ಸಿದ್ದೇಶ್ವರ ಶ್ರೀ ಜಾತಿ ರಹಿತ ಸಮಾಜದ ಕನಸು ಕಂಡವರು

| Published : Jan 10 2024, 01:45 AM IST

ಸಿದ್ದೇಶ್ವರ ಶ್ರೀ ಜಾತಿ ರಹಿತ ಸಮಾಜದ ಕನಸು ಕಂಡವರು
Share this Article
  • FB
  • TW
  • Linkdin
  • Email

ಸಾರಾಂಶ

ಗುರುನಮನ ಕಾರ್ಯಕ್ರಮದಲ್ಲಿ ಹಲ್ಯಾಳದ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳ ನುಡಿ

ಕನ್ನಡಪ್ರಭ ವಾರ್ತೆ ತಿಕೋಟಾ

ಗಾಳಿ, ನೀರು, ಬೆಳಕು ಸುಂದರ ಪರಿಸರ ಮತ್ತು ನಿಸರ್ಗವನ್ನು ಪ್ರೀತಿಸುತ್ತಿದ್ದವರು ಶ್ರೀ ಸಿದ್ದೇಶ್ವರ ಶ್ರೀಗಳು. ಅವರು ಜಾತಿ ರಹಿತ, ವರ್ಗ ರಹಿತ ಸಮಾಜದ ಕನಸು ಕಂಡವರು. ಮನುಷ್ಯ ಹೇಗಿರಬೇಕು, ಹೇಗೆ ಬಾಳಬೇಕು ಎಂದು ತೋರಿಸಿಕೊಟ್ಟವರು ಎಂದು ಹಲ್ಯಾಳದ ಗುರುದೇವಾಶ್ರಮದ ಹರ್ಷಾನಂದ ಸ್ವಾಮಿಗಳು ಹೇಳಿದರು.

ತಾಲೂಕಿನ ಹೊನವಾಡ ಗ್ರಾಮದಲ್ಲಿ ಶ್ರೀ ಭಗೀರಥ ಮಹರ್ಷಿ ಸಮುದಾಯ ಭವನದಲ್ಲಿ ಪ್ರಥಮ ಫೌಂಡೇಶನ್ ವತಿಯಿಂದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳ ನುಡಿನಮನ ಕಾರ್ಯಕ್ರಮ ಹಾಗೂ ಪೊನ್ನಂಬಾಡು ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದೇಶ್ವರ ಶ್ರೀಗಳ ಪ್ರವಚನಗಳು ಮನುಷ್ಯರು ಸನ್ಮಾರ್ಗದಲ್ಲಿ ನಡೆಸುವಂತ ಶಕ್ತಿ ಹೊಂದಿದ್ದವು. ಇವರ ಪ್ರವಚನ ಕೇಳಲು ಸಾವಿರಾರು ಜನರು ಸೇರುತ್ತಿದ್ದರು. ಇವರ ಒಂದೊಂದು ಪ್ರವಚನಗಳು ಜನ ಸಾಮಾನ್ಯ ಬದುಕಿಗೆ ತುಂಬಾ ಹತ್ತಿರವಾಗುತ್ತಿತ್ತು. ತಾವು ಯಾವ ದಾರಿಯಲ್ಲಿ ನಡೆಯಬೇಕು ಎಂಬ ಬೆಳಕು ತೋರಿಸುವಂತಿರುತ್ತಿತ್ತು ಎಂದರು.

ಅತ್ಯಂತ ಸರಳ ಸಜ್ಜನಿಕೆಯ ಸಾಕಾರಮೂರ್ತಿ, ನನ್ನದು ತನ್ನದೆಂಬ ಮಮಕಾರ ತೊರೆದ ಮಹಾಪುರುಷರು ಪೂಜ್ಯ ಸಿದ್ದೆಶ್ವರ ಸ್ವಾಮಿಗಳು, ವಿಜಯಪುರ ಜನತೆಗೆ ಜ್ಞಾನದಾಸೋಹ ನೀಡುವ ಕೇಂದ್ರವನ್ನಾಗಿಸಿದರು. ಕಲ್ಲು-ಮಣ್ಣು, ಗಿಡ-ಮರ, ಹೂವು - ಪಕ್ಷಿಗಳಲ್ಲಿ ಜೀವ ಚೈತನ್ಯವಿದೆ ಎಂಬದನ್ನು ಅವರು ವಿವರಿಸುವ ರೀತಿ ಅಧ್ಬುತವಾದದು. ಭಾಷೆ ಧಾಟಿ ಪದಪ್ರಯೋಗ ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸುತ್ತಿತ್ತು ಎಂದು ಬಾಬುರಾವ ಮಹಾರಾಜರು ಮಾತನಾಡಿದರು

ಸಿದ್ದೇಶ್ವರ ಶ್ರೀಗಳು ನನ್ನದೇನಿದೆ ಎಲ್ಲವೂ ಭಗವಂತನದು. ಇಲ್ಲಿರುವ ಪ್ರತಿ ಮನುಷ್ಯನು ದೇವರು. ಎಲ್ಲರಲ್ಲೂ ದೇವರನ್ನು ಕಾಣಬೇಕು. ನಾನು ನನ್ನದೆಂಬ ಮಮಕಾರ ಸಲ್ಲದು. ಇಹಪರ ಎರಡೂ ಒಂದೇ ಎಂದು ಸಾರುತ್ತ ಅದರಂತೆ ನಡೆದ ಅಪರೂಪದ ಸಂತರು ಎಂದು ಕಕಮರಿಯ ಗುರುದೇವಾಶ್ರಮದ ಪರಮಪೂಜ್ಯ ಆತ್ಮಾರಾಮ ಪೂಜ್ಯರು ನುಡಿದರು.

ಈ ವೇಳೆ ಆರ್‌.ಎಸ್ ಪಾಟೀಲ, ಗೌರಿಶಂಕರ ಹಿರೆಮಠ, ವೈ.ಬಿ ವಾಲಿಕಾರ, ಎನ್.ಬಿ ಕೋಟಿ, ಶಂಕರ ಕಟೆ, ಸಾಬು ಕಾತ್ರಾಳ, ಧರೆಪ್ಪ ಉಪ್ಪಣ್ಣಗಿ, ದರೆಪ್ಪ ಗುಗ್ಗರಿ, ಯಶವಂತ ಶಿಂಧೆ ಮತ್ತಿತ್ತರು ಇದ್ದರು. ಬೀರಪ್ಪ ಖಂಡೆಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀ ಕಾತ್ರಾಳ ನಿರೂಪಿಸಿದರು. ಶ್ವೇತಾ ಆಕಳೆ ಸ್ವಾಗತಿಸಿದರು. ನಿವೇದಿತಾ ಹಿರೇಮಠ ವಂದಿಸಿದರು.