ಸಾರಾಂಶ
ಅಣಶಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷವಾಗಿ ಕನ್ನಡದ ಹಬ್ಬ
ಕನ್ನಡಪ್ರಭ ವಾರ್ತೆ ಕಾರವಾರಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ ಹಾಗೂ ಐತಿಹಾಸಿಕ ಕದಂಬ ವೃಕ್ಷ ಉಳಿಸಿ ಅಭಿಯಾನದ ಮೂಲಕ ಜೋಯಿಡಾ ತಾಲೂಕಿನ ಅಣಶಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.
ಜೋಯಿಡಾದಲ್ಲಿ ಮಾತೃಭಾಷೆ ಕೊಂಕಣಿ. ಮಾತುಕತೆ, ವ್ಯಾಪಾರ, ವಹಿವಾಟು ಎಲ್ಲವೂ ಕೊಂಕಣಿಯಲ್ಲೇ ನಡೆಯುತ್ತದೆ. ಸರ್ಕಾರಿ ಶಾಲೆಗಳು ಇಲ್ಲಿ ಕನ್ನಡದ ಕಂಪನ್ನು ಬೀರುತ್ತಿವೆ. ರಾಜ್ಯೋತ್ಸವದ ಸಂದರ್ಭದಲ್ಲಿ ಅಣಶಿ ಶಾಲೆಯ ಶಿಕ್ಷಕರು ಕನ್ನಡ ಧ್ವಜದ ಬಣ್ಣ ಹೊಂದಿದ ವಿಶಾಲವಾದ ಛತ್ರಿಯಲ್ಲಿ ಕನ್ನಡದಲ್ಲೇ ಸಹಿ, ಹೆಸರು ಬರೆಯುವ ಮೂಲಕ ಕನ್ನಡದ ಬಗ್ಗೆ ಜಾಗೃತಿ ಮೂಡಿಸಲಾಯಿತು.ಕನ್ನಡದ ಕಳಸ ಹೊತ್ತ ವಿದ್ಯಾರ್ಥಿಗಳು, ಶಿಕ್ಷಕರು ಮೆರವಣಿಗೆಯಲ್ಲಿ ಮನೆ ಮನೆ, ಅಂಗಡಿ ಮಳಿಗೆಗಳಿಗೆ ತೆರಳಿ ಕನ್ನಡದಲ್ಲೇ ಸಹಿ, ಹೆಸರು ಸಂಗ್ರಹಿಸಿದರು. ಆ ಮೂಲಕ ಕನ್ನಡ ಬರೆಯಲು ಪ್ರೋತ್ಸಾಹಿಸಿದರು.
ಕನ್ನಡದ ಮೊದಲ ರಾಜವಂಶವಾದ ಕದಂಬರು ಪವಿತ್ರ ವೃಕ್ಷ ಎಂದು ಪೂಜಿಸುತ್ತಿದ್ದ ಕದಂಬ ವೃಕ್ಷವನ್ನು ಗುರುತಿಸಿ ಮಕ್ಕಳಿಗೆ ಪರಿಚಯಿಸಿ ಪೂಜಿಸಲಾಯಿತು. ಆ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕನ್ನಡದ ಜ್ಞಾನಪೀಠ ಪುರಸ್ಕೃತರು, ಸಾಹಿತಿಗಳ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು.ಅಣಶಿ ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕರು ರೂಪಿಸಿದ ಈ ಕಾರ್ಯಕ್ರಮ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉತ್ಸಾಹದಿಂದ ಮೆರವಣಿಗೆ ಹಾಗೂ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕೊಂಕಣಿ ನೆಲದಲ್ಲಿ ಕನ್ನಡ ಭಾಷೆಯಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ರಾಜ್ಯೋತ್ಸವ ಆಚರಿಸಿದ್ದೇವೆ. ವಿದ್ಯಾರ್ಥಿಗಳು, ಸ್ಥಳೀಯರು ಉತ್ತಮವಾಗಿ ಸ್ಪಂದಿಸಿದ್ದು ಖುಷಿ ನೀಡಿದೆ ಎನ್ನುತ್ತಾರೆ ಅಣಶಿ ಶಾಲೆಯ ಶಿಕ್ಷಕಿ, ಲೇಖಕಿ ಅಕ್ಷತಾ ಕೃಷ್ಣಮೂರ್ತಿ.
;Resize=(128,128))
;Resize=(128,128))