ಸಾರಾಂಶ
ಶಿಗ್ಗಾಂವಿ: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಬಡ ಹಾಗೂ ಶೋಷಿತ ಸಮುದಾಯದ ಮಕ್ಕಳ ಶೈಕ್ಷಣಿಕ ಶ್ರೇಯಸ್ಸಿಗೆ ತಮ್ಮ ಬದುಕನ್ನು ಮುಡುಪಿಟ್ಟಿದ್ದರು. ಬರಗಾಲದಂಥ ಭೀಕರ ದಿನಗಳಲ್ಲೂ ಜೋಳಿಗೆ ಹಿಡಿದು ಮಠದಲ್ಲಿ ಆಶ್ರಯ ಪಡೆದಿದ್ದ ಮಕ್ಕಳ ಹಸಿವನ್ನು ಇಂಗಿಸಿದ್ದರು. ಜತೆಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು ಎಂದು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಬಳಗದ ಸುರೇಶ ಅರಳಿಕಟ್ಟಿ ತಿಳಿಸಿದರು.ತಾಲೂಕಿನ ಮುಗಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ತುಮಕೂರು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಬಳಗದಿಂದ ನಡೆದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ೧೧೮ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಕ್ಷರ ಮತ್ತು ಅನ್ನ ದಾಸೋಹದ ಮೂಲಕ ಮನುಕುಲದ ಸರ್ವಾಂಗೀಣ ಏಳ್ಗೆಗೆ ಬದುಕನ್ನು ಮೀಸಲಿಟ್ಟ ಮಹಾತ್ಮರಲ್ಲಿ ಶಿವಕುಮಾರ ಸ್ವಾಮೀಜಿ ಅವರ ಕಾಯಕ ನಿಷ್ಠೆ ಸರ್ವ ಶ್ರೇಷ್ಠವಾಗಿದೆ. ಅಂತಹ ಮಹಾತ್ಮರ ಕಾಯಕ, ಸಂದೇಶಗಳು ಮನುಕುಲ ವಿಕಾಸಕ್ಕೆ ಸಾಧ್ಯವಾಗಿದೆ. ಅವರು ತೋರಿದ ಮಾರ್ಗದಲ್ಲಿ ನಡೆಯೋಣ ಎಂದರು.ನಡೆ- ನುಡಿ ಹಾಗೂ ಆಚಾರ ವಿಚಾರಗಳ ಸಮ್ಮಿಲಿತ ಜೀವನ ಸವೆಸಿದ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಯವರು ಆಧ್ಯಾತ್ಮಿಕ ತಳಹದಿಯಡಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ಶೈಕ್ಷಣಿಕ ಕಾಳಜಿ ಪ್ರದರ್ಶಿಸಿದರು ಎಂದರು.ಶಿಕ್ಷಕ ಶಾಂತಪ್ಪ ಮೂಡಲದವರ ಮಾತನಾಡಿ, ದೈವಾಂಶ ಸಂಭೂತರು ಹಾಗೂ ಲಿಂಗಪೂಜಾ ನಿಷ್ಠರೂ ಆಗಿದ್ದ ಶಿವಕುಮಾರ ಸ್ವಾಮೀಜಿ ಮಠದ ವಿದ್ಯಾರ್ಥಿಗಳ ಹೊಟ್ಟೆ ಮತ್ತು ಜ್ಞಾನದ ಹಸಿವನ್ನು ಇಂಗಿಸಿ ಲೋಕಕ್ಕೆ ಮಾದರಿಯಾದರು. ಸಿದ್ಧಗಂಗಾ ಮಠದಲ್ಲಿದ್ದು ಅಧ್ಯಯನ ಮಾಡಿದ ಪ್ರತಿಯೊಬ್ಬರೂ ಧನ್ಯರು ಎಂದರು.ಶಿಕ್ಷಕರಾದ ವಿಜಯ ದೇಶಪಾಂಡೆ, ಬಿ.