ಕನ್ನಡಪ್ರಭ ವಾರ್ತೆ ಮೈಸೂರು
ಸಿದ್ದರಾಮಯ್ಯ ಅವರು ಸ್ವತಃ ತಾವೇ ಅನುಭವಿಸಿದ ತೊಂದರೆ ಮತ್ತು ಕಂಡ ಕಷ್ಟಗಳನ್ನು ಹೋಗಲಾಡಿಸಲು ತಮ್ಮ ಅಧಿಕಾರ ಅವಧಿಯಲ್ಲಿ ಸಾಮಾಜಿಕ ಕಳಕಳಿಯ ಯೋಜನೆಗಳನ್ನು ಜಾರಿಗೊಳಿಸಿದ್ದಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಅಂಗವಾಗಿ ನಗರ ಪಾಲಿಕೆ ಮಾಜಿ ಸದಸ್ಯ ಎಂ. ಶಿವಣ್ಣ ನೇತೃತ್ವದಲ್ಲಿ ಬುಧವಾರ ತಿಲಕನಗರದ ಸರ್ಕಾರಿ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಣೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರು ನುಡಿದಂತೆ ನಡೆದ ಮುಖ್ಯಮಂತ್ರಿ. ಯಾವುದೇ ವ್ಯಕ್ತಿಗೆ ಹುಟ್ಟು, ಸಾವು ಖಚಿತ. ಹಾಗಾಗಿ ಜೀವಿತಾವಧಿಯಲ್ಲಿ ಏನಾದರೂ ಸಾಧಿಸಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ ಯಾರಿಗೂ ತೊಂದರೆ ಆಗಬಾರದು. ಸಿದ್ದರಾಮಯ್ಯ ಅವರಲ್ಲಿ ಇಂತಹ ಮೇರು ವ್ಯಕ್ತಿತ್ವವನ್ನು ಕಾಣಬಹುದು ಎಂದರು.ಸಾಮಾನ್ಯ ಕುಟುಂಬದಿಂದ ಬಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ನಾನಾ ಕೊಡುಗೆಗಳು, ಭಾಗ್ಯಗಳನ್ನು ನೀಡಿದರು. ಅವರಿಗೆ ಬಡವರನ್ನು ಕಂಡರೆ ವಿಶೇಷ ಆಸಕ್ತಿ. ಹಾಗಾಗಿಯೇ ಅವರು ಅವಕಾಶ ವಂಚಿತ ಸಮುದಾಯದ ಏಳಿಗೆಗಾಗಿ ಹೆಚ್ಚು ಶ್ರಮಿಸಿದರು. ಸ್ತ್ರೀ ಶಕ್ತಿಗೆ ನಾನಾ ಯೋಜನೆ ನೀಡಿದ್ದಾಗಿ ಅವರು ಸ್ಮರಿಸಿದರು.
ಕಾರ್ಯಕ್ರಮ ಆಯೋಜಿಸಿದ್ದ ನಗರ ಪಾಲಿಕೆ ಮಾಜಿ ಸದಸ್ಯ ಎಂ. ಶಿವಣ್ಣ ಮಾತನಾಡಿ, ಕಳೆದ 23 ವರ್ಷಗಳಿಂದ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆಯಂದು ನಾನಾ ಸೇವಾ ಕಾರ್ಯ ನಡೆಸಿಕೊಂಡು ಬರಲಾಗಿದೆ. ಈ ಬಾರಿಯೂ ಬುಧವಾರ ಮಹದೇಶ್ವರ ಬೆಟ್ಟದ ಮಾದೇಶ್ವರ, ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲ, ಮೈಸೂರಿನ ಗರಡಿ ಕೇರಿಯ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು.
ಅಲ್ಲದೇ, ತಿಲಕನಗರದ ಸರ್ಕಾರಿ ವಿಶೇಷ ಚೇತನ ಶಾಲೆ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣ ಶಿಬಿರ ಆಯೋಜಿಸಲಾಗಿದೆ. ಅಲ್ಲದೇ ಸಮಸ್ಯೆ ಇರುವವರಿಗೆ ಔಷಧವನ್ನೂ ವಿತರಿಸಲಾಗಿದೆ. ಇದಕ್ಕೆ ಮೈಸೂರಿನ ಕೆ.ಆರ್. ಆಸ್ಪತ್ರೆ, ಬಿಜಿಎಸ್ ಅಪೋಲೊ ಆಸ್ಪತ್ರೆ ಇದಕ್ಕೆ ಸಹಕಾರ ನೀಡಿದೆ ಎಂದರು.
ಕಾರ್ಯಕ್ರಮದ ಬಳಿಕ ಮಕ್ಕಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿಸಲಾಗಿದೆ ಎಂದರು.ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಮಾಜಿ ಮೇಯರ್ ಅನಂತ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ಶಾಲೆಯ ಅಧೀಕ್ಷಕ ಸತೀಶ್, ಮುಖಂಡರಾದ ರವಿ, ನಂದಕುಮಾರ್, ಸುರೇಶ್, ಸಿದ್ದಪ್ಪ, ವಿಜಯ್ ಕುಮಾರ್, ಸುರೇಶ್ ಬಾಬು ಮೊದಲಾದವರು ಇದ್ದರು.