ಸಾರಾಂಶ
ಅನ್ಯಾಯ ಮಾಡುವುದಿಲ್ಲ ಎಂದು ಹೇಳುತ್ತಲೇ ಹುಬ್ಬಳ್ಳಿ-ಧಾರವಾಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದ್ದಾರೆ. ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಅವರು ಮಾತನಾಡಿದ್ದಾರೆ.
ಹುಬ್ಬಳ್ಳಿ: ಸೋಚತಾ ಕುಚ್ ಹೈ, ಬೋಲ್ತಾ ಕುಚ್ ಹೈ, ಔರ್ ಕರ್ತಾ ಕುಚ್ ಹೈ,..!
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ ಮಾತು. ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಟೆಂಗಿನಕಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯೋಚಿಸುವುದೊಂದು, ಹೇಳುವುದು ಮತ್ತೊಂದು, ಮಾಡುವುದು ಮಗದೊಂದು., ಆ ರೀತಿಯಾಗಿದೆ ಅವರ ಕಾರ್ಯವೈಖರಿ ಎಂದು ತರಾಟೆಗೆ ತೆಗೆದುಕೊಂಡರು.ಅನ್ಯಾಯ ಮಾಡುವುದಿಲ್ಲ ಎಂದು ಹೇಳುತ್ತಲೇ ಹುಬ್ಬಳ್ಳಿ-ಧಾರವಾಡಕ್ಕೆ ಅನ್ಯಾಯ ಮಾಡಿದ್ದಾರೆ ಎಂಬುದನ್ನು ಅಗ್ನಿಪಥ್ ಚಿತ್ರದ ಡೈಲಾಗ್ ಹೇಳುವ ಮೂಲಕ ಟಾಂಗ್ ನೀಡಿದರು.
ಬಜೆಟ್ನಲ್ಲಿ ಹುಬ್ಬಳ್ಳಿ- ಧಾರವಾಡಕ್ಕೆ ಯಾವ ರೀತಿ ಅನ್ಯಾಯವಾಗಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ಎಫ್ಎಂಸಿಜಿ ಕ್ಲಸ್ಟರ್ನಲ್ಲಿ ಕೈಗಾರಿಕೆ ತೆರೆಯಲು ಬರುವ ಕೈಗಾರಿಕೋದ್ಯಮಿಗಳಿಗೆ ಮೊದಲು ₹95 ಲಕ್ಷ ಎಕರೆಗೆ ಜಮೀನು ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ ಅದನ್ನೀಗ ಕಾಂಗ್ರೆಸ್ ಸರ್ಕಾರ ₹1.29 ಕೋಟಿಗೆ ಏರಿಸಿದೆ. ಇದರಿಂದ ಕೈಗಾರಿಕೋದ್ಯಮಿಗಳು ಬರಲು ಹಿಂಜರಿಯುತ್ತಿದ್ದಾರೆ. ಆದಕಾರಣ ಅದನ್ನು ಮೊದಲಿನಂತೆ ದರ ಇಳಿಸಿ ಉದ್ಯಮಿಗಳಿಗೆ ಜಮೀನು ನೀಡಬೇಕು. ಇದರಿಂದ ಅಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.ಹುಬ್ಬಳ್ಳಿಗೆ ರಿಜಿನಲ್ ಕ್ಯಾನ್ಸರ್ ಘಟಕ ತೆರೆಯಬೇಕೆಂದು ಬೆಳಗಾವಿ ಅಧಿವೇಶನದಲಲ್ಲಿ ಒತ್ತಾಯಿಸಿದ್ದೆ. ಅದಕ್ಕೆ ನೀವು ಕೂಡ ಧ್ವನಿ ಗೂಡಿಸಿದ್ದೀರಿ. ಹೀಗಾಗಿ ಹುಬ್ಬಳ್ಳಿ ಹಾಗೂ ಮಂಗಳೂರಿಗೆ ಕ್ಯಾನ್ಸರ್ ಘಟಕ ತೆರೆಯಬೇಕೆಂದು ಒತ್ತಾಯಿಸಿದರು.
ಕಿಮ್ಸ್ಗೆ ಅನುದಾನ ಕಡಿಮೆ ಕೊಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ. ಮೈಸೂರಿಗೆ ಹೋಲಿಸಿದರೆ ತೀರಾ ಕಡಿಮೆಯಾಗಿದೆ ಅನುದಾನ. ಈ ರೀತಿ ಕಿಮ್ಸ್ಗೆ ತಾರತಮ್ಯ ಮಾಡದೇ ಸಮರ್ಪಕ ಅನನುದಾನ ನೀಡಬೇಕು ಎಂದು ಒತ್ತಾಯಿಸಿದರು.