ಸಾರಾಂಶ
ಶಿವಯೋಗಿ ಸಿದ್ದರಾಮೇಶ್ವರ 853ನೇ ಜಯಂತಿ । ವಿಶೇಷ ಉಪನ್ಯಾಸ
ಕನ್ನಡಪ್ರಭ ವಾರ್ತೆ ಕಡೂರುಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಸಿದ್ದಾಂತಗಳು ಕೇವಲ ಭೋವಿ ಜನಾಂಗ ಮಾತ್ರವಲ್ಲ ಎಲ್ಲ ಸಮುದಾಯಗಳಿಗೂ ಪ್ರಸ್ತುತವಾಗಿವೆ ಎಂದು ಜಿಲ್ಲಾ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಎಸ್.ಕೊಲ್ಲಾಭೋವಿ ಹೇಳಿದರು.
ತಾಲೂಕು ಆಡಳಿತ ಮತ್ತು ತಾಲೂಕು ಭೋವಿ ಸಮಾಜದ ಸಹಯೋಗದಲ್ಲಿ ಮಂಗಳವಾರ ತಾಲೂಕು ಕಚೇರಿಯಲ್ಲಿ ನಡೆದ ಶಿವಯೋಗಿ ಸಿದ್ದರಾಮೇಶ್ವರ 853ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾಯಕಯೋಗಿಗಳಾದ ಗುರು ಶಿವಯೋಗಿ ಸಿದ್ದರಾಮೇಶ್ವರರು ಮನುಕುಲದ ಒಳಿತಿಗಾಗಿ ಶ್ರಮಿಸಿದರು. 12ನೇ ಶತಮಾನದಲ್ಲಿ ಬಸವಣ್ಣನವರಿಂದ ಪ್ರಭಾವಿತರಾದವರಲ್ಲಿ ,ಪ್ರಮುಖರಾಗಿದ್ದ ಅವರು ಅನುಭವ ಮಂಟಪದ ಶರಣರಾಗಿ. ಕೆರೆ-ಕಟ್ಟೆಗಳ ಕಲ್ಪನೆಯನ್ನು ಸಿದ್ಧರಾಮರು ಸಾಕಾರಗೊಳಿಸಿ ಜನತೆಗೆ ತೋರಿಸಿಕೊಟ್ಟಿದ್ದರು ಎಂದು ಹೇಳಿದರು.
ಕಲ್ಲು ಕೆಲಸವನ್ನೆ ನಂಬಿ ಜೀವನ ಸಾಗಿಸುತ್ತಿದ್ದ ಭೋವಿ ಜನಾಂಗ ಆಧುನಿಕ ಯಂತ್ರಗಳ ಭರಾಟೆಯಿಂದ ಕೆಲಸ ಕಡಿಮೆಯಾಗಿ ಜೀವನ ನಡೆಸಲು ಕಷ್ಟಕರ ಪರಿಸ್ಥಿತಿ ಉಂಟಾಗಿದೆ. ಜನಾಂಗ ಸಂಘಟಿತವಾಗಬೇಕು. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಾಗಿ ಹೋರಾಡಬೇಕು, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರಾತಿನಿಧ್ಯ ದೊರೆಯಬೇಕಿದೆ ಎಂದರು.ಶಾಸಕ ಕೆ.ಎಸ್.ಆನಂದ್ ಅವರೊಂದಿಗೆ ನಮ್ಮ ಸಮಾಜದ ಪ್ರಮುಖ ಬೇಡಿಕೆಯನ್ನು ಪ್ರಸ್ತಾಪಿಸಿದ್ದು ಇದರ ಬಗ್ಗೆ ವಿಧಾನ ಮಂಡಲದಲ್ಲಿ ದನಿ ಎತ್ತಿ ಸರ್ಕಾರದ ಮೂಲಕ ನಮಗೆ ಸೌಲಭ್ಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಿರುವ ಅವರಿಗೆ ಸಮಾಜದ ಸಮಸ್ತ ಬಂಧುಗಳ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ ಎಂದರು.
ತಾಲೂಕು ಭೋವಿ ಸಮಾಜದ ಅಧ್ಯಕ್ಷ ನಾಗರಾಜ್ ಮಾತನಾಡಿ, ಕಳೆದ ಭಾರಿ ಅದ್ದೂರಿಯ ಜಯಂತಿ ಆಚರಣೆ ಮಾಡಲಾಗಿತ್ತು. ಈ ಭಾರಿ ಶಾಸಕರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಂಘಟನೆಗೆ ಒತ್ತು ನೀಡುತ್ತಿದ್ದು ಪಟ್ಟಣದಲ್ಲಿರುವ ಸಮಾಜದ ನಿವೇಶನದಲ್ಲಿ ಸಮುದಾಯ ಭವನ ನಿರ್ಮಿಸಲು ಶಾಸಕರು ಆರ್ಥಿಕ ಸಹಾಯ ನೀಡಬೇಕೆಂದು ಮನವಿ ಮಾಡಿದ್ದು ಶಾಸಕರು ನೀಡುವ ಭರವಸೆ ನೀಡಿದ್ದಾರೆ ಎಂದರು.ಭೋವಿ ಸಮಾಜದ ವಕೀಲ ತಿಪ್ಪೇಶ್, ಮತೋರ್ವ ವಕೀಲರಾದ ಕೆ.ಎನ್.ಬೊಮ್ಮಣ್ಣ ಗುರು ಸಿದ್ದರಾಮೆಶ್ವರರ ಕುರಿತು ಉಪನ್ಯಾಸ ನೀಡಿದರು.
ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್ ಸಿದ್ದರಾಮೇಶ್ವರರ ಕಾಯಕ, ನಿಷ್ಠೆ, ಶ್ರಮದ ಕುರಿತು ಮಾತನಾಡಿದರು. ಬಿಇಒ ಸಿದ್ಧರಾಜನಾಯ್ಕ, ತಾಲೂಕು ಕಚೇರಿಯ ಕಂದಾಯ ನಿರೀಕ್ಷಕರಾದ ನಾಗರತ್ನ, ಕಾರ್ಯದರ್ಶಿ ಎಂ.ಡಿ.ಜಯಣ್ಣ, ಮುನಿಯಪ್ಪ, ಸತೀಶ್, ಗುಡ್ಡದಹಟ್ಟಿ ರತ್ನಮ್ಮ, ಪುರಸಭೆ ಮಾಜಿ ಸದಸ್ಯ ಚಿನ್ನರಾಜ್, ಗೆದ್ಲೆಹಳ್ಳಿ ಗಿರೀಶ್, ಬಿಸಲೇಹಳ್ಳಿ ನಾಗರಾಜ್, ಲಕ್ಷೀಪುರದ ಸೇವಾದಳ ಕಾಂಗ್ರೆಸ್ನ ಅಧ್ಯಕ್ಷ ತಿಮ್ಮಪ್ಪ, ಎಸ್.ಆರ್.ಕುಮಾರ್ ಭೋವಿ ಸಮಾಜದ ಮುಖಂಡರು, ವಿವಿಧ ಇಲಾಖೆ ಕಾರ್ಯದರ್ಶಿಗಳು ಇದ್ದರು.