ಜಿ. ಕಂಕಣವಾಡ, ಕಸ್ತೂರಿ ಗೌರಿಹಳ್ಳಿ, ಲಕ್ಷ್ಮೀ ಕಲಕೋಟಿ, ಶೀಲಾ ಪಾಟೀಲ, ಪ್ರತಿಭಾ ತಿಮ್ಮಾಪುರ, ಎ. ಮೀರಾಬಾಯಿ, ವಿಶಾಲಾಕ್ಷಿ ಮಂಟೂರ, ಮಂಜುಳಾ ಎಫ್.ವಿ., ಕವಿತಾ ಭರಮಗೌಡ್ರ, ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಬಳಗದ ನಾಗರಾಜ ರಾಮಗೇರಿ, ನಾಗರಾಜ ಕೂಡಲ, ಶಿವಾನಂದ ಡವಗಿ, ಎಸ್ಡಿಎಂಸಿ ಅಧ್ಯಕ್ಷ ಸೋಮಣ್ಣ ಸಕ್ರಿ, ಚಂದ್ರು ದುಂಡಪ್ಪನವರ, ಈಶ್ವರ ಕಾಲವಾಡ, ನಾಗನಗೌಡ ಪಾಟೀಲ ಹಾಗೂ ಮಹಾಂತೇಶ ಗೊಬ್ಬಿ ಇದ್ದರು.ಸಾರ್ವಜನಿಕರ ಹಿತರಕ್ಷಣೆಗೆ ಪೊಲೀಸರ ಕಾರ್ಯ ಅನನ್ಯ
ಶಿಗ್ಗಾಂವಿ: ಕರ್ತವ್ಯನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಪೊಲೀಸರ ಸೇವೆ ಅಪಾರ. ಸಾರ್ವಜನಿಕರ ಹಿತರಕ್ಷಣೆಗಾಗಿ ತಮ್ಮ ಬದುಕನ್ನು ಮೀಸಲಾಗಿಡುವ ಮೂಲಕ ಸೈನಿಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತಹ ಪೊಲೀಸರ ಸೇವೆ ಶ್ಲಾಘನೀಯ ಎಂದು ನಿವೃತ್ತ ಕಮಾಂಡಂಟ್ ವೀರಣ್ಣ ಅಂದಾನೆಪ್ಪ ಜಿರಾಳೆ ತಿಳಿಸಿದರು.ತಾಲೂಕಿನ ಗಂಗೆಭಾವಿ ಕೆಎಸ್ಆರ್ಪಿ ೧೦ನೇ ಪಡೆ ಆವರಣದಲ್ಲಿ ಬುಧವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೆಎಸ್ಆರ್ಪಿ ೧೦ನೇ ಪಡೆ ಆರಂಭದಲ್ಲಿ ಏರುಪೇರುಗಳನ್ನು ಕಂಡಿದೆ. ಆರಂಭದ ಕಮಾಂಡೆಂಟ್ರಾಗಿ ಸೇವೆ ಸಲ್ಲಿಸುತ್ತಿದ್ದು, ಅದರ ಏಳ್ಗೆಗೆ ಸಾಕಷ್ಟು, ಸಿಬ್ಬಂದಿ ಕೊಡುಗೆ ನೀಡಿದ್ದಾರೆ. ಇಲ್ಲಿಯ ಸಿಬ್ಬಂದಿಯ ಮಕ್ಕಳು ಸಹ ಉನ್ನತ ಹುದ್ದೆಯಲ್ಲಿದ್ದಾರೆ. ಕಷ್ಟ ಕಾರ್ಪಣ್ಯದಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ವೇಳೆ ೨೦ ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ೮ ಪೊಲೀಸ್ ತುಕಡಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು. ಹುಬ್ಬಳ್ಳಿಯ ಕಮಾಂಡೆಂಟ್ ವಿಶ್ವನಾಥ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಾಯಕ ಕಮಾಂಡೆಂಟ್ರಾದ ದಾವಲಸಾಬ್ ಯಲಿಗಾರ, ಸುಲೇಮಾನ ಹಂಚಿನಮನಿ, ಕೆ.ಸಿ. ಕೊಳಕರ ಸೇರಿದಂತೆ ಕೆಎಸ್ಆರ್ಪಿ ೧೦ನೇ ಪಡೆಯ ಅಧಿಕಾರಿ ಸಿಬ್ಬಂದಿ ಇದ್ದರು.