಳಾ ವಂದಿಸಿದರು. ರೋಹಿಣಿ, ಗಿರೀಶ್ ಬಡಿಗೇರ್, ಮಂಜುನಾಥ ಕೆ., ವಂದನಾ ಪದಕಿ, ರೇಣುಕರಾಜ್ ತಮ್ಮ ನೆನಪುಗಳನ್ನು ಹಂಚಿಕೊಂಡರು.ಎಂಎಚ್ಪಿಎಸ್ ಶಾಲೆಯ ಹಳೆಯ ಕಟ್ಟಡವನ್ನು ಕೆಡವಿ ಗುರುಭವನ ಕಟ್ಟುವ ಪ್ರಯತ್ನ ನಡೆದಿದ್ದು, ಅದೊಂದು ಐತಿಹಾಸಿಕ ಸ್ಮಾರಕವಾಗಿದೆ. ಹಾಗೆಯೇ ಉಳಿಸಿ ಜೀರ್ಣೋದ್ಧಾರ ಮಾಡುವ ನಿರ್ಧಾರ ಮಾಡಲಾಗಿದೆ. ಅವಶ್ಯ ಬಿದ್ದರೆ ಅದಕ್ಕೆ ಆರ್ಥಿಕ ನೆರವು ಕೊಡುವ ವಿಷಯಕ್ಕೆ ಹಳೆಯ ವಿದ್ಯಾರ್ಥಿಗಳು ಸಮ್ಮತಿ ಸೂಚಿಸಿದರು.