ತುಮಕೂರು ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ತುಮಕೂರು ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಿಲ್ಲಾಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಚೀಟಿ ಪಡೆಯಲು ಮತ್ತು ಇತರೆ ಕೆಲಸಗಳಿಗಾಗಿ ಜನಜಂಗುಳಿ ಇರುವ ಸಂಬಂಧ ಜಿಲ್ಲಾ ಶಸ್ತ್ರಚಿಕಿತ್ಸಕ ಅಸ್ಗರ್ ಬೇಗ್ ಅವರನ್ನು ಸ್ಥಳಕ್ಕೆ ಕರೆದು ವಿಚಾರಿಸಿದರು. ಬೆಳಿಗ್ಗೆ 10.30 ರವರೆಗೂ ಹೊರ ರೋಗಿಗಳ ವಿಭಾಗದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿರುವುದನ್ನು ಗಮನಿಸಿದ ಅವರು, 2 ಕೌಂಟರ್ಗಳಲ್ಲಿ ಮಾಡಿದರೂ ಪ್ರತಿದಿನ ಸುಮಾರು 1800 ರೋಗಿಗಳು ಭೇಟಿ ನೀಡುತ್ತಿದ್ದಾರೆ. ಈ ಪೈಕಿ ದಿನವೂ 110ಕ್ಕೂ ಹೆಚ್ಚು ರೋಗಿಗಳು ದಾಖಲಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು, ಹೊರ ರೋಗಿಗಳ ವಿಭಾಗದ ವೈದ್ಯರೊಂದಿಗೆ ಚರ್ಚಿಸಿ ಆದಷ್ಟೂ ಶೀಘ್ರ ರೋಗಿಗಳಿಗೆ ಚಿಕಿತ್ಸೆ ಹಾಗೂ ಅವರಿಗೆ ಸೂಕ್ತ ಸೇವೆಯನ್ನು ಒದಗಿಸುವಂತೆ ಸೂಚಿಸಿದರು.
ನಂತರ ಸಾರ್ವಜನಿಕರ ರಕ್ತ ಪರೀಕ್ಷೆ, ಇನ್ನಿತರ ಪರೀಕ್ಷೆಗಳ ಏಕಗವಾಕ್ಷಿ ಪ್ರಯೋಗಾಲಯ (ಐಪಿಎಚ್ಎಲ್)ಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪ್ರಯೋಗಾಲಯಕ್ಕೆ ಸಂಬಂಧಿಸಿದ ರಾಸಾಯನಿಕಗಳ ಪೂರೈಕೆ ಟೆಂಡರ್ ಪೂರ್ಣಗೊಂಡಿದ್ದು, ತಕ್ಷಣ ಪ್ರಯೋಗಾಲಯ ತನ್ನ ಸೇವೆಯನ್ನು ಪ್ರಾರಂಭಿಸುವಂತೆ ಸ್ಥಳದಲ್ಲೇ ಆದೇಶ ನೀಡಿದರು. ಅಲ್ಲದೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕೂಡ ತಕ್ಷಣ ಕಾರ್ಯಾರಂಭ ಆಗಬೇಕೆಂದು ಅವರು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ರೋಗಿಗಳೊಂದಿಗೆ ಹಾಗೂ ಆಸ್ಪತ್ರೆ ವೈದ್ಯರೂ ಹಾಗೂ ಸಿಬ್ಬಂದಿಯ ಅಹವಾಲುಗಳನ್ನು ಕೇಳಿದ ಅವರು, ಆಸ್ಪತ್ರೆ ಸುಗಮ ಆಡಳಿತ ಹಾಗೂ ರೋಗಗಳಿಗೆ ಗುಣಮಟ್ಟದ ಸೇವೆ ಸಿಗುವಂತೆ ಕ್ರಮವಹಿಸಲು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚನೆ ನೀಡಿದರು.
