ದೇವಾಲಯ ಸೇರಿದಂತೆ ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರ, ದೀಪಾಲಂಕಾರ ಇತರೆ ಸೇವೆಗಳು ನಡೆದು ಬೆಳಗ್ಗೆ 8 ಗಂಟೆಗೆ ಮಹಾಸಂಕಲ್ಪ, ಕಲಶ ಸ್ಥಾಪನೆ, ಸಪ್ತಶತಿ ಪಾರಾಯಣ, ಕಲಶ ಪೂಜೆಯಿಂದ ಪ್ರಾರಂಭಗೊಂಡು ನಿಮಿಷಾಂಬ ಹೋಮ ಪೂರ್ಣಾಹುತಿಯೊಂದಿಗೆ 121 ಕಲಶಗಳ ಮಹಾಭಿಷೇಕ, ಅಷ್ಟದಿಗ್ಬಲಿ ಪೂಜೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣ ಪುರಸಭಾ ವ್ಯಾಪ್ತಿಯ ಗಂಜಾಂನಲ್ಲಿರುವ ಐತಿಹಾಸಿಕ ಪ್ರಸಿದ್ಧ ಅದಿದೇವತೆ ನಿಮಿಷಾಂಬ ದೇವಿ ವರ್ಧಂತ್ಯುತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು.

ಅಮ್ಮನವರ ಜಯಂತ್ಯುತ್ಸವದ ಅಂಗವಾಗಿ ಕಾವೇರಿ ನದಿಯಿಂದ ಪೂರ್ಣಕುಂಭ ಕಳಸ ತಂದು ಪ್ರತಿಸ್ಥಾಪನೆ ಮಾಡಿ, ದೇವಾಲಯದಲ್ಲಿ ದೇವಿಗೆ ವಜ್ರ ವೈಡೂರ್ಯ ಹಾಗೂ ವಿಶೇಷ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ, ಹೋಮ- ಹವನಗಳು ನಡೆದು ಪೂರ್ಣಾಹುತಿ ನಡೆಸಲಾಯಿತು.

ದೇವಾಲಯ ಸೇರಿದಂತೆ ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರ, ದೀಪಾಲಂಕಾರ ಇತರೆ ಸೇವೆಗಳು ನಡೆದು ಬೆಳಗ್ಗೆ 8 ಗಂಟೆಗೆ ಮಹಾಸಂಕಲ್ಪ, ಕಲಶ ಸ್ಥಾಪನೆ, ಸಪ್ತಶತಿ ಪಾರಾಯಣ, ಕಲಶ ಪೂಜೆಯಿಂದ ಪ್ರಾರಂಭಗೊಂಡು ನಿಮಿಷಾಂಬ ಹೋಮ ಪೂರ್ಣಾಹುತಿಯೊಂದಿಗೆ 121 ಕಲಶಗಳ ಮಹಾಭಿಷೇಕ, ಅಷ್ಟದಿಗ್ಬಲಿ ಪೂಜೆ ಕಾರ್ಯಕ್ರಮ ನಡೆಯಿತು.

ದೇವಿ ದರ್ಶನಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ದೇವಾಲಯದಿಂದ ಪ್ರಸಾದ ವಿತರಿಸಲಾಯಿತು. ನಂತರ ಸಂಜೆ ದಕ್ಷಿಣ ಗಂಗೆ ಕಾವೇರಿ ಮಹಾ ಮಂಗಳಾರತಿ, ಪ್ರಾಕಾರೋತ್ಸವ ಸೇವೆಗಳು ವೈಭವಯುತವಾಗಿ ಜರುಗಿ ಸಾವಿರಾರು ಭಕ್ತರು ಪಾಲ್ಗೊಂಡು ವಿಶೇಷ ದರ್ಶನ ಪಡೆದರು.

ರಾತ್ರಿ ಶ್ರೀನಿಮಿಷಾಂಬ ದೇವಿ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಪ್ರತಿಸ್ಥಾಪಿಸಿ ಬಗೆ ಬಗೆಯ ಹೂವು ವಿದ್ಯುತ್ ದೀಪಗಳಿಂದ ಅಲಂಕರಿಸಿ ಗಂಜಾಂನ ಪ್ರಮುಖ ಬೀದಿಯಲ್ಲಿ ಮಂಗಳ ವಾದ್ಯದೊಂದಿಗೆ ರಸ್ತೆ ಉದ್ದಕ್ಕೂ ಪಟಾಕಿ ಸಿಡಿಸಿ ಮೆರವಣಿಗೆ ಮಾಡಲಾಯಿತು. ರಸ್ತೆಯಲ್ಲಿ ದೇವಿ ಮೆರವಣಿಗೆ ಬರುವಾಗ ಮನೆ ಮನೆಗಳಲ್ಲಿ ಭಕ್ತರು ದೇವಿಗೆ ಹಣ್ಣು ಕಾಯಿ ಹೊಡೆದು ಆರತಿ ಪೂಜೆ ಸಲ್ಲಿಸಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ತಹಸೀಲ್ದಾರ್ ಚೇತನ ಯಾದವ್‍, ಶಾಸಕರ ಪತ್ನಿ ಸುಮತಿ ರಮೇಶ್‌ ಬಂಡಿಸಿದ್ದೇಗೌಡ, ದೇವಾಲಯದ ಇಒ ಮಹೇಶ್‍, ಪುರಸಭೆ ಮಾಜಿ ಅಧ್ಯಕ್ಷ ಎಂ.ಎಲ್.ದಿನೇಶ್, ದೇವಾಲಯದ ಸಮಿತಿ ಅಧ್ಯಕ್ಷ ದಯಾನಂದ್, ಸಮಿತಿ ಸದಸ್ಯರಾದ ಬಾಲಸುಬ್ರಮಣ್ಯ, ಸೂರ್ಯನಾರಾಯಣ ಭಟ್‍, ಪೂರ್ಣಪ್ರಜ್ಞಮೂರ್ತಿ, ಟಿ.ಕೃಷ್ಣ, ಕೃಷ್ಣಾಚಾರಿ, ಭಾಗ್ಯಲಕ್ಷ್ಮಿ, ರಂಗಸ್ವಾಮಿ, ಸುಮಲತಾ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಸ್ಥರು ಭಾಗವಹಿಸಿದ್ದರು.