ಸಾರಾಂಶ
ಸಂಜೆಯ ವೇಳೆಗೆ ಶ್ರೀಮಠಕ್ಕೆ ಪಲ್ಲಕ್ಕಿಮರಳಿದ ಸಂದರ್ಭದಲ್ಲಿ ಮಹಿಳೆಯರು ಕುಂಭದೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಂಡರು.
ಹುಬ್ಬಳ್ಳಿ: ಶ್ರೀಸಿದ್ಧಾರೂಢರ 190ನೇ ಜನ್ಮದಿನೋತ್ಸವದ ಪ್ರಯುಕ್ತ ನಗರದ ಶ್ರೀಸಿದ್ಧಾರೂಢರ ಮಠದಲ್ಲಿ ಭಾನುವಾರ ಅದ್ಧೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಶ್ರೀಮಠದಲ್ಲಿ ಬೆಳಗ್ಗೆ 5.30ಕ್ಕೆ ಶ್ರೀಸಿದ್ಧಾರೂಢರ ಹಾಗೂ ಗುರುನಾಥಾರೂಢರ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ, ಮಧ್ಯಾಹ್ನ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಉಭಯ ಶ್ರೀಗಳ ಉತ್ಸವ ಮೂರ್ತಿಯ ಪಲ್ಲಕ್ಕಿಯು ಸಕಲ ವಾದ್ಯಮೇಳದೊಂದಿಗೆ ನಗರದ ವಿವಿಧ ಕಡೆ ಸಂಚರಿಸಿತು.ಸಂಜೆಯ ವೇಳೆಗೆ ಶ್ರೀಮಠಕ್ಕೆ ಪಲ್ಲಕ್ಕಿಮರಳಿದ ಸಂದರ್ಭದಲ್ಲಿ ಮಹಿಳೆಯರು ಕುಂಭದೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಂಡರು. ನಂತರ ಸಂಜೆ ಇಲ್ಲಿನ ಕೈಲಾಸ ಮಂಟಪದಲ್ಲಿ ಆಯೋಜಿಸಿದ್ದ ತೊಟ್ಟಿಲೋತ್ಸವ ಕಾರ್ಯಕ್ರಮಕ್ಕೆ ಶ್ರೀಮಠದ ಚೇರಮನ್ ಚನ್ನವೀರ ಮುಂಗರವಾಡಿ ಚಾಲನೆ ನೀಡಿದರು. ರಾಜ್ಯವಲ್ಲದೇ ಮಹಾರಾಷ್ಟ್ರ, ಗೋವಾ ಹಾಗೂ ಇನ್ನೂ ಅನೇಕ ರಾಜ್ಯಗಳಿಂದ
ಸಾವಿರಾರು ಭಕ್ತರು ಆಗಮಿಸಿ ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದರು.ಈ ವೇಳೆ ಟ್ರಸ್ಟ್ ಕಮಿಟಿಯ ಉಪಾಧ್ಯಕ್ಷ ವಿನಾಯಕ ಘೋಡಕೆ, ಗೌರವ ಕಾರ್ಯದರ್ಶಿ ರಮೇಶ ಬೆಳಗಾವಿ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಬಸವರಾಜ ಕಲ್ಯಾಣಶೆಟ್ಟರ್, ಡಾ. ಗೋವಿಂದ ಮಣ್ಣೂರ, ಸರ್ವಮಂಗಳಾ ಪಾಠಕ, ವಸಂತ ಸಾಲಗಟ್ಟಿ, ಉದಯಕುಮಾರ ನಾಯ್ಕ, ಗೀತಾ ಕಲಬುರ್ಗಿ, ಶ್ರೀಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ಮತ್ತು ಸಿಬ್ಬಂದಿ ವರ್ಗದವರು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.