ಸಿದ್ಧಾರೂಢ ಮಠದಲ್ಲಿ ಕಳೆದ 11 ವರ್ಷಗಳಿಂದ ರಾಜ್ಯಮಟ್ಟದ ಭಜನಾ ಸ್ಪರ್ಧೆ ನಡೆಯುತ್ತಿದ್ದು ಈ ಬಾರಿ 52 ತಂಡಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದವು.
ಹುಬ್ಬಳ್ಳಿ:
ವಿಷ್ಣು ಪರಮಾತ್ಮ ದಶಾವತಾರ ತಾಳಿ ದುಷ್ಟರ ಸಂಹಾರ ಮಾಡಿದರೆ ಸದ್ಗುರು ಸಿದ್ಧಾರೂಢರು 11ನೇ ಅವತಾರ ತಾಳಿ ಜನರಲ್ಲಿನ ದುರ್ಗಣ ಸಂಹಾರ ಮಾಡಿದ ಅವತಾರಿ ಪುರುಷರು ಎಂದು ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಶ್ರೀ ಹೇಳಿದರು.ನಗರದ ಶ್ರೀಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ವತಿಯಿಂದ ಸದ್ಗುರು ಶ್ರೀಸಿದ್ಧಾರೂಢ ಶ್ರೀಗಳ ಜಯಂತ್ಯುತ್ಸವ ನಿಮಿತ್ತ 6 ದಿನ ಆಯೋಜಿಸಿದ್ದ 11ನೇ ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಸಮಾರೋಪದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಳೆದ 11 ವರ್ಷಗಳಿಂದ ಸಿದ್ಧಾರೂಢರ ಮಠದಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆ ಆಯೋಜಿಸುತ್ತಿರುವುದು ಅಭಿನಂದನಾರ್ಹ. ಈ ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ಭಜನಾ ಸ್ಪರ್ಧಿಗಳು ಪಾಲ್ಗೊಳ್ಳುವ ಮೂಲಕ ತಮ್ಮ ಪ್ರತಿಭೆ ತೋರ್ಪಡಿಸಿದ್ದಾರೆ ಎಂದರು.ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್. ಭಾರತಿ ಮಾತನಾಡಿ, ಸಂಸ್ಕೃತಿ ಪರಿಚಯಿಸುವ ಭಜನೆಗಳು ಅಳಿವಿನಂಚಿನಲ್ಲಿರುವುದು ನೋವಿನ ಸಂಗತಿ. ಈ ಕುರಿತು ಜಾಗೃತಿ ಮೂಡಿಸುವ ಜತೆಗೆ ಮಕ್ಕಳಿಗೆ ಇದರ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.
ಶ್ರೀಸಿದ್ಧಾರೂಢರ ಮಠ ಮಠ ಟ್ರಸ್ಟ್ ಕಮಿಟಿ ಭಕ್ತರ ಮೇಲ್ಮನೆ ಸಭಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ವ್ಯವಸ್ಥೆ ಕಿತ್ತು ಹಾಕಬೇಕಿದೆ. ಇಂತಹ ಜಾತಿ ವ್ಯವಸ್ಥೆ ಕಿತ್ತುಹಾಕುವುದಕ್ಕಾಗಿಯೇ ಸಿದ್ಧಾರೂಢರು, ರಾಮಕೃಷ್ಣ ಪರಮಹಂಸರು ಸೇರಿದಂತೆ ಹಲವರು ಶ್ರಮಿಸಿದ್ದಾರೆ ಎಂದರು.ಶ್ರೀಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಾಳು ಮಗಜಿಕೊಂಡಿ ಮಾತನಾಡಿದರು. ತಳಕಟ್ನಾಳ ಶ್ರೀಸಿದ್ಧಾರೂಢ ಮಠದ ಆತ್ಮಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ಇದೇ ವೇಳೆ ಗಣ್ಯರು ನಿಜಗುಣ ಶಿವಯೋಗಿಗಳಿಂದ ವಿರಚಿತ ಪರಮಾರ್ಥಗೀತೆ ಗ್ರಂಥ ಬಿಡುಗಡೆಗೊಳಿಸಿದರು. ರಾಜ್ಯದ 25 ಜಿಲ್ಲೆಗಳ 200ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು. ವಿಜೇತ ಉತ್ತಮ ಡಗ್ಗಾ, ತಾಳ, ದಮಡಿ, ತಬಲಾ, ಹಾರ್ಮೋನಿಯಂ ವಾದಕರು, ಉತ್ತಮ ಗಾಯಕ, ಗಾಯಕಿಯರು, ಬಾಲಕ, ಬಾಲಕಿಯರು, ಭಜನಾ ಮಂಡಳಿಗಳು ಸೇರಿ ಒಟ್ಟು 52 ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಕಮಿಟಿ ಉಪಾಧ್ಯಕ್ಷೆ ಗೀತಾ ಕಲಬುರ್ಗಿ, ಗೌರವ ಕಾರ್ಯದರ್ಶಿ ವಿನಾಯಕ ಘೋಡಕೆ, ಮಾಜಿ ಅಧ್ಯಕ್ಷ ಚನ್ನವೀರ ಮುಂಗುರವಾಡಿ, ಬಸವರಾಜ ಕಲ್ಯಾಣಶೆಟ್ಟರ, ಧರ್ಮದರ್ಶಿ ಉದಯಕುಮಾರ ನಾಯ್ಕ, ಶ್ರೀಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ಸೇರಿದಂತೆ ಹಲವರಿದ್ದರು. ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಅಧ್ಯಕ್ಷ ಶಾಮಾನಂದ ಪೂಜೇರಿ ಸ್ವಾಗತಿಸಿದರು. ಎಸ್.ಐ. ಕೋಳಕೂರ ನಿರೂಪಿಸಿದರು.ಭಜನಾ ಸ್ಪರ್ಧೆಯ ವಿಜೇತ ತಂಡ
ಪ್ರಥಮ ಬಹುಮಾನ:ಗೋಕಾಕ ತಾಲೂಕಿನ ಶಿವಾಪೂರದ ಶ್ರೀನಿರುಪಾಧೀಶ್ವರ ಭಜನಾ ಮಂಡಳಿ, ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಶ್ರೀಮರಿಯಮ್ಮ ಕರಿಯಮ್ಮ ಭಜನಾ ಮಂಡಳಿ, ಗೋಕಾಕನ ಶ್ರೀಸಿದ್ಧಾರೂಢ ಭಜನಾ ಮಂಡಳಿ, ರಾಯಬಾಗ ತಾಲೂಕಿನ ಹಿಡಕಲ್ಲನ ಶ್ರೀಸಂಗಮೇಶ್ವರ ಭಜನಾ ಮಂಡಳಿ (ಬಾಲಕಿಯರು).
ಮಹಿಳಾ ಪುರಸ್ಕಾರ:
ಶಿರಸಿ ತಾಲೂಕು ಕಳವೆ ಗ್ರಾಮದ ಶ್ರೀ ಕನಕಾಂಬ ಭಜನಾ ಮಂಡಳಿ, ಬಾಲಕಿಯರ ಮತ್ತು ಬಾಲಕರ ಪುರಸ್ಕಾರವನ್ನು ಹುಬ್ಬಳ್ಳಿ ವಿದ್ಯಾನಗರದ ಶ್ರೀಸದ್ಗುರು ಸಂಗೀತ ವಿದ್ಯಾಲಯ ಹಾಗೂ ಗೋಕಾಕನ ಶ್ರೀಸಿದ್ಧಾರೂಢ ಮಹಿಳಾ ಭಜನಾ ತಂಡ.
ಉತ್ತಮ ಗಾಯಕ ಮತ್ತು ಗಾಯಕಿ ಪುರಸ್ಕಾರ:ಬೂದಿಹಾಳದ ಶ್ರೀಸಿದ್ದರಾಮೇಶ್ವರ ಭಜನಾ ಮಂಡಳಿಯ ದಾದಾಸಾಬ್ ಸೈಯದ್ ಅಲಿ ಹಾಗೂ ಜಮಖಂಡಿ ತಾಲೂಕು ಕೊಣ್ಣೂರಿನ ಮಲ್ಲಿಕಾರ್ಜುನ ಭಜನಾ ಮಂಡಳಿಯ ಅಬಾಯವ್ವ ಹಡಪದ, ಉತ್ತಮ ಹಾಮೋರ್ನಿಯಂ ಪುರಸ್ಕಾರವನ್ನು ಜಮಖಂಡಿ ತಾಲೂಕು ಚಿಕ್ಕಲಕಿ ಗ್ರಾಮದ ಶ್ರೀರಾಮಾವಧೂತ ಭಜನಾ ಮಂಡಳಿಯ ಗೋವಿಂದ ಗೋವಿ ಮಾಸ್ತರ, ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ಗ್ರಾಮದ ಚನ್ನಬಸವೇಶ್ವರ ಭಜನಾ ಮಂಡಳಿಯ ಶೇಖರಯ್ಯ ಕುಂದರಗಿಮಠ ಪಡೆದುಕೊಂಡರು.
ಉತ್ತಮ ತಬಲಾ ಪುರಸ್ಕಾರ:
ಮುಧೋಳ ತಾಲೂಕು ರಂಜಣಗಿಯ ಶ್ರೀಬಸವೇಶ್ವರ ಭಜನಾ ಮಂಡಳಿಯ ಚೌಕಪ್ಪ ಹಾದಿಮನಿ, ಜಮಖಂಡಿ ತಾಲೂಕು ಲಿಂಗನೂರನ ಶ್ರೀಶಿವಪುತ್ರ ಅವಧೂತ ಭಜನಾ ಮಂಡಳಿಯ ಕರಿಯಪ್ಪ ಗಣಿ ಪಡೆದರೆ, ಉತ್ತಮ ದಮಡಿ ಪುರಸ್ಕಾರವನ್ನು ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದ ಶ್ರೀಸಂಗಮೇಶ್ವರ ಭಜನಾ ಮಂಡಳಿ ಹಾಗೂ ಬಾಲಕೋಟೆ ತಾಲೂಕು ಬೈರಮಟ್ಟಿಯ ಶ್ರೀಬಸವೇಶ್ವರ ಭಜನಾ ಮಂಡಳಿಯ ರಂಗಪ್ಪ ಹುನಕುಂಟಿ ಪಡೆದುಕೊಂಡಿದ್ದಾರೆ.ರಾಯಬಾಗ ತಾಲೂಕು ಹಾರೋಗೇರಿಯ ಶ್ರೀಚನ್ನವೃಷಭೇಂದ್ರ ಭಜನಾ ಮಂಡಳಿಯ ಮುತ್ತಪ್ಪ ಯಂಕಂಚಿ ಹಾಗೂ ಜಮಖಂಡಿ ತಾಲೂಕು ಬಿದರಿ ಗ್ರಾಮದ ಶ್ರೀ ಕುಮಾರೇಶ್ವರ ಭಜನಾ ಮಂಡಳಿಯ ಕರಿಯಪ್ಪ ಮೇಲಿಮನಿ ಅವರು ಉತ್ತಮ ತಾಳ ಪುರಸ್ಕಾರ ಮತ್ತು ಕಲಟಗಿ ತಾಲೂಕು ಕುರವಿನಕೊಪ್ಪದ ಶ್ರೀಸಿದ್ಧಾರೂಢ ಭಜನಾ ಮಂಡಳಿಯ ಗದಿಗೆಪ್ಪ ಹುಬ್ಬಳ್ಳಿ ಹಾಗೂ ತಿಪಟೂರ ತಾಲೂಕು ಹರಗುಪ್ಪೆ ಗ್ರಾಮದ ಶ್ರೀದುರ್ಗಾಂಬ ಭಜನಾ ಮಂಡಳಿ ಉತ್ತಮ ಡಗ್ಗಾ ಪುರಸ್ಕಾರ ಪಡೆದುಕೊಂಡಿವೆ.
ತಲಾ ಐದು ತಂಡಗಳು ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡಿವೆ. 13 ತಂಡಗಳು ಸಮಾಧಾನಕರ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿವೆ.