ಸಾರಾಂಶ
ಸಿಎಂ ಸಿದ್ದರಾಮಯ್ಯ ಬಡವರ ಬಗ್ಗೆ ಅಪಾರ ಕಾಳಜಿಯುಳ್ಳವರು. ಬಡವರ ಸೇವೆ ಮಾಡಲು ರಾಜಕೀಯ ಅಧಿಕಾರ ಮುಖ್ಯವಾಗಿದ್ದು, ಹೀಗಾಗಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿರಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಸಿಎಂ ಸಿದ್ದರಾಮಯ್ಯ ಬಡವರ ಬಗ್ಗೆ ಅಪಾರ ಕಾಳಜಿಯುಳ್ಳವರು. ಬಡವರ ಸೇವೆ ಮಾಡಲು ರಾಜಕೀಯ ಅಧಿಕಾರ ಮುಖ್ಯವಾಗಿದ್ದು, ಹೀಗಾಗಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿರಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಾಟಾಗಿದ್ದ ತಮ್ಮ ಅಮೃತ ಮಹೋತ್ಸವ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ನಾನು ರಾಜಕೀಯದಿಂದ ದೂರ ಉಳಿಯುವ ಮನಸ್ಸು ಮಾಡಿದ್ದೇನೆ. ಆದರೆ ಬಡವರ ಏಳಿಗೆಗಾಗಿ ಸದಾ ಶ್ರಮಿಸುತ್ತೇನೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ಇರಬೇಕು. ಅಧಿಕಾರ ಇದ್ದಾಗ ಮಾತ್ರವೇ ಬಡವರಿಗೆ ಅನುಕೂಲ ಮಾಡಲು ಸಾಧ್ಯ. ಬಡವರ ಸೇವೆಗಾಗಿ ಮತ್ತು ಅವರ ಏಳಿಗೆಗಾಗಿ ನೀವು ಅಧಿಕಾರದಲ್ಲಿ ಮುಂದುವರೆಯಬೇಕು ಎಂದು ಮನವಿ ಮಾಡಿದರು.
ಮಧುಗಿರಿ ಕ್ಷೇತ್ರ ಮಿಡಿಗೇಶಿಯಲ್ಲಿ ಈ ಹಿಂದೆ ನಡೆದ ಸಮಾರಂಭದಲ್ಲಿ ಮಕ್ಕಳಿಗೆ ಶೂ ಭಾಗ್ಯಕ್ಕಾಗಿ ಮನವಿ ಮಾಡಿದ್ದೆ. ಅದನ್ನು ಜಾರಿಗೆ ತಂದು ಬಡ ಮಕ್ಕಳಿಗ ಅನುಕೂಲ ಕಲ್ಪಿಸಿದರು. ಅನ್ನಭಾಗ್ಯದಂತಹ ಕ್ರಾಂತಿಕಾರಕ ಯೋಜನೆ ರೂಪಿಸಿದರು. ಈ ಯೋಜನೆ ಯಾವುದೇ ಒಂದು ಸಮುದಾಯಕ್ಕೆ ಮತ್ತು ವರ್ಗಕ್ಕೆ ಸೀಮಿತವಲ್ಲ. ಎಲ್ಲ ಬಡವರಿಗೂ ಈ ಯೋಜನೆ ಅನುಕೂಲವಾಗಿದೆ. ಇಷ್ಟಾದರೂ ಟೀಕೆಗಳು ನಿಂತಿಲ್ಲ. ಅದಕ್ಕೆ ತಲೆಕೆಡಿಸಿಕೊಳ್ಳುವುದೂ ಇಲ್ಲ ಎಂದರು.ಮಧ್ಯಮ ಕುಟುಂಬದಿಂದ ಬಂದ ನಾನು ಬಾಲ್ಯದಿಂದಲೂ ಬಡವರ ಪರ ಹೋರಾಡುತ್ತಾ ಬಂದಿದ್ದೇನೆ. ಬಡವರಿಗೆ ದೌರ್ಜನ್ಯ ಆದರೆ ನಾನು ಸಹಿಸುವುದಿಲ್ಲ. 50 ವರ್ಷಗಳಿಂದಲೂ ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತಲೇ ನಾನೀಗ ಸಚಿವನಾಗಿ ನಿಂತಿದ್ದೇನೆ ಎಂದು ತಮ್ಮ ಹೋರಾಟದ ದಿನಗಳನ್ನು ಸ್ಮರಿಸಿದರು